ಉಡುಪಿ: ಸುದೀಪ್ ಸಿನಿಮಾ ನೋಡಿ ಹೆಬ್ಬುಲಿ ಕಟ್ಟಿಂಗ್ ಮಾಡಿಸಿಕೊಂಡ ಹುಡುಗರನ್ನು ನೋಡಿದ್ವಿ. ಯಶ್ KGF ಸಿನಿಮಾ ನೋಡಿ ಗಡ್ಡ ಬಿಟ್ಟುಕೊಂಡ ಯುವಕರನ್ನು ನೋಡಿದ್ವಿ. ಪುನೀತ್ ಚಿತ್ರ ನೋಡಿ ಅವರಂತೆಯೇ ಡ್ಯಾನ್ಸ್ ಮಾಡೋರನ್ನ ಸಹ ನೋಡಿದ್ವಿ. ಹೀಗೆ, ಬಹಳಷ್ಟು ಮಂದಿ ಯುವಜನರು ಸಿನಿಮಾಗಳಿಂದ ಪ್ರತಿನಿತ್ಯ ಪ್ರಭಾವಿತರಾಗುತ್ತಾರೆ.
‘ಅಮ್ಮ ಐ ಲವ್ ಯು’ ಸಿನಿಮಾ ನೋಡಿ ಭಿಕ್ಷೆ ಬೇಡಲು ಹೊರಟಿದ್ದ! ಅಂತೆಯೇ, ದಿ. ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮ ಐ ಲವ್ ಯು’ ಸಿನಿಮಾ ನೋಡಿ, 48 ದಿನಗಳ ಕಾಲ ಭಿಕ್ಷೆ ಬೇಡಲು ಹೊರಟ 22 ವರ್ಷದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಸಿನಿಮಾದಲ್ಲಿ ತೋರಿಸಿದ್ದೇ ಸತ್ಯ ಎಂದು ತಿಳಿದ ಯುವಕ, ತನ್ನ ಕಷ್ಟಗಳ ಪರಿಹಾರಕ್ಕಾಗಿ ಭಿಕ್ಷಾಟನೆಗೆ ಇಳಿದಿದ್ದ. ಚಿತ್ರದುರ್ಗ ಮೂಲದವನಾದ ಯುವಕ ನಿರುದ್ಯೋಗ ಸಮಸ್ಯೆ ಎದುರಿಸಲಾಗದೆ ಹೀಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ನಗರದ ಶ್ರೀಕೃಷ್ಣ ಮಠದ ಸುತ್ತುಮುತ್ತ ಭಿಕ್ಷೆ ಬೇಡುತ್ತಿದ್ದ ಯುವಕನನ್ನು, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮತ್ತು ತಾರಾನಾಥ್ ಮೇಸ್ತ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದು ನಂತರ ಆತನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆ ಧರ್ಮಸ್ಥಳ ಕ್ಷೇತ್ರದ ಬಳಿಯೂ ಭಿಕ್ಷಾಟನೆಗೆ ಇಳಿದಿದ್ದ ಯುವಕ, ಊರೂರು ತಿರುಗುತ್ತಾ ಬೇಡಿ ತಿನ್ನುತ್ತಿದ್ದ ಎಂದು ತಿಳಿದುಬಂದಿದೆ.
ಜನರು ಸಿನಿಮಾ ನೋಡಿ ಹೆಚ್ಚು ಪ್ರಭಾವಿತರಾಗುತ್ತಾರೆ. ಸಿನಿಮಾದಲ್ಲಿ ಸೈನಿಕನಿಗೆ ಸಿಗುವ ಬೆಂಬಲ ನಿಜವಾದ ಸೈನಿಕನಿಗೆ ಸಿಗುವುದಿಲ್ಲ. ಸಿನಿಮಾದ ರೈತನಿಗೆ ಸಿಗುವ ಪ್ರೋತ್ಸಾಹ ನಿಜವಾದ ರೈತನಿಗೆ ಲಭಿಸುವುದಿಲ್ಲ. ಯುವಜನರು ಕಷ್ಟಗಳನ್ನು ಎದುರಿಸಲು ಕಲಿಯುತ್ತಿಲ್ಲ. ತಕ್ಷಣವೇ ಶ್ರೀಮಂತ ಬದುಕನ್ನು ಬಯಸುತ್ತಾರೆ. ಬದುಕಿನಲ್ಲಿ ಕಷ್ಟಪಟ್ಟು, ಸೋಲನ್ನು ಎದುರಿಸಿ ನಂತರ ಯಶಸ್ವಿಯಾದ ಹಿರಿಯರನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು ಎಂದು ಸಮಾಜ ಸೇವಕ ವಿಶು ಶೆಟ್ಟಿ ಹೇಳಿದ್ದಾರೆ.