
ಈಗ ಮಳೆಗಾಲ, ಕರಾವಳಿಯ ಜಡಿಮಳೆಗೆ ನಾನಾ ಬಗೆಯ ಸೋಂಕುಗಳು ಬಾಧಿಸುವ ಅಪಾಯ ಹೆಚ್ಚು. ಮತ್ತೊಂದು ಕಡೆ ಕೊರೊನಾ ಕೂಡ ಬಾಧಿಸುತ್ತಿದೆ. ಇಂತಹ ವೈರಸ್ ಗಳ ಬಾಧೆಯನ್ನು ತಪ್ಪಿಸಲು ನಮ್ಮ ಪೂರ್ವಿಕರು ವಿಶಿಷ್ಟ ಆಚರಣೆಯೊಂದನ್ನು ಚಾಲ್ತಿಗೆ ತಂದಿದ್ದರು. ಅದೇ.. ಆಷಾಢ ಅಮಾವಾಸ್ಯೆಯಲ್ಲಿ ಕಹಿ ಕುಡಿಯುವ ಪದ್ಧತಿ.
ದೇಹವನ್ನು ರೋಗ ನಿರೋಧಕವಾಗಿಸಲು ಆಟಿ ಅಮವಾಸ್ಯೆ ಸೂಕ್ತ
ಹಾಗಂತಲೇ ಆಚರಣೆಯೊಂದನ್ನು ಚಾಲ್ತಿಗೆ ತಂದಿದ್ದರು. ಈ ದಿನ ಸೂರ್ಯೋದಯಕ್ಕೂ ಮುನ್ನ ಮನೆಯ ಪುರುಷರು ಬೇಗನೇ ಎದ್ದೇಳಬೇಕು. ಮೊದಲೇ ಗುರುತಿಸಿಟ್ಟ ಪಾಲೆ ಮರದ ತೊಗಟೆಯನ್ನು ಕೆತ್ತಿ ತೆಗೆಯಬೇಕು. ಅದೂ ಕೂಡ ಯಾವುದೇ ಲೋಹ ಸ್ಪರ್ಶ ಮಾಡದೆ ಕಲ್ಲಿನಿಂದಲೇ ಜಜ್ಜಿ ತೊಗಟೆ ತೆಗೆಯೋದು ಪದ್ಧತಿ. ಆಟಿ ಅಮವಾಸ್ಯೆಯಂದು ಪಾಲೆಕೆತ್ತೆಯಲ್ಲಿ ಔಷಧೀಯ ಗುಣಗಳು ಸನ್ನಿಹಿತವಾಗಿತ್ತೆ ಅನ್ನೋದು ನಂಬಿಕೆ.
ಇನ್ನೊಂದು ಇಂಟರೆಸ್ಟಿಂಗ್ ವಿಷಯ ಗೊತ್ತಾ? ಬೆಳಕು ಹರಿಯುವ ಮುನ್ನ ತೊಗಟೆ ತೆಗೆಯಲು ಪುರುಷರು ಬೆತ್ತಲೆಯಾಗಿ ಹೋಗುವ ಕ್ರಮವಿತ್ತಂತೆ! ಯಾಕಂದ್ರೆ ಬೆತ್ತಲೆ ದೇಹದ ಮುಂದೆ ಯಾವುದೇ ಪ್ರೇತಪಿಶಾಚಿಗಳು ನಿಲ್ಲಲ್ಲ ಅನ್ನೋದು ತುಳುವರ ವಿಶ್ವಾಸ. ಈಗೆಲ್ಲಾ ಬಟ್ಟೆ ಧರಿಸಿಯೇ ಹೋಗುತ್ತಾರೆ. ಆದರೆ ಮೂಲ ಸಂಪ್ರದಾಯಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಕಿತ್ತು ತಂದ ತೊಗಟೆಯನ್ನು ಜಜ್ಜಿ, ಅದಕ್ಕೆ ಓಮ, ಮಜ್ಜಿಗೆ, ಬೆಳ್ಳುಳ್ಳಿ ಹಾಕಿ ಕಷಾಯವನ್ನು ತಯಾರಿಸುತ್ತಾರೆ. ಈ ಕಷಾಯಕ್ಕೆ ಬೆಣಚುಕಲ್ಲಿನ ಮೂಲಕ ಒಗ್ಗರಣೆ ಕೊಟ್ಟು ಕುಡಿಯೋದು ಕ್ರಮ.
ಕರಾವಳಿ ಜಿಲ್ಲೆ ಉಡುಪಿ ಅನೇಕ ಆಚರಣೆಗಳ ತವರು ಎಂದು ಕರೆಸಿಕೊಳ್ಳುತ್ತೆ. ಜನಪದ ಸಂಸ್ಕೃತಿಯ ಜೊತೆಗೆ ವೈಜ್ಞಾನಿಕ ಮಹತ್ವಗಳನ್ನು ಸಾರುವ ಆಷಾಢ ಅಮವಾಸ್ಯೆ ನಮ್ಮ ಪೂರ್ವಿಕರು ಬಿಟ್ಟು ಹೋದ ಒಂದು ಅಪರೂಪದ ಆಚರಣೆ. ಕೊರೊನಾ ಕಾಲದಲ್ಲಿ ಅದಕ್ಕೆ ಹೆಚ್ಚಿನ ಮಹತ್ವ ಬಂದಿದೆ.
-ಹರೀಶ್ ಪಾಲೆಚ್ಚಾರ್