ಖಾದ್ಯಗಳ ಪರಿಮಳ ಹೆಚ್ಚಿಸುವ ಓಮದ ಕಾಳಿನಲ್ಲಿ ಅಡಗಿದೆ ಔಷಧೀಯ ಗುಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2024 | 2:40 PM

ಅಡುಗೆ ಮನೆಯಲ್ಲಿರುವ ಪ್ರತಿಯೊಂದು ಮಸಾಲೆ ಪದಾರ್ಥಗಳು ಅಡುಗೆಯ ರುಚಿ ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹೀಗಾಗಿ ನಮ್ಮ ಹಿರಿಯರು ಆಹಾರ ಸಮಸ್ಯೆಗಳು ಬಂದಾಗ ಈ ಮಸಾಲೆ ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದನ್ನು ತಯಾರಿಸಿ ಸೇವಿಸುತ್ತಿದ್ದದ್ದೇ ಹೆಚ್ಚು . ಓಮದ ಕಾಳಿನಲ್ಲಿ ಔಷಧೀಯ ಗುಣವು ಅಧಿಕವಾಗಿದ್ದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಶಮನ ಮಾಡುವ ಗುಣವನ್ನು ಹೊಂದಿದೆ.

ಖಾದ್ಯಗಳ ಪರಿಮಳ ಹೆಚ್ಚಿಸುವ ಓಮದ ಕಾಳಿನಲ್ಲಿ ಅಡಗಿದೆ ಔಷಧೀಯ ಗುಣ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಓಮದ ಕಾಳು ಕೂಡ ಒಂದು. ಖಾದ್ಯಗಳ ವಿಶಿಷ್ಟವಾದ ಪರಿಮಳವನ್ನು ಹೆಚ್ಚಿಸುವ ಈ ಓಮ ಕಾಳಿನಲ್ಲಿ ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣಾಂಶಗಳೂ ಹೇರಳವಾಗಿವೆ. ಆರೋಗ್ಯ ಸಮಸ್ಯೆಗಳು ಉಂಟಾದಾಗ ಅಡುಗೆ ಮನೆಯ ಡಬ್ಬಿಯಲ್ಲಿರುವ ಈ ಓಮದ ಕಾಳು ಅಥವಾ ಅಜ್ವೈನವು ಔಷಧಿಯಾಗಿ ಕೆಲಸ ಮಾಡುತ್ತವೆ.

* ಓಮದ ಕಾಳಿನ ಪುಡಿಯನ್ನು ವಸ್ತ್ರದಲ್ಲಿ ಕಟ್ಟಿ, ವಾಸನೆಯನ್ನು ತೆಗೆದುಕೊಳ್ಳುತ್ತಿದ್ದರೆ ನೆಗಡಿಯು ಕಡಿಮೆಯಾಗುತ್ತದೆ.

* ಒಂದು ಚಮಚ ಓಮದ ಕಾಳಿನ ಪುಡಿ ಮತ್ತು ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ ಬಿಸಿ ನೀರಿನಲ್ಲಿ ಬೆರೆಸಿ ಕುಡಿದರೆ ಹೊಟ್ಟೆನೋವು ಶಮನವಾಗುತ್ತದೆ.

* ಓಮ ಕಾಳು , ಸ್ವಲ್ಪ ಪ್ರಮಾಣದಲ್ಲಿ ಶುಂಠಿ, ಸೈಂಧವ ಲವಣ ಹಾಗೂ ಜಾಯಿಕಾಯಿ ಕುಟ್ಟಿ ಪುಡಿ ಮಾಡಿ ಸ್ವಲ್ಪ ಬಿಸಿ ನೀರಿನಲ್ಲಿ ಹಾಕಿಕೊಂಡು ಕುಡಿದರೆ ಹೊಟ್ಟೆನೋವಿಗೆ ಪರಿಣಾಮಕಾರಿಯಾದ ಔಷಧ.

* ಓಮದ ಕಾಳನ್ನು ಬಾಯಿಗೆ ಹಾಕಿ ಜಗಿದು ತಿನ್ನುವುದರಿಂದ ಬಾಯಿಯ ದುರ್ನಾತವು ದೂರವಾಗಿ ಹಲ್ಲಿನ ಸಮಸ್ಯೆಯು ದೂರವಾಗುತ್ತದೆ. ಹಾಗೂ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವುದು.

* ಓಮದ ಪುಡಿ, ಜೇಷ್ಠಮಧು ಪುಡಿ ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಒಂದು ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಕುಡಿಯುವುದರಿಂದ ರಕ್ತದ ಬೇಧಿಯ ಸಮಸ್ಯೆಯಿಂದ ಮುಕ್ತರಾಗಬಹುದು.

* ಓಮದ ಕಾಳಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಅಡಿಗೆ ನೋಡಾ ಬೆರೆಸಿ ಮಕ್ಕಳಿಗೆ ಕುಡಿಯಲು ಕೊಡುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರವಾಗುತ್ತದೆ.

* ಓಮದ ಕಾಳಿನ ಕಷಾಯ ತಯಾರಿಸಿ ಅದಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.

ಇದನ್ನೂ ಓದಿ: ವಯಾಗ್ರ ಮಾತ್ರೆ ಸೇವಿಸುತ್ತಿದ್ದರೆ ಮರೆವಿನ ಕಾಯಿಲೆಯ ಅಪಾಯದ ಮಟ್ಟ ತೀರಾ ಕಡಿಮೆ

* ಓಮದ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

* ಅರಶಿನ ಪುಡಿಯೊಂದಿಗೆ ಓಮದ ಕಾಳನ್ನು ನುಣ್ಣಗೆ ಅರೆದು ಕಜ್ಜಿಯ ಮೇಲೆ ಹಚ್ಚುವುದರಿಂದ ಕಜ್ಜಿ ಬೇಗನೆ ಗುಣ ಕಾಣುತ್ತದೆ.

* ಒಂದು ಚಮಚ ಓಮದ ಕಾಳನ್ನು ಬಾಣಲೆಗೆ ಹಾಕಿ ಹುರಿದು ಪುಡಿ ಮಾಡಿ, ಒಂದು ಲೋಟ ನೀರಿನಲ್ಲಿ ಹಾಕಿಕೊಂಡು ಕುಡಿದರೆ ಹೊಟ್ಟೆನೋವು ನಿವಾರಣೆಯಾಗುತ್ತದೆ.

* ಒಂದು ಚಮಚ ಓಮದ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.

* ಎರಡು ಗ್ರಾಂ ಓಮದ ಕಾಳಿನ ಪುಡಿ ಮತ್ತು ಒಂದು ಗ್ರಾಂ ಸೋಂಪಿನ ಪುಡಿಗೆ ಕಲ್ಲು ಸಕ್ಕರೆ ಪುಡಿ ಬೆರೆಸಿ ಬಿಸಿ ನೀರಿನಲ್ಲಿ ಹಾಕಿಕೊಂಡು ಕುಡಿದರೆ ವಾಯುಬಾಧೆ ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ