
ವಿಜಯಪುರ: ಹೆರಿಗೆ ಮಾಡಿಸಿದ ವೈದ್ಯರು ಡ್ರೆಸ್ಸಿಂಗ್ ಬಟ್ಟೆಯನ್ನು ನನ್ನ ಹೊಟ್ಟೆಯಲ್ಲೇ ಬಿಟ್ಟಿದ್ದಾರೆ ಎಂದು ಮಹಿಳೆಯೋರ್ವರು ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ.
ಮುದ್ದೇಬಿಹಾಳ ಪಟ್ಟಣ ನಿವಾಸಿ ಶಾಹೀನ್ ಉತ್ನಾಳ್ ಎಂಬ ಮಹಿಳೆ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದರು. ನನಗೆ ಹೊಟ್ಟೆ ನೋವು ಬರಲು ಒಳಗಿರುವ ಬಟ್ಟೆಯೇ ಕಾರಣ. ಆರು ತಿಂಗಳ ಹಿಂದೆ ನನಗೆ ಹೆರಿಗೆ ಮಾಡಿಸಿದ ವೈದ್ಯರು ಡ್ರೆಸ್ಸಿಂಗ್ ಬಟ್ಟೆಯನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಕುಟುಂಬಸ್ಥರೂ ಇದೇ ಆರೋಪ ಮಾಡಿದ್ದಾರೆ.
ಜನನಾಂಗದಲ್ಲಿತ್ತು ಬಟ್ಟೆ !
ಹೊಟ್ಟೆನೋವಿನಿಂದ ದಾಖಲಾದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಜನನಾಂಗದಿಂದ ಬಟ್ಟೆ ತೆಗೆದಿದ್ದಾರೆ. ನಂತರ ಮಾಹಿತಿ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನಿಲ್ ಕುಮಾರ್ ಶೇಗುಣಸಿ, ಶಾಹೀನ್ಗೆ ಸಹಜ ಹೆರಿಗೆಯಾಗಿದೆ. ಆಕೆಯ ಹೊಟ್ಟೆಯಲ್ಲಿ ಯಾವ ಬಟ್ಟೆಯೂ ಇರಲಿಲ್ಲ. ಜನನಾಂಗದಲ್ಲಿ ಇತ್ತು. ಅದನ್ನು ಹೊರಗೆ ತೆಗೆಯಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತಜ್ಞ ವೈದ್ಯರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಮುದ್ದೇಬಿಹಾಳ ಆಸ್ಪತ್ರೆ