ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್​ಎಸ್ಟೇಟ್​ ಉದ್ಯಮ

ಕೊರೊನಾ ಸೋಂಕಿನಿಂದಾಗಿ ದೇಶದಲ್ಲಿ ಮನೆ ಮಾರಾಟದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 47ರಷ್ಟು ಕುಸಿತ ಕಂಡಿದೆ ಎಂದು ವರದಿಯೊಂದು ಹೇಳಿದೆ.

ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್​ಎಸ್ಟೇಟ್​ ಉದ್ಯಮ
ಸಾಂದರ್ಭಿಕ ಚಿತ್ರ

Updated on: Dec 21, 2020 | 2:10 PM

ನವದೆಹಲಿ: ದೇಶದಲ್ಲಿ ಮನೆ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 47ರಷ್ಟು ಕುಸಿತ ಕಂಡಿದೆ ಎಂದು ವರದಿಯೊಂದು ಹೇಳಿದೆ. ಇನ್ನು, ಬೆಂಗಳೂರು ನಗರದಲ್ಲಿಯೇ ರಿಯಲ್​​ ಎಸ್ಟೇಟ್​ ಉದ್ಯಮ ಶೇ 51 ಇಳಿಕೆ ಕಂಡಿದೆ. ಕೊರೊನಾ ವೈರಸ್​ನಿಂದ ಬಹುತೇಕ ಎಲ್ಲಾ ಕ್ಷೇತ್ರಗಳು ಹೊಡೆತ ತಿಂದಿವೆ. ಮನೆ ಮಾರಾಟ ಕಡಿಮೆ ಆಗಲು ಕೂಡ ಇದೇ ನೇರ ಕಾರಣ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ರಿಯಲ್​ ಎಸ್ಟೇಟ್​ಗಳಿಗೆ ಸಂಬಂಧಿಸಿ ಸಲಹೆ ನೀಡುವ ಸಂಸ್ಥೆ ಅನರಾಕ್  ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ವರದಿ ಸಿದ್ಧಪಡಿಸಲು ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್​, ಚೆನ್ನೈ ಮತ್ತು ಕೋಲ್ಕತ್ತಾ ನಗರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕೊರೊನಾ ವೈರಸ್​ನಿಂದಾಗಿ ಮನೆ ಕೊಳ್ಳುವವರ ಸಂಖ್ಯೆ ಈ ಏಳು ನಗರಗಳಲ್ಲಿ ಕಡೆಮೆ ಆಗಿವೆ. ಈ ವರ್ಷ 1.38 ಲಕ್ಷ ಮನೆಗಳು ಮಾರಾಟ ಆಗಿದ್ದರೆ, 2019ರಲ್ಲಿ 2.61 ಲಕ್ಷ ಮನೆಗಳು ಮಾರಾಟವಾಗಿದ್ದವು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇನ್ನು ಈ ಏಳು ನಗರಗಳಲ್ಲಿ ಹೊಸ ಮನೆ ನಿರ್ಮಾಣದ ಪ್ರಮಾಣ ಕೂಡ ಕಡಿಮೆ ಆಗಿದೆ. ಈ ಬಾರಿ ಕೇವಲ 1.28 ಲಕ್ಷ ಹೊಸ ಮನೆಗಳು ತಲೆ ಎತ್ತಿದ್ದರೆ ಕಳೆದ ವರ್ಷದ ಹೊಸದಾಗಿ ನಿರ್ಮಾಣವಾದ ಮನೆಗಳ ಸಂಖ್ಯೆ 2.37 ಲಕ್ಷ. ಹೀಗಾಗಿ, ಈ ಬಾರಿ ಮನೆ ಕಟ್ಟುವ ಪ್ರಮಾಣವೂ ಗಣನೀಯವಾಗಿ ಕುಸಿತ ಕಂಡಿದೆ.

ಮಾರ್ಚ್​ ತಿಂಗಳಲ್ಲಿ ಕೊರೊನಾ ವೈರಸ್ ಸೋಂಕು ಉಲ್ಬಣಿಸಿತ್ತು. ಇದರ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಹೀಗಾಗಿ, ಮನೆ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ನಿಂತಿತ್ತು. ಆದರೆ, ಕಳೆದ ಎರಡು ತ್ರೈಮಾಸಿಕದಲ್ಲಿ ರಿಯಲ್​ ಎಸ್ಟೇಟ್​ ಉದ್ಯಮ ಸಾಕಷ್ಟು ಚೇತರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಕಡಿಮೆಯಾಗದ ಗೃಹ ಸಾಲ ಬಡ್ಡಿದರ
ಮನೆ ನಿರ್ಮಾಣ ಕಾರ್ಯ ಕುಸಿತ ಕಂಡ ಬೆನ್ನಲ್ಲೇ ಸಾಕಷ್ಟು ಬ್ಯಾಂಕ್​ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿವೆ. ಹೀಗಾಗಿ, ಸಾಕಷ್ಟು ಜನರು ಮನೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಎಲ್ಲವೂ ಸಮಸ್ಥಿತಿಗೆ ಬರಬಹುದು ಎನ್ನುವ ಅಭಿಪ್ರಾಯ ಅನರಾಕ್​ ಸಂಸ್ಥೆಯದ್ದು.

ಬೆಂಗಳೂರಿಗೆ ಎರಡನೇ ಸ್ಥಾನ
ಈ ಬಾರಿ ಅತಿ ಹೆಚ್ಚು ಮನೆ ಮಾರಾಟವಾದ ಸಾಲಿನಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ಇಲ್ಲಿ, 44,320 ಮನೆಗಳು ಮಾರಾಟವಾಗಿವೆ. ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, 24,910 ನಿವಾಸಗಳು ಸೇಲ್​ ಆಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 50,450 ಮನೆಗಳು ಮಾರಾಟವಾಗಿದ್ದವು. ಈ ಮೂಲಕ ಬೆಂಗಳೂರಿನಲ್ಲಿ ಮನೆ ಮಾರಾಟ ಪ್ರಮಾಣ ಶೇ 51ರಷ್ಟು ಇಳಿಕೆ ಆದಂತಾಗಿದೆ.

ಕೊರೊನಾ ತಂದ ಸಂಕಷ್ಟ: ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಕುಟುಂಬಸ್ಥರು ಆತ್ಮಹತ್ಯೆಗೆ ಶರಣು

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us