ಆಸ್ಟ್ರೇಲಿಯಾದ ಬೌನ್ಸಿ ವಿಕೆಟ್​ಗಳ ಮೇಲೆ ಇಂಡಿಯನ್ ಬ್ಯಾಟ್ಸ್​ಮನ್ ಪರದಾಡಲಿದ್ದಾರೆ: ಅಖ್ತರ್ | Indian batters will struggle on Australia’s bouncy wickets: Akhtar

ಪಾಕಿಸ್ತಾನದ ಕೆಲ ಮಾಜಿ ಮತ್ತು ಹಾಲಿ ಕ್ರಿಕೆಟ್ ಆಟಗಾರರಿಗೆ ಭಾರತೀಯ ಆಟಗಾರರ ಕಾಲೆಳೆಯುವುದು, ಅವರ ದೌರ್ಬಲ್ಯಗಳನ್ನು ಎತ್ತಿ ತೋರಿಸುವುದು ಒಂದು ಕಾಯಕವಾಗಿಬಿಟ್ಟಿದೆ. ಹಾಗೆ ನೋಡಿದರೆ, ಪಾಕಿಸ್ತಾನದಲ್ಲಿ ಭಾರತದ ಆಟಗಾರರನ್ನು ಮನಸಾರೆ ಇಷ್ಟಪಡುವ ಲಕ್ಷಾಂತರ ಜನಗಳಿದ್ದಾರೆ. ಪಾಕ್​ ಬ್ಯಾಟಿಂಗ್ ಲೆಜೆಂಡ್ ಜಹೀರ್ ಅಬ್ಬಾಸ್, ಟೀಮ್ ಇಂಡಿಯಾದ ಓಪನರ್ ರೋಹಿತ್ ಶರ್ಮ ಅವರ ಆಟವನ್ನು ಅದೆಷ್ಟು ಇಷ್ಟ ಪಡುತ್ತಾರೆಂದರೆ, ತಮ್ಮ ದೇಶದ ಈಗಿನ ಆಟಗಾರರಿಗೆ ಅವರ ವಿಡಿಯೊಗಳನ್ನು ನೋಡಿ ಬ್ಯಾಟ್ ಮಾಡುವುದು ಹೇಗೆ ಅನ್ನೋದು ಕಲಿಯಿರಿ ಅಂತ ಸಲಹೆ ನೀಡುವಷ್ಟರ […]

ಆಸ್ಟ್ರೇಲಿಯಾದ ಬೌನ್ಸಿ ವಿಕೆಟ್​ಗಳ ಮೇಲೆ ಇಂಡಿಯನ್ ಬ್ಯಾಟ್ಸ್​ಮನ್ ಪರದಾಡಲಿದ್ದಾರೆ: ಅಖ್ತರ್ | Indian batters will struggle on Australias bouncy wickets: Akhtar
ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2020 | 3:45 PM

ಪಾಕಿಸ್ತಾನದ ಕೆಲ ಮಾಜಿ ಮತ್ತು ಹಾಲಿ ಕ್ರಿಕೆಟ್ ಆಟಗಾರರಿಗೆ ಭಾರತೀಯ ಆಟಗಾರರ ಕಾಲೆಳೆಯುವುದು, ಅವರ ದೌರ್ಬಲ್ಯಗಳನ್ನು ಎತ್ತಿ ತೋರಿಸುವುದು ಒಂದು ಕಾಯಕವಾಗಿಬಿಟ್ಟಿದೆ. ಹಾಗೆ ನೋಡಿದರೆ, ಪಾಕಿಸ್ತಾನದಲ್ಲಿ ಭಾರತದ ಆಟಗಾರರನ್ನು ಮನಸಾರೆ ಇಷ್ಟಪಡುವ ಲಕ್ಷಾಂತರ ಜನಗಳಿದ್ದಾರೆ. ಪಾಕ್​ ಬ್ಯಾಟಿಂಗ್ ಲೆಜೆಂಡ್ ಜಹೀರ್ ಅಬ್ಬಾಸ್, ಟೀಮ್ ಇಂಡಿಯಾದ ಓಪನರ್ ರೋಹಿತ್ ಶರ್ಮ ಅವರ ಆಟವನ್ನು ಅದೆಷ್ಟು ಇಷ್ಟ ಪಡುತ್ತಾರೆಂದರೆ, ತಮ್ಮ ದೇಶದ ಈಗಿನ ಆಟಗಾರರಿಗೆ ಅವರ ವಿಡಿಯೊಗಳನ್ನು ನೋಡಿ ಬ್ಯಾಟ್ ಮಾಡುವುದು ಹೇಗೆ ಅನ್ನೋದು ಕಲಿಯಿರಿ ಅಂತ ಸಲಹೆ ನೀಡುವಷ್ಟರ ಮಟ್ಟಿಗೆ ಅವರು ಹೋಗಿದ್ದಾರೆ.

ಓಕೆ, ಪಾಕಿಸ್ತಾನದ ಮಾಜಿ ವೇಗದ ಶೋಯೆಬ್ ಅಖ್ತರ್, ಖಂಡಿತವಾಗಿಯೂ ಜಹೀರ್ ಆಲ್ಲ ಮತ್ತಯ ಯಾವತ್ತೂ ಆಗಲಾರರು. ಕೆಲವು ಇಂಡಿಯನ್ ಆಟಗಾರರ ಬಗ್ಗೆ ಅಖ್ತರ್ ಆಗಾಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ನಿಜವಾದರೂ, ಅವರಿಗೆ ಇಲ್ಲಿನ ಆಟಗಾರರ ಬಗ್ಗೆ ನೆಗೆಟಿವ್ ಕಾಮೆಂಟ್​ಗಳನ್ನು ಮಾಡುವುದೆಂದರೆ ಎಲ್ಲಿಲ್ಲದ ಖುಷಿ. ಭಾರತ ಮತ್ತು ಆಸ್ಟ್ರೇಲಿಯ ನಡುವೆ ನವೆಂಬರ್ 27ರಿಂದ ಪ್ರಾರಂಭವಾಗಲಿರುವ ಸೀಮಿತ ಓವರ್ ಮತ್ತು ಟೆಸ್ಟ್ ಸರಣಿಯ ಬಗ್ಗೆ ಇಡೀ ಕ್ರಿಕೆಟ್ ವಿಶ್ವವೇ ಉತ್ಸುಕವಾಗಿದೆ. ಹಲವಾರು ಮಾಜಿ ಆಟಗಾರರು ಸರಣಿ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.

ಆಸ್ಟ್ರೇಲಿಯ ಹೇಗೆ ಭಾರತವನ್ನು ಸೋಲಿಸಬಹುದು ಎನ್ನುವುದರ ಬಗ್ಗೆ ಆಖ್ತರ್ ಜಾಸ್ತಿ ತಲೆ ಕೆಡಿಸಿಕೊಂಡಿರುವಂತಿದೆ. ಅವರು ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾಗೆ ವೇಗದ ಬೌಲಿಂಗ್​ಗೆ ನೆರವಾಗುವ ಮತ್ತು ಬೌನ್ಸಿ ವಿಕೆಟ್​ಗಳನ್ನು ತಯಾರಿಸುವಂತೆ ಸಲಹೆಯನ್ನೂ ನೀಡಿದ್ದಾರೆ. ಭಾರತೀಯ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಖ್ತರ್, ಆಸ್ಟ್ರೇಲಿಯಾದ ಬೌನ್ಸಿ ವಿಕೆಟ್​ಗಳ ಮೇಲೆ ಭಾರತದ ಬ್ಯಾಟ್ಸ್​ಮನ್​ಗಳು ರನ್ ಗಳಿಸಲು ಪರದಾಡಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

‘‘ಆಸ್ಟ್ರೇಲಿಯ ಟೀಮಿನಲ್ಲಿ, ಮಿಶೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಜೊಶ್ ಹೆಜೆಲ್​ವುಡ್ ಮೊದಲಾದ ಕ್ವಾಲಿಟಿ ವೇಗದ ಬೌಲರ್​ಗಳಿದ್ದಾರೆ. ಅವರು ವಿಶ್ವದ ಯಾವುದೇ ಟೀಮಿನ ಬ್ಯಾಟಿಂಗನ್ನು ಧ್ವಂಸಗೊಳಿಸಬಲ್ಲರು ಹಾಗೆಯೇ ಅವರ ದೇಹಗಳನ್ನೂ ಸಹ. ಈ ಕಾರಣಕ್ಕಾಗೇ ಅವರು ವೇಗದ ಬೌಲಿಂಗ್​ಗೆ ನೆರವಾಗುವ ಮತ್ತು ಬೌನ್ಸಿ ವಿಕೆಟ್​ಗಳನ್ನು ತಯಾರಿಸಬೇಕು. ಟೆಸ್ಟ್ ಸರಣಿಯಲ್ಲಿ ಪಿಚ್​ಗಳು ಹೇಗೆ ವರ್ತಿಸಲಿವೆ ಅನ್ನುವುದನ್ನು ನೋಡಲು ಕಾತುರನಾಗಿದ್ದೇನೆ. ಕಳೆದ ಬಾರಿ ಸರಣಿ ಸೋತಿರುವುದರಿಂದ ಆಸ್ಸೀ ವೇಗಿಗಳು ಈ ಸಲ ಭಾರತೀಯ ಬ್ಯಾಟ್ಸ್​ಮನ್​ಗಳ ಬದುಕನ್ನು ನರಕವಾಗಿಸಲಿದ್ದಾರೆ. ಡ್ರೈವ್ ಮಾಡಲು ದುರ್ಬಲ ಎಸೆತಗಳು ಭಾರತದ ಬ್ಯಾಟ್ಸ್​ಮನ್​ಗಳಿಗೆ ಸಿಗಲಾರವು, ಮತ್ತು ಅಲ್ಲಿನ ಪಿಚ್​ಗಳಲ್ಲಿ ಆನ್ ದಿ ಅಪ್ ಡ್ರೈವ್ ಮಾಡುವುದು ಸುಲಭವಲ್ಲ, ಎಸೆತಗಳನ್ನು ದೇಹದ ಹತ್ತಿರದಿಂದ ಆಡಬೇಕಾಗುತ್ತದೆ’’ ಎಂದು ಅಖ್ತರ್ ಹೇಳಿದ್ದಾರೆ.

‘‘ಭಾರತ ಕೇವಲ ಒಂದಿಬ್ಬರು ಬ್ಯಾಟ್ಸ್​ಮನ್​ಗಳನ್ನು ಮಾತ್ರ ನೆಚ್ಚಿಕೊಂಡಿದೆ, ಅದರಲ್ಲೂ, ಮೊದಲ ಟೆಸ್ಟ್ ನಂತರ ನಾಯಕ ವಿರಾಟ್ ಕೊಹ್ಲಿ ವಾಪಸ್ಸಾಗಲಿದ್ದಾರೆ. ಟೀಮಿನ ಮಿಡ್ಲ್​ ಆರ್ಡರ್ ಶಿಥಿಲವಾಗಿದೆ. ಇನ್ನಿಂಗ್ಸ್ ಆರಂಭದಲ್ಲಿ ಒಂದೆರಡು ವಿಕೆಟ್​ಗಳನ್ನು ಬೇಗ ಕಳೆದುಕೊಂಡರೆ, ಮಧ್ಯಮ ಕ್ರಮಾಂಕದ ಆಟಗಾರರು ಒತ್ತಡಕ್ಕೆ ಸಿಲುಕುವುದು ನಿಶ್ಚಿತ,’’ ಅಂತ ಆಖ್ತರ್ ಹೇಳಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us