
ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಎರಡನೇ ಸೂಪರ್ ಓವರ್ ಆಡಿ ಜಯಗಳಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ಟೀಮಿನ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ಗೆ ಸೂಪರ ಓವರ್ಗೆ ಮೊದಲು ಅವರ ಜೊತೆ ಆಟಗಾರ ಮಾಯಾಂಕ್ ಅಗರ್ವಾಲ್ ಮೇಲೆ ಕೋಪ ಬಂದಿತ್ತಂತೆ. ಯಾಕೆ ಗೊತ್ತಾ? ಕ್ರೀಸಿಗೆ ಹೋಗುವಾಗ ಮಾಯಾಂಕ್, ‘ಮೊದಲು ಸ್ಟ್ರೈಕ್ ತಗೊಳ್ಳೋದು ಯಾರು? ನೀವಾ, ನಾನಾ?,’ ಎಂದು ಗೇಲ್ರನ್ನು ಕೇಳಿದ್ದರಂತೆ.
ಮ್ಯಾಚ್ ಮುಗಿದ ನಂತರ ಮಾಯಾಂಕ್ ಜೊತೆ ನಡೆದ ವಿನೋದಮಯ ಸಂವಾದದಲ್ಲಿ ಗೇಲ್, ‘‘ನಾವಿಬ್ಬರು ಬ್ಯಾಟಿಂಗ್ಗೆ ಹೋಗುವಾಗ, ಮೊದಲು ಸ್ಟ್ರೈಕ್ ತಗೊಳ್ಳೋದು ಯಾರು ಅಂತ ನೀನು ಕೇಳಿದಾಗ ನನಗೆ ಕೋಪ ಬಂದಿತ್ತು. ನಿಂಗೆ ಯೂನಿವರ್ಸ್ ಬಾಸ್ ಯಾರಂತ ಗೊತ್ತಿಲ್ವಾ? ಬಾಸ್ ಯಾವತ್ತಿಗೂ ಬಾಸ್ ಕಣಮ್ಮಾ. ಅದಕ್ಕೆಂದೇ ನಾನು ಮೊದಲು ಸ್ಟ್ರೈಕ್ ತಗೊಂಡಿದ್ದು, ಗೊತ್ತಾಯ್ತಾ?,’’ ಎಂದು ಗೇಲಿ ಮಾಡಿದರು.
ಪಂದ್ಯ ಗೆಲ್ಲಲು ಸೂಪರ್ ಓವರ್ನಲ್ಲಿ 12 ರನ್ ಗಳಿಸಬೇಕಿದ್ದ ಪಂಜಾಬ್ಗೆ, ಮುಂಬೈ ಟೀಮಿನ ಟ್ರೆಂಟ್ ಬೌಲ್ಟ್ ಅವರ ಮೊದಲ ಎಸೆತವನ್ನೇ ಗೇಲ್ ಲಾಗ್ ಆನ್ ಮೇಲೆ ಸಿಕ್ಸರ್ ಬಾರಿಸಿದರು. ಮರು ಎಸೆತದಲದಲಿ ಒಂದು ರನ್ ಪಡೆದು ನಾನ್ ಸ್ಟ್ರೈಕರ್ ಎಂಡ್ಗೆ ಬಂದರು. ನಂತರದ ಎಸೆತಗಳಲ್ಲಿ ಮಾಯಾಂಕ್ ಎರಡು ಬೌಂಡರಿಗಳನ್ನು ಬಾರಿಸಿ ಪಂಜಾಬ್ಗೆ ಅತ್ಯಗತ್ಯವಾಗಿದ್ದ ಎರಡು ಅಂಕಗಳನ್ನು ದೊರಕಿಸಿದರು.
ಅದಕ್ಕೆ ಮೊದಲು ನಡೆದ ಸೂಪರ್ ಓವರ್ನಲ್ಲಿ ಆಡಲು ಬಂದಿದ್ದ ನಿಕೊಲಾಸ್ ಪೂರನ್ ಮತ್ತು ನಾಯಕ ಕೆ ಎಲ್ ರಾಹುಲ್ 5 ರನ್ ಮಾತ್ರ ಗಳಿಸಿದ್ದರು. ಆದರೆ ಮೊಹಮ್ಮದ್ ಶಮಿ ನಂಬಲಸದಳ ರೀತಿಯಲ್ಲಿ ಸೂಪರ್ ಓವರನ್ನು ಬೌಲ್ ಮಾಡಿ ಅದನ್ನ ಡಿಫೆಂಡ್ ಮಾಡಿದರು ಅಂತ ಗೇಲ್ ಹೇಳಿದರು.
‘‘ನನ್ನ ಎಣಿಕೆಯಲ್ಲಿ, ನಿಸ್ಸಂದೇಹವಾಗಿ ಶಮಿ ಮ್ಯಾನ್ ಆಫ್ ದಿ ಮ್ಯಾಚ್. ರೋಹಿತ್ ಶರ್ಮ ಮತ್ತು ಕ್ವಿಂಟನ್ ಡಿ ಕಾಕ್ರಂಥ ಬ್ಯಾಟ್ಸ್ಮನ್ಗಳೆದರು 5 ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ. ಶಮಿಯ ಆ ಓವರ್ ಅತ್ಯಮೋಘ ಮತ್ತು ಅಸಾಮಾನ್ಯವಾದದ್ದು. ಸತತವಾಗಿ ಮತ್ತು ಅಷ್ಟೇ ನಿಖರವಾಗಿ ಹಾಗೆ ಯಾರ್ಕರ್ಗಳನ್ನು ಎಸೆಯುವುದನ್ನು ನಾನು ಇದಕ್ಕಿಂತ ಮುಂಚೆ ನೋಡಿಲ್ಲ. ಮಾಯಾಂಕ್ ಸಹ ಫೀಲ್ಡಿಂಗ್ ಮಾಡುವಾಗ 5ರನ್ಗಳನ್ನು ಉಳಿಸಿದ. ಟೀಮಿನ ಎಲ್ಲ ಅಟಗಾರರು ವಿಸ್ಮಯಗೊಳಿಸುವ ಪ್ರದರ್ಶನವನ್ನು ಮೈದಾನದಲ್ಲಿ ನೀಡಿದರು. ನಾವಿಂದು ಇತಿಹಾಸದ ಮತ್ತು ಗೆದ್ದ ಟೀಮಿನ ಭಾಗವಾಗಿರುವುದಕ್ಕೆ ಸಂತೋಷವೆನಿಸುತ್ತಿದೆ,’’ ಎಂದು ಗೇಲ್ ಹೇಳಿದರು.