ಸದನದಲ್ಲಿ ಹಾಸ್ಯ ಚಟಾಕಿ: ಸಿದ್ದರಾಮಯ್ಯ, ರೇವಣ್ಣ ಬಟ್ಟೆ ಖರೀದಿ ಬಗ್ಗೆ ಬಾರೀ ಚರ್ಚೆ.. ಬಟ್ಟೆ ಕಳಚುವ ಬಗ್ಗೆ ಮಾತಾನಾಡಬೇಡಿ ಎಂದ ರಮೇಶ್​ ಕುಮಾರ್!

ಶಾಸಕ ರಮೇಶ್ ಕುಮಾರ್ ಬಟ್ಟೆ ಹಾಕೋ ವಿಚಾರಾಗಿ ಇಡೀ ದಿನ ಮಾತನಾಡಿ, ಆದ್ರೆ ಬಟ್ಟೆ ಕಳಚುವ ಬಗ್ಗೆ ಬೇಡ ಅಂತಾ ಹಾಸ್ಯ ಚಟಾಕಿ ಹಾರಿಸಿದ್ರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ಸದನದಲ್ಲಿ ಹಾಸ್ಯ ಚಟಾಕಿ: ಸಿದ್ದರಾಮಯ್ಯ, ರೇವಣ್ಣ ಬಟ್ಟೆ ಖರೀದಿ ಬಗ್ಗೆ ಬಾರೀ ಚರ್ಚೆ.. ಬಟ್ಟೆ ಕಳಚುವ ಬಗ್ಗೆ ಮಾತಾನಾಡಬೇಡಿ ಎಂದ ರಮೇಶ್​ ಕುಮಾರ್!
ಸಿದ್ದರಾಮಯ್ಯ

Updated on: Mar 20, 2021 | 7:33 AM

ಬೆಂಗಳೂರು: ಬೆಲೆ ಏರಿಕೆ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಬಟ್ಟೆ ಖರೀದಿಯ ಬಗ್ಗೆ ತಮಾಷೆ ನಡೆಯಿತು. ಸಿದ್ದರಾಮಯ್ಯ ಎಷ್ಟು ಬಟ್ಟೆ ಖರೀದಿಸಿದ್ರು..? ಯಾರಿಗೆಲ್ಲಾ ಖರೀದಿ ಮಾಡ್ತಾರೆ? ಅಂತಾ ಕೆಲವರು ಪ್ರಶ್ನೆ ಕೇಳಿದ್ರೆ. ಬಟ್ಟೆಯ ಬಗ್ಗೆ ಕಾರಜೋಳ ‘ಕಲರ್ ‘ ಪಂಚ್ ಕೊಟ್ರು. ಇನ್ನು ಶಾಸಕ ರಮೇಶ್ ಕುಮಾರ್ . ಬಟ್ಟೆ ಹಾಕೋದರ ಬಗ್ಗೆ ಮಾತನಾಡೋಣ ಆದ್ರೆ ಬಟ್ಟೆ ಬಿಚ್ಚುವುದರ ಬಗ್ಗೆ ಬೇಡವೆಂದಿದ್ದು ಇಡೀ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿತು.

ರಮೇಶ್ ಕುಮಾರ್ ಮಾತಿಗೆ ನಗೆಗಡಲಲ್ಲಿ ತೇಲಿದ ಸದನ..
ನಿನ್ನೆ ನಡೆದ ವಿಧಾನಸಭಾ ಕಲಾಪದಲ್ಲಿ ಹಾಸ್ಯದ ರಸದೌತಣವೇ ಹರಿಯಿತು. ತೈಲ ಬೆಲೆ‌ ಏರಿಕೆ ಕುರಿತು ನಿಲುವಳಿ ಮಂಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಚರ್ಚಿಸಲು ಸ್ಪೀಕರ್ ಅವಕಾಶ ಕೊಟ್ರು. ಈ ವೇಳೆ ಮಾತಾಡ್ತಾ ಮಾತಾಡ್ತಾ ಸಿದ್ದರಾಮಯ್ಯ, ನಾನು ದಾರಿಯಲ್ಲಿ ಓಡಾಡುವಾಗ ಅಂಗಡಿಗಳ ಕಡೆ ನೋಡ್ತೇನೆ, ಅಂಗಡಿಗಳಿಗೆ ಯಾರು ಹೋಗೋಕೆ ಆಗ್ತಿಲ್ಲ, ಕೊಂಡುಕೊಳ್ಳೋಕೆ ಜನರಿಗೆ ಶಕ್ತಿ ಇಲ್ಲ, ಯಾರೋ ರೇವಣ್ಣನಂತಹವರು ಹೋಗ್ತಾರೆ ಅಷ್ಟೇ ಅಂದ್ರು.

ನಮ್ಮ ಬಟ್ಟೆ ನಾವೇ ತಗೋತೇವೆ..
ಆಗ ಎಂಟ್ರಿಯಾದ ಸಚಿವ ಬಸವರಾಜ್ ಬೊಮ್ಮಾಯಿ ರೇವಣ್ಣನವರದ್ದು ದೊಡ್ದ ಬೇಡಿಕೆಗಳಿಲ್ಲ, ಯಾವ ಅಂಗಡಿಗೆ ಹೋಗಬಹುದು ನೀವೇ ಹೇಳಿ ಅಂದ್ರು. ಅದಕ್ಕೂ ಕೂಡ ಸಿದ್ದರಾಮಯ್ಯ ಕಾಮಿಡಿ ಮಾಡುತ್ತಲೇ ರೇವಣ್ಣಗೆ ಅವರ ಮನೆಯವ್ರೇ ತಂದುಕೊಡ್ತಾರೆ ಬಿಡಿ ಅಂದ್ರು. ಬಳಿಕ ಮಾತಾನಾಡಿದ ಸಿದ್ದರಾಮಯ್ಯ, ನಮ್ಮ ಬಟ್ಟೆ ನಾವೇ ತಗೋತೇವೆ, ಮೊನ್ನೆ ಕೂಡ ಹೋಗಿದ್ದೆ, ಟಿವಿಯಲ್ಲೆಲ್ಲಾ ಬಂದ್ಬಿಡ್ತು ಅಂದ್ರು.

ಸ್ವಲ್ಪ ದಪ್ಪಾಗಿದ್ದೇನೆ, ಆದ್ರೂ ನಡೆಯುತ್ತದೆ..
ಈ ವೇಳೆ ಜಾಸ್ತಿ ಬಟ್ಟೆ ತಗೊಂಡ್ರಿ, ಅದು ಯಾರ್ಯಾರಿಗೆ ಅಂತಾ ಸ್ಪೀಕರ್ ಪ್ರಶ್ನಿಸಿದ್ರು. ಇದಕ್ಕೆ ಸಿದ್ದರಾಮಯ್ಯ, ಯಾರಿಗೂ ಇಲ್ಲ ನಂಗೊಬ್ಬನಿಗೆ ಎಂದರು. ನನ್ನ ಬಟ್ಟೆ ನಾನೇ ಯಾವಾಗಲೂ ತಗೋಳೋದು ಅಂತಾ ಹೇಳಿದ ಸಿದ್ದರಾಮಯ್ಯಗೆ ಸ್ಪೀಕರ್, ಅದರ ಗುಟ್ಟೇನು? ಅಂತಾ ಮತ್ತೊಂದು ಪ್ರಶ್ನೆ ಹಾಕಿದ್ರು. ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, 90 ಸೆಟ್ ತಗೊಂಡ್ರಂತೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಹೊಲಿಸಿದ್ರೇ ಹೆಚ್ಚು ಕಡಿಮೆ ಆಗಲ್ವಾ ಎಂದು ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪ್ರಶ್ನೆ ಹಾಕಿದ್ರು. ಇದಕ್ಕೆ ಸಿದ್ದರಾಮಯ್ಯ, ನಾನು ಧೋತಿಗಳನ್ನು ತಗೊಂಡಿದ್ದು, ಅವೇನು ಬದಲಾಗಲ್ಲ, ಸ್ವಲ್ಪ ದಪ್ಪಾಗಿದ್ದೇನೆ, ಆದ್ರೂ ನಡೆಯುತ್ತದೆ, ಏನು ಸಮಸ್ಯೆ ಆಗಲ್ಲ ಎಂದರು.

ತೆಳ್ಳಗಾಗಿರೋದು ಪ್ರಶ್ನೆ ಅಲ್ಲ, ಮುದುಕ ಆಗಿದ್ದಾರೆ..
ಈ ವೇಳೆ ಮಧ್ಯಪ್ರವೇಶಿಸಿದ ಕಾರಜೋಳ ಕಲರ್ ಪಂಚ್ ಕೊಟ್ರು. ದಪ್ಪಗಾಗಿರೋದು, ತೆಳ್ಳಗಾಗಿರೋದು ಪ್ರಶ್ನೆ ಅಲ್ಲ, ಮುದುಕ ಆಗಿದ್ದಾರೆ. ಅದಕ್ಕೆ ಚೆನ್ನಾಗಿ ಕಾಣಿಸಬೇಕು ಅಂತಾ ಕಲರ್ ಬಟ್ಟೆ ತಗೋಳೋಕೆ ಶುರು ಮಾಡಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅದು‌ ನಿಜಾನೇ, ಕಾರಜೊಳರನ್ನ ನೋಡ್ತಿದ್ದೆ, ಯಾವಾಗಲೂ ಕಲರ್ ಕಲರ್ ಬಟ್ಟೆ ಹಾಕ್ಕೊಂಡು ಬರೋರು, ಅದಕ್ಕೆ ನಾನು ಯಾಕೆ ಹಾಕ್ಕೊಂಡು ಬರಬಾರದು ಅಂತಾ ತಗೊಂಡೆ ಎಂದು ಕಾರಜೋಳ ಕಲರ್‌ ಪಂಚ್‌ಗೆ ಸಿದ್ದರಾಮಯ್ಯ ಮತ್ತೊಂದು ಪಂಚ್ ಕೊಟ್ರು.

ಬಟ್ಟೆ ಕಳಚಿಕೊಳ್ಳುವಂತಹ ಹಲವು ನಿದರ್ಶನಗಳನ್ನ ನೋಡ್ತಿದ್ದೇವೆ..
ಫೈನಲ್ ಆಗಿ ಎಂಟ್ರಿಯಾದ ಶಾಸಕ ರಮೇಶ್ ಕುಮಾರ್ ಬಟ್ಟೆ ಹಾಕೋ ವಿಚಾರಾಗಿ ಇಡೀ ದಿನ ಮಾತನಾಡಿ, ಆದ್ರೆ ಬಟ್ಟೆ ಕಳಚುವ ಬಗ್ಗೆ ಬೇಡ ಅಂತಾ ಹಾಸ್ಯ ಚಟಾಕಿ ಹಾರಿಸಿದ್ರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು. ಈಗ ಸಿದ್ದರಾಮಯ್ಯ ಬಟ್ಟೆ ಹಾಕ್ಕೋಳೋದು ಮಾನ ಮುಚ್ಚಿಕೊಳ್ಳೋಕೆ, ಆದ್ರೆ ಈಗೀಗ ಬಟ್ಟೆ ಕಳಚಿಕೊಳ್ಳುವಂತಹ ಹಲವು ನಿದರ್ಶನಗಳನ್ನ ನೋಡ್ತಿದ್ದೇವೆ, ಸಮಾಜದಲ್ಲಿ ಅದೆಲ್ಲಾ ಆಗಬಾರದು ಅಂದ್ರು. ಒಟ್ನಲ್ಲಿ ಬೆಲೆ ಏರಿಕೆ ವಿಚಾರವಾಗಿ ಶುರುವಾದ ಚರ್ಚೆ ಬಟ್ಟೆ ಖರೀದಿ ವಿಚಾರ ಕಲಾಪದಲ್ಲಿ ಹಾಸ್ಯದ ರಸದೌತಣ ನೀಡಿತು. ಎಲ್ಲರೂ ಪಕ್ಷಭೇದ ಮರೆತು ಹಾಸ್ಯದ ಸಂಭಾಷಣೆಯನ್ನ ಎಂಜಾಯ್ ಮಾಡಿದ್ರು.

ಇದನ್ನೂ ಓದಿ:ಸಿದ್ದರಾಮಯ್ಯ. ಈಶ್ವರಪ್ಪ, ಬೊಮ್ಮಾಯಿ, ರೇವಣ್ಣ ಹಾಗೂ ಸ್ಪೀಕರ್‌ ಸದನದಲ್ಲಿ ಅದ್ಹೆಂಗೆ ಪರಸ್ಪರರ ಕಾಲೆಳೆದ್ರು ಗೊತ್ತಾ..

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us