ರಾಮ ಸೇತು ವಿಚಾರಕ್ಕೆ ಕೈ ಹಾಕಿದ ಅಮೇಜಾನ್​ ಪ್ರೈಂ! ಅಕ್ಷಯ್​ ಕುಮಾರ್​ ಮೇಲೆ ದೊಡ್ಡ ಜವಾಬ್ದಾರಿ

|

Updated on: Mar 18, 2021 | 8:43 AM

ಮನರಂಜನೆ ಮಾತ್ರವಲ್ಲದೆ ಅದರ ಜೊತೆಗಿನ ವಿವಾದದ ಕಾರಣಕ್ಕಾಗಿಯೂ ಅಮೇಜಾನ್​ ಪ್ರೈಂ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ರಾಮ ಸೇತು ವಿಚಾರದಲ್ಲಿ ಈ ಸಂಸ್ಥೆ ಇನ್ನಷ್ಟು ಜಾಗೃತಿ ವಹಿಸಬೇಕಾಗುತ್ತದೆ.

ರಾಮ ಸೇತು ವಿಚಾರಕ್ಕೆ ಕೈ ಹಾಕಿದ ಅಮೇಜಾನ್​ ಪ್ರೈಂ! ಅಕ್ಷಯ್​ ಕುಮಾರ್​ ಮೇಲೆ ದೊಡ್ಡ ಜವಾಬ್ದಾರಿ
ರಾಮ್​ ಸೇತು - ಅಮೇಜಾನ್​ ಪ್ರೈಂ ವಿಡಿಯೋ
Follow us on

ಓಟಿಟಿ ಪ್ಲಾಟ್​ಫಾರ್ಮ್​ಗಳ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲಾಕ್​ಡೌನ್​ ಬಳಿಕವಂತೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸುವ ಹವ್ಯಾಸ ಹೆಚ್ಚು ಮಾಡಿಕೊಂಡಿದ್ದಾರೆ. ವೆಬ್​ ಸಿರೀಸ್​ಗಳ ನಿರ್ಮಾಣದಲ್ಲೂ ಗಣನೀಯ ಏರಿಕೆ ಆಗಿದೆ. ಅಷ್ಟೇ ಅಲ್ಲ, ದೊಡ್ಡ ದೊಡ್ಡ ಸಿನಿಮಾಗಳಿಗೆ ಬಂಡವಾಳ ಹೂಡಲು ಓಟಿಟಿ ಸಂಸ್ಥೆಗಳು ಮುಂದೆ ಬರುತ್ತಿವೆ. ಬಾಲಿವುಡ್​ನ ಬಹುನಿರೀಕ್ಷಿತ ‘ರಾಮ್​ ಸೇತು’ ಚಿತ್ರಕ್ಕೆ ಹಣ ಹೂಡಲು ‘ಅಮೇಜಾನ್​ ಪ್ರೈಂ ವಿಡಿಯೋ’ ಸಜ್ಜಾಗಿದೆ.

ಅಕ್ಷಯ್​ ಕುಮಾರ್​ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ರಾಮ್​ ಸೇತು ಕೂಡ ಒಂದು. ಕಳೆದ ವರ್ಷ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಈ ಸಿನಿಮಾವನ್ನು ಘೋಷಿಸಿದರು. ಆಗಿನಿಂದಲೇ ‘ರಾಮ್​ ಸೇತು’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತು. ಈ ಚಿತ್ರಕ್ಕೆ ಕೇಪ್​ ಆಫ್​ ಗುಡ್​ ಫಿಲ್ಮ್ಸ್​, ಅಬಂಡಾನ್ಷಾ ಎಂಟರ್​ಟೇನ್​ಮೆಂಟ್​ ಮತ್ತು ಲೈಕಾ ಪ್ರೊಡಕ್ಷನ್ಸ್​ನಂತಹ ದೊಡ್ಡ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ. ಅವುಗಳ ಜೊತೆಗೆ ಈಗ ‘ಅಮೇಜಾನ್​ ಪ್ರೈಂ ವಿಡಿಯೋ’ ಕೂಡ ಕೈ ಜೋಡಿಸುತ್ತಿದೆ.

‘ಅಮೇಜಾನ್​ ಪ್ರೈಂ ವಿಡಿಯೋ’ ನಿರ್ಮಾಣ ಮಾಡುತ್ತಿರುವ ಮೊದಲ ಬಾಲಿವುಡ್​ ಸಿನಿಮಾ ಇದಾಗಲಿದೆ. ಈಗಾಗಲೇ ಅಮೇಜಾನ್​ನಲ್ಲಿ ಬಿಡುಗಡೆಯಾದ ‘ಪಾತಾಳ್​ ಲೋಕ್’, ‘ತಾಂಡವ್​’ ಮುಂತಾದ ವೆಬ್​ ಸಿರೀಸ್​ಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಅಂಶಗಳಿವೆ ಎಂಬ ಆರೋಪ ಕೇಳಿಬಂದಿತ್ತು. ಈಗ ‘ರಾಮ್​ ಸೇತು’ ರೀತಿಯ ಸೂಕ್ಷ್ಮ ಕಥೆಯುಳ್ಳ ಚಿತ್ರವನ್ನು ನಿರ್ಮಾಣ ಮಾಡಲು ಈ ಸಂಸ್ಥೆ ಕೈ ಹಾಕಿದೆ. ಹಾಗಾಗಿ ಇನ್ನಷ್ಟು ಜಾಗೃತಿಯಿಂದ ಸಿನಿಮಾ ಮಾಡಬೇಕಾದ ಹೊಣೆಗಾರಿಕೆ ಇದೆ.

ರಾಮ ಸೇತು ನಿಜವೋ ಅಥವಾ ಕಾಲ್ಪನಿಕವೋ ಎಂಬ ಚರ್ಚೆ ಬಹಳ ಕಾಲದಿಂದಲೂ ನಡೆಯುತ್ತಲೇ ಇದೆ. ಅದೇ ಅಂಶವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ. ಒಂದು ವೇಳೆ ಏನಾದರೂ ವಿವಾದ ಮಾಡಿಕೊಂಡರೆ ಅದು ಅಕ್ಷಯ್​ ಕುಮಾರ್​ ವೃತ್ತಿಜೀವನಕ್ಕೆ ತೊಂದರೆ ಆಗಲಿದೆ. ಹಾಗಾಗಿ ಅವರ ಮೇಲೆ ಕೂಡ ಜವಾಬ್ದಾರಿ ಹೆಚ್ಚಿದೆ.

ಜಾಕ್ವಲಿನ್​ ಫರ್ನಾಂಡಿಸ್​ ಮತ್ತು ನುಸ್ರತ್​ ಬರುಚಾ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಮಾ.18ರಂದು ಅಯೋಧ್ಯದಲ್ಲಿ ‘ರಾಮ್​ ಸೇತು’ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಅದಕ್ಕಾಗಿ ಅಕ್ಷಯ್​ ಕುಮಾರ್​ ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ಅಭಿಷೇಕ್​ ಶರ್ಮಾ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.