ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕಳೆದ ವಾರ ತೀವ್ರ ಪ್ರತಿಭಟನೆ, ದೊಂಬಿ, ಗಲಭೆಗಳು ನಡೆದಿದ್ದವು. ಪರಿಸ್ಥಿತಿ ಶಾಂತವಾಗುತ್ತಿದೆ ಎನ್ನುತ್ತಿರುವಾಗ ಇಂದು ದಿಢೀರನೆ ಮಂಗಳೂರು ನಗರದಾದ್ಯಂತ ಕೇಬಲ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.
ಬೆಳಗ್ಗೆಯಷ್ಟೇ ಮಂಗಳೂರು ಗಲಭೆ ಅಸಲಿಯತ್ತು ಬಗ್ಗೆ ಪೊಲೀಸರು ಸಿಸಿಟಿವಿ ಸಾಕ್ಷ್ಯಗಳನ್ನು ಬಹಿರಂಗಗೊಳಿಸಿದ್ದರು. ಮಂಗಳೂರಿನಲ್ಲಿ ನಡೆದ ಗಲಭೆ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ವಿಡಿಯೋ ದೃಶ್ಯಾವಳಿಗಳೂ ಎಲ್ಲಾ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದ ವ್ಯಾಪಕವಾಗಿ ಪ್ರಸಾರವಾಗುತ್ತಿತ್ತು. ಇದರ ಬೆನ್ನಲ್ಲೇ ಮಂಗಳೂರು ನಗರದಾದ್ಯಂತ ಕೇಬಲ್ ಸಂಪರ್ಕ ಸ್ಥಗಿತಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಬಲ್ ಆಪರೇಟರ್ಗಳು, UPS ಸಮಸ್ಯೆಯಿಂದ ಕೇಬಲ್ ಸಂಪರ್ಕ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.