ಬೆಂಗಳೂರು: ಕೊಲೆ ಕೇಸ್ನಲ್ಲಿ ಜೈಲಿಪಾಲಾದ ತಮ್ಮ ಗ್ಯಾಂಗ್ ಲೀಡರ್ನ ಜಾಮೀನಿನ ಮೇಲೆ ಬಿಡಿಸಲು ಆತನ ಸಹಚರರು ಹಫ್ತಾ ವಸೂಲಿಗೆ ಇಳಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ. ಸದ್ಯ, ಹಫ್ತಾ ವಸೂಲಿಗೆ ಯತ್ನಿಸಿದ್ದ 12 ಆರೋಪಿಗಳನ್ನು ಬಂಧಿಸಲಾಗಿದೆ. ಯಲಹಂಕ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.
ಬಂಧಿತರೆಲ್ಲರೂ ಪಾಲನಹಳ್ಳಿ ಪಾಪಣ್ಣನ ಸಹಚರರು. ಪ್ರಶಾಂತ್ ಕುಮಾರ್, ಸಂಜಯ್, ನವೀನ್, ಮಂಜುನಾಥ
ರಮೇಶ್, ಸ್ಯಾಮುಯಲ್, ಉಮೇಶ್, ಸುಬ್ರಮಣಿ, ಮಂಜುನಾಥ, ನಾಗರಾಜ, ರಮೇಶ್, ಸುರೇಶ್ ಬಂಧಿತ ಆರೋಪಿಗಳು.
ಏನಿದು ‘ಜಾಮೀನಿಗಾಗಿ ಹಫ್ತಾ ವಸೂಲಿ’ ಪ್ರಕರಣ? ಅಂದ ಹಾಗೆ, ಬಂಧಿತ ಆರೋಪಿಗಳ ಬಾಸ್ ಪಾಲನಹಳ್ಳಿ ಪಾಪಣ್ಣ ಮತ್ತು ಆತನ ಸಹಚರ ಸೈಕೋ ಸೋಮ ಕೊಲೆ ಕೇಸ್ ಒಂದರಲ್ಲಿ ಜೈಲುಪಾಲಾಗಿದ್ದಾರೆ. ಹಾಗಾಗಿ, ತಮ್ಮ ‘ಅಣ್ಣ’ನ ಮತ್ತು ಸೋಮನನ್ನು ಜಾಮೀನಿನ ಮೇಲೆ ಬಿಡಿಸಲು ಅವರ ಸಹಚರರು ಹಣಕ್ಕಾಗಿ ಹಫ್ತಾ ವಸೂಲಿಗೆ ಇಳಿದಿದ್ದರು. ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದರು. ಅಷ್ಟೇ ಅಲ್ಲ, ಹಣ ನೀಡಲು ಒಪ್ಪದ ರಮೇಶ್ ಎಂಬುವವರಿಗೆ ಚಾಕು ಸಹ ಇರಿದಿದ್ದರು. ಒಟ್ನಲ್ಲಿ, ತಮ್ಮ ‘ಅಣ್ಣ’ನನ್ನ ಬೇಲ್ ಮೇಲೆ ಬಿಡಿಸಲು ಯತ್ನಿಸಿದ ಆರೋಪಿಗಳು ಇದೀಗ ತಾವೇ ಜೈಲು ಸೇರಲಿದ್ದಾರೆ.