ಇನ್ನೂ ಆರದ ಕಿಚ್ಚು.. ಇಂದೂ ಕೂಡ ಸಾಲು ಸಾಲು ಪ್ರತಿಭಟನೆ
ಮೇಲಿಂದ ಮೇಲೆ ಆಗ್ತಿರೋ ಬಂದ್ಗಳಿಂದ ಬಸವಳಿದಿರೋ ಬೆಂಗಳೂರು ಇಂದು ಮತ್ತೊಂದು ಬಂದ್ ಕಾಣಲಿದೆ. ಒಂದೆಡೆ ರೈತ ಸಂಘಟನಗೆಳು ಪಾದಯಾತ್ರೆ, ರಾಜಭವನಕ್ಕೆ ಮುತ್ತಿಗೆಗೆ ರೆಡಿಯಾಗಿದ್ರೆ, ಮತ್ತೊಂದೆಡೆ ಸರ್ಕಾರಿ ನೌಕರರಾಗಬೇಕು ಅನ್ನೋ ಅಸ್ತ್ರ ಹಿಡಿದು ಸಾರಿಗೆ ನೌಕರರು ಇಂದು ರಸ್ತೆಗೆ ಇಳಿಯಲಿದ್ದಾರೆ.

ಬೆಂಗಳೂರು: ಮರಾಠ ನಿಗಮದ ವಿರುದ್ಧ ಕರ್ನಾಟಕ ಬಂದ್ ಆಯ್ತು.. ಕೃಷಿ ಮಸೂಧೆ ವಿರೋಧಿಸಿ ಭಾರತ್ ಬಂದ್ ಕೂಡಾ ನಡೀತು.. ನಿನ್ನೆ ಬಾರುಕೋಲು ಬೀಸುತ್ತಾ ರಸ್ತೆಗಿಳಿದ ರೈತರು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಇದ್ರ ನಡುವೆ ಇಂದು ಮೂರು ಪ್ರತಿಭಟನೆಗಳು ನಡೆಯಲಿವೆ.
ಪ್ರತಿಭಟನೆ-1 ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿಂದು: ಕೃಷಿ ತಿದ್ದುಪಡಿ ಮಸೂದೆ ವಿರುದ್ಧ ಅನ್ನದಾತರ ಕಿಚ್ಚು ಮತ್ತಷ್ಟು ಜೋರಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತೊಮ್ಮೆ ಪಾದಯಾತ್ರೆ ನಡೆಸುತ್ತೇವೆ ಅಂಥಾ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. ಇಂದು KSR ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ.
ಪ್ರತಿಭಟನೆ-2 ಐಕ್ಯ ಹೋರಾಟ ಸಮಿತಿಯಿಂದ ರಾಜಭವನಕ್ಕೆ ಮುತ್ತಿಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಪಾದಯಾತ್ರೆ ನಡುವೆ ಐಕ್ಯ ಸಮಿತಿಯು ಇಂದು ರಸ್ತೆಗಿಳಿಯಲಿದೆ. ಕೃಷಿ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟಿಸಲಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದ ಐಕ್ಯ ಸಮಿತಿ, ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಮೌರ್ಯ ವೃತ್ತದಿಂದ ರಾಜಭವನದ ವರೆಗೆ ಪ್ರತಿಭಟನಾ ಮೆರವಣಿಗೆ ಇರಲಿದೆ. ಐದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಪ್ರತಿಭಟನೆ-3 ಬಸ್ ಬಿಟ್ಟು ರಸ್ತೆಗೆ ಇಳಿಯಲಿದ್ದಾರೆ ಸಾರಿಗೆ ನೌಕರರು! ಬಂದ್, ಪಾದಯಾತ್ರೆ ನಡುವೆ ಇಂದು ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರು ರಸ್ತೆಗೆ ಇಳಿಯಲಿದ್ದಾರೆ. ಸಂಸ್ಥೆಯಡಿ ಕೆಲಸ ಮಾಡ್ತಿರೋ ನಮ್ಮನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ರಸ್ತೆಗೆ ಇಳಿಯಲಿದ್ದಾರೆ. KSRTC, BMTC, NWKRTC, NEKRTC ಸೇರಿದಂತೆ ಎಲ್ಲಾ ನಿಗಮದ ಒಂದೂವರೆ ಲಕ್ಷ ಸಿಬ್ಬಂದಿ ಬಸ್ನಿಂದ ಕೆಳಗಿಳಿದು ಪ್ರತಿಭಟನೆ ನಡೆಸಲಿದ್ದಾರೆ. ಅದ್ರಲ್ಲೂ ಬೆಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ.
ಇಂದು ಸಾರಿಗೆ ಬಂದ್! ‘ಸಾರಿಗೆ ನೌಕರರ ನಡಿಗೆ-ಸರ್ಕಾರಿ ನೌಕರರಾಗುವ ಕಡೆಗೆ’ ಅನ್ನೋ ಘೋಷಣೆಯೊಂದಿಗೆ ಸಾರಿಗೆ ಸಿಬ್ಬಂದಿ ಇಂದು ರಸ್ತೆಗೆ ಇಳಿಯಲಿದ್ದಾರೆ. ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಕಾಲ್ನಡಿಗೆ ಜಾಥಾ ಆರಂಭವಾಗಲಿದ್ದು, ವಿಧಾನಸೌಧದವರೆಗೂ ಜಾಥಾ ನಡೆಸಲಿದ್ದಾರೆ.
ಇನ್ನು ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ರೈತರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಂಜಾವಧೂತ ಶ್ರೀ ಸೇರಿದಂತೆ ಹಲವು ಬೆಂಬಲ ಕೊಟ್ಟಿದ್ದಾರೆ . ಡ್ಯೂಟಿ ಬಿಟ್ಟು ಸಿಬ್ಬಂದಿ ಪ್ರತಿಭಟನೆಗೆ ಇಳಿಯುತ್ತಿರೋದ್ರಿಂದ ಇಂದು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಆಗೋ ಸಾಧ್ಯತೆ ಇದೆ.
ಬಿಎಂಟಿಸಿ ನೌಕರರ ರಜೆ ಕ್ಯಾನ್ಸಲ್! ಇನ್ನು ನೌಕರರು ರಸ್ತೆಗೆ ಇಳಿಯೋದ್ರಿಂದ ಯಾವುದೇ ಸಮಸ್ಯೆ ಆಗೋದಿಲ್ಲ. ಎಂದಿನಂತೆ ಎಲ್ಲಾ ಬಸ್ಗಳು ರಸ್ತೆಗೆ ಇಳಿಯಲಿವೆ ಅಂತಾ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ. ಎಂದಿನಂತೆ ಇಂದು 6 ಸಾವಿರ ಬಸ್ಗಳು ರಸ್ತೆಗೆ ಇಳಿಯಲಿವೆ ಎಂದಿದ್ದಾರೆ.
ಮತ್ತೊಂದಡೆ ಬಿಎಂಟಿಸಿ ನೌಕರರ ಇಂದಿನ ರಜೆಯನ್ನ ರದ್ದು ಮಾಡಿರೋದಾಗಿ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತಾಧಿಕಾರಿ ಡಾ.ಕೆ ಅರುಣ್ ಆದೇಶಿಸಿದ್ದಾರೆ. ಕರ್ತವ್ಯಕ್ಕೆ ಗೈರಾದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಒಟ್ನಲ್ಲಿ ಹಲವು ಬಂದ್ಗಳ ನಡುವೆ ಇಂದು ಸಾರಿಗೆ ನೌಕರರು ಕೂಡಾ ರಸ್ತೆಗೆ ಇಳಿಯುತ್ತಿದ್ದು, ಮೆಜೆಸ್ಟಿಕ್, ವಿಧಾನಸೌಧ ಸುತ್ತಾಮುತ್ತಾ ಟ್ರಾಫಿಕ್ ಜಾಮ್ ಆಗೋ ಸಾಧ್ಯತೆ ಇದೆ.
ಕರ್ನಾಟಕ ಬಂದ್ ಆಯ್ತು ಈಗ ರೈಲು ಬಂದ್ಗೆ ಕರೆ ನೀಡಿದ ವಾಟಾಳ್ ನಾಗರಾಜ್
Published On - 7:15 am, Thu, 10 December 20