ನವ ದೆಹಲಿ: ವಿಶ್ವಸಂಸ್ಥೆ ಸ್ಥಾಪನೆಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ2016ರ ಬಳಿಕ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮಂಡಳಿಯನ್ನುದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಮಂತ್ರವನ್ನು ಪುನರುಚ್ಚರಿಸಿದರು.
ಪೌಷ್ಟಿಕ ಆಹಾರ, ವಿದ್ಯುತ್, ಶಿಕ್ಷಣ ಕ್ಷೇತ್ರಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಭಾರತ ಒತ್ತು ನೀಡಿದೆ. ಮುಂದಿನ ಐದು ವರ್ಷಗಳಲ್ಲಿ ಶೇಕಡಾ ನೂರರಷ್ಟು ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. 70 ಮಿಲಿಯನ್ ಗ್ರಾಮೀಣ ಮಹಿಳೆಯರು ಭಾರತದಲ್ಲಿ ಸ್ವ ಸಹಾಯ ಸಂಘಗಳ ಮೂಲಕ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ. ಸ್ವಚ್ಛತೆ ಹಾಗೂ ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ವಿರುದ್ಧ ಅಂದೋಲನ ನಡೆಸುವ ಮೂಲಕ ಪರಿಸರದ ಬಗ್ಗೆ ಇರುವ ಭಾರತದ ಬದ್ದತೆಯನ್ನ ಪ್ರದರ್ಶಿಸಿದ್ದೇವೆ ಎಂದು ಮೋದಿ ವಿವರಿಸಿದರು.
ಕಳೆದ ಆರು ವರ್ಷಗಳಲ್ಲಿ 400 ಮಿಲಿಯನ್ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಮೂಲಕ ಜನರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಭಾರತದಲ್ಲಿರುವ ಎಲ್ಲರಿಗೂ ಮನೆ ಯೋಜನೆ ಜಾರಿ ಮಾಡಿದ್ದು ಈ ಮೂಲಕ 14 ಮಿಲಿಯನ್ ಹೊಸ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಭಾರತದ ಯೋಜನೆಗಳನ್ನು ವಿಶ್ವ ಸಂಸ್ಥೆಯ ಸದಸ್ಯರಿಗೆ ವಿವರಿಸಿದರು.
ಕೊರೊನಾ ಬಗ್ಗೆ ಮಾತನಾಡಿದ ಮೋದಿ, ಕೊರೊನಾ ಎಲ್ಲ ರಾಷ್ಟ್ರಗಳ ಶಕ್ತಿಯನ್ನು ಪರೀಕ್ಷಿಸಿದೆ. ಭಾರತ ಕೊರೊನಾ ವಿರುದ್ಧದ ಹೋರಾಟವನ್ನು ಜನರ ಅಂದೋಲನವಾಗಿ ಮಾಡಿದೆ. ಕೊರೊನಾ ವಿರುದ್ಧ ಪ್ಯಾಕೇಜ್ ಘೋಷಣೆ ಮಾಡಿ ಜನರಲ್ಲಿ ಆತ್ಮ ಸ್ಥೈರ್ಯ ತುಂಬಿದ್ದೇವೆ. ಆತ್ಮನಿರ್ಭರ ಮೂಲಕ ದೇಶದಲ್ಲಿ ಸ್ವಾವಲಂಬನೆಗೆ ಕರೆ ನೀಡಿದ್ದು ಇದನ್ನು ಸಾಧಿಸುವುದರಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ದೇಶಗಳಿಗೆ ವಿವರಿಸಿದರು.
ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆ ಹೊಂದಿರುವ ಭಾರತ ನೆರೆಹೊರೆಯ ರಾಷ್ಟ್ರಗಳಲ್ಲಿ ಯಾವುದೇ ವಿಪತ್ತು ಸಂಭವಿಸಿದರೂ ಭಾರತ ಕ್ಷಿಪ್ರವಾಗಿ ನೆರವಿಗೆ ಧಾವಿಸಿದೆ ಹಾಗೂ ಮುಂದೆಯೂ ದಾವಿಸುತ್ತೆ, ವಿಶ್ವದ 150 ದೇಶಗಳಿಗೆ ನಾವು ನೆರವು ನೀಡಿದ್ದೇವೆ ಎಂದು ಇತರ ದೇಶಗಳೆಡೆ ಭಾರತಕ್ಕಿರುವ ಕಾಳಜಿಯನ್ನು ಮೋದಿ ವ್ಯಕ್ತಪಡಿಸಿದರು.
ವಿಶ್ವದಲ್ಲಿ ಭಾರತವು ತನ್ನ ಜವಾಬ್ದಾರಿಯನ್ನ ಮರೆತಿಲ್ಲ ಎಂದ ಮೋದಿ, ಕೊರೊನಾ ಸಂಕಷ್ಟದಲ್ಲಿ ಇತರರಿಗೆ ವೈದ್ಯಕೀಯ ನೆರವು ನೀಡಿದ್ದೇವೆ. ಭಾರತವು ಬಹುಪಕ್ಷವಾದದಲ್ಲಿ ನಂಬಿಕೆ ಇಟ್ಟಿದ್ದು, ವಿಶ್ವಸಂಸ್ಥೆಯಲ್ಲಿ ಸುಧಾರಣೆ ಆಗಬೇಕು, ಭಾರತ ಕೂಡ ವಿಶ್ವಸಂಸ್ಥೆಯ 50 ಸ್ಥಾಪಕ ರಾಷ್ಟ್ರಗಳಲ್ಲಿ ಒಂದು, ಇಂದು ವಿಶ್ವಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳಿವೆ ಅದರಲ್ಲೂ ಬಹುಪಕ್ಷೀಯವಾದ ಇಂದು ಸವಾಲು ಎದುರಿಸುತ್ತಿದ್ದು ವಿಶ್ವಸಂಸ್ಥಯಲ್ಲಿ ಸುಧಾರಣೆಯಾಗಬೇಕು ಎಂದು ಪ್ರತಿಪಾದಿಸಿದರು.
Our motto is 'Sabka Saath, Sabka Vikaas, Sabka Vishwas' – meaning 'Together, for everyone's growth, with everyone's trust'. This resonates with the core SDG principle of leaving no one behind: PM @narendramodi
— PMO India (@PMOIndia) July 17, 2020