ಶಿವಮೊಗ್ಗ: ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಸಿದ್ದರಾಮಯ್ಯ ಮಾತಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಇನ್ನೂ ಹಲವರು ನಾಯಕರು ಸೋತಿದ್ದಾರೆ. ವಿಧಾನಸಭೆ, ಲೋಕಸಭೆಯಲ್ಲಿ ಸೋತಾಗ ಏಕೆ ಮಾತಾಡಿಲ್ಲ. ಪರಮೇಶ್ವರ್, ಖರ್ಗೆ ಸೋತಾಗ ಏಕೆ ಚರ್ಚೆಗೆ ಬರಲಿಲ್ಲ ಎಂದು ಸೋಲಿಗೆ ಒಳಸಂಚು ಕಾರಣವೆಂಬ ಸಿದ್ದರಾಮಯ್ಯರ ಹೇಳಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.
‘ಸಿದ್ದರಾಮಯ್ಯ ಗುಂಪುಗಾರಿಕೆಗೆ ನಿನ್ನೆ ಗುದ್ದಲಿ ಪೂಜೆ ಮಾಡಿದ್ದಾರೆ’
ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಮೇಲೆ ವಿಶ್ವಾಸವಿಲ್ಲ. ಸಿದ್ದರಾಮಯ್ಯ ಗುಂಪುಗಾರಿಕೆಗೆ ನಿನ್ನೆ ಗುದ್ದಲಿ ಪೂಜೆ ಮಾಡಿದ್ದಾರೆ. ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ. ಸಿದ್ದು ಅವರದ್ದು ದುರಹಂಕಾರದ ಮಾತು. ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಹಾಕಬೇಕು. ಅಸಲಿಗೆ, ಸಿದ್ದರಾಮಯ್ಯಗೆ ಪ್ರಬುದ್ಧ ರಾಜಕಾರಣಿಯ ಲಕ್ಷಣಗಳೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಟಾಂಗ್ ಕೊಟ್ಟರು.
‘ಯಾರೋ ಕಟ್ಟಿದ ಹುತ್ತದಲ್ಲಿ ಸಿದ್ದರಾಮಯ್ಯ ಹಾವಾಗಿ ವಾಸಿಸುತ್ತಿದ್ದಾರೆ’ ರಾಜ್ಯದದಲ್ಲಿ ದೊಂಬಿ ಹಬ್ಬಿಸಲು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕೋಡಿಹಳ್ಳಿ ಮೂಲಕ ಅಶಾಂತಿ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯರನ್ನ ಸೋಲಿಸಿದವರ ಹೆಸರನ್ನು ಹೇಳಲಿ. ಅವರ ಹೆಸರು ಹೇಳಿದರೆ ಇವರ ವಿಷಯ ಬಯಲಾಗುತ್ತದೆ. ಯಾರೋ ಕಟ್ಟಿದ ಹುತ್ತದಲ್ಲಿ ಇವರು ಹಾವಾಗಿ ವಾಸಿಸುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯದ ದೊಡ್ಡ ಕುತಂತ್ರಿ ರಾಜಕಾರಣಿ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
‘JDS ಸೇರಿ ಇತರೆ ರಾಷ್ಟ್ರೀಯ ಪಕ್ಷಗಳಿಗೆ ಭವಿಷ್ಯ ಇರಲ್ಲ’ ಭವಿಷ್ಯದಲ್ಲಿ ದೇಶ, ರಾಜ್ಯದಲ್ಲಿ ಬಿಜೆಪಿ ಮಾತ್ರ ಇರುತ್ತದೆ. JDS ಸೇರಿ ಇತರೆ ರಾಷ್ಟ್ರೀಯ ಪಕ್ಷಗಳಿಗೆ ಭವಿಷ್ಯ ಇರಲ್ಲ ಎಂದು ಈ ವೇಳೆ ಹೇಳಿದರು. ಜೊತೆಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸ್ವಲ್ಪ ವಿಳಂಬವಾಗುತ್ತಿದೆ. ಅವರ ಆರೋಗ್ಯ ಸರಿಯಾದ ಬಳಿಕ ಚರ್ಚೆ ನಡೆಯುತ್ತದೆ. ಹೈಕಮಾಂಡ್ ಜೊತೆ ಸಿಎಂ ಚರ್ಚಿಸಿ ವಿಸ್ತರಣೆ ಮಾಡುತ್ತಾರೆ. ಸಿಎಂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
‘ನಮ್ಮವರೇ ಕೆಲವರಿಗೆ ನಾನು ಮತ್ತೆ CM ಆಗೋದು ಬೇಕಿರಲಿಲ್ಲ..ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು’