AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poornachandra Tejaswi Death Anniversary: ನಮ್ಮ ತೇಜಸ್ವಿ; ತೇಜಸ್ವಿಯವರ ಹಸಿವೆ ಮರೆಸಿದ ಆ ಸಂಗೀತ

Annana Nenapu : ‘ತೇಜಸ್ವಿಯವರು ನಮ್ಮೊಂದಿಗಿಲ್ಲದೆ ಹದಿನೈದು ವರ್ಷಗಳಾದವು’ ಇದೆಷ್ಟು ಸಮಂಜಸ? ತಮ್ಮಿಚ್ಛೆಯಂತೆ ಬದುಕಿ, ವಿಚಾರಪೂರ್ಣ ಕೊಡುಗೆ ನೀಡಿದವರು ಎಂದಿಗೂ ಚಿರಾಯು; ತೇಜಸ್ವಿಯವರ ಈ ಪುಸ್ತಕದ ಇಂಥ ಭಾಗ ತಮಗೆ ಆಗಾಗ ನೆನಪಾಗುತ್ತದೆ ಎಂದು ನಮ್ಮ ಪ್ರಿಯ ಓದುಗರು ಕಳಿಸಿದ್ದು ನಿಮ್ಮ ಓದಿಗೆ.

Poornachandra Tejaswi Death Anniversary: ನಮ್ಮ ತೇಜಸ್ವಿ; ತೇಜಸ್ವಿಯವರ ಹಸಿವೆ ಮರೆಸಿದ ಆ ಸಂಗೀತ
ಲೇಖಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಶಾಂತಲಾ ಸತೀಶ್
ಶ್ರೀದೇವಿ ಕಳಸದ
|

Updated on: Apr 05, 2022 | 11:40 AM

Share

Poornachandra Tejaswi Death Anniversary ; ಶಿವಮೊಗ್ಗದಲ್ಲಿ ನನಗಾದ ಸಂಗೀತದ ಸಂಪರ್ಕ ಎಂದರೆ ಇಷ್ಟೇ, ಭಾರತೀಯ ಸಂಗೀತದ ಯಾವ ಹಿನ್ನೆಲೆಯೂ ಇಲ್ಲದ ಶಾಮಣ್ಣ ಆಟದ ಸಾಮಾನುಗಳಂಥ ವಾದ್ಯಗಳನ್ನು ತಂದುಕೊಂಡು ಅವುಗಳಲ್ಲಿ ಹಾಡಿ ಬಾರಿಸಲು ಹೆಣಗುತ್ತಿದ್ದುದು, ಅವರ ಉದ್ದೇಶವೂ ಅಂತಿಮವಾಗಿ ಆಗ ಚಾಲ್ತಿಯಲ್ಲಿದ್ದ ಸಿನೆಮಾ ಹಾಡುಗಳನ್ನು ಬಾರಿಸುವುದೇ ಆಗಿತ್ತು. ಶಾಮಣ್ಣನ ಕುತೂಹಲ ಯಾವ ರೀತಿಯದೇ ಆಗಿರಲಿ ಅದೂ ಸಹ ನನಗೆ ಸಂಗೀತದ ಬಗ್ಗೆ ಸ್ವಲ್ಪವಾದರೂ ಅಭಿರುಚಿಯನ್ನು ಕೆರಳಿಸಲಿಲ್ಲ. ನನಗೆ ಸಂಗೀತದಲ್ಲಿ ಆಸಕ್ತಿ ಅಭಿರುಚಿ ಉಂಟಾಗಿದ್ದನ್ನು ಯೋಚಿಸಿದಾಗ ಇದು ಕಲಿತು ಬರುವ ಕಲೆಯೇ ಅಲ್ಲವೇನೋ ಎಂದೆನ್ನಿಸುತ್ತದೆ. ಯಾವತ್ತಿನಿಂದ ನನಗೆ ಸಂಗೀತದ ಬಗ್ಗೆ ಅದಮ್ಯ ಕುತೂಹಲ ಉಂಟಾಯ್ತು ಎನ್ನುವುದೂ ನನಗೆ ಸ್ಪಷ್ಟವಾಗಿ ಜ್ಞಾಪಕ ಇದೆ. ಆಗ ನಾನು ಶಿವಮೊಗ್ಗಾ ಓದು ಮುಗಿಸಿ ಮೈಸೂರಿಗೆ ಬಂದಿದ್ದೆ. ಆಗೊಮ್ಮೆ ಏನೋ ಕಾರಣಕ್ಕೆ ಶಿವಮೊಗ್ಗಾಕ್ಕೆ ಹೋಗಿದ್ದಾಗ ಮಧ್ಯಾಹ್ನದ ಬಿಸಿಲಿನಲ್ಲಿ ದುರ್ಗಿಗುಡಿ ರಸ್ತೆಯಲ್ಲಿ ನಡೆದುಹೋಗುತ್ತಿರಬೇಕಾದರೆ ಪಕ್ಕದ ಹೋಟೆಲಿನ ರೇಡಿಯೋದಿಂದ ಇದ್ದಕಿದ್ದಂತೆ ಅದ್ಭುತವಾದ ವಾದ್ಯಸಂಗೀತ ಹೊಮ್ಮಿತು!

ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದ ‘ಬುಲ್ ಬುಲ್ ತರಂಗ್’ ಅಧ್ಯಾಯದಿಂದ ತಮಗಿಷ್ಟವಾದ ಭಾಗ ಕಳಿಸಿದ್ದಾರೆ ಬೆಂಗಳೂರಿನ ಶಾಂತಲಾ ಸತೀಶ್.  

ಹೆಜ್ಜೆ ಮುಂದಿಡದೆ ಅಲ್ಲೇ ನಿಂತು ಕೇಳತೊಡಗಿದೆ! ಥಟ್ಟನೆ ನನ್ನ ಮುಂದಿನ ಧೂಳು, ಬಿಸಿಲು, ಹೊಟ್ಟೆಯ ಹಸಿವು ಎಲ್ಲ ಮಾಯವಾಗಿ ನನ್ನ ಮನಸ್ಸು ಯಾವುದೋ ಒಂದು ಅಪ್ಸರಲೋಕ ಹೊಕ್ಕಂತಾಯ್ತು. ಮನುಷ್ಯನ ಮನಸ್ಸನ್ನು ಅಷ್ಟು ಆಳದವರೆಗೆ ತಟ್ಟಬಲ್ಲ ಸಾಮರ್ಥ್ಯ ಸಂಗೀತಕ್ಕಿದೆಯೆಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಮೂರು ನಿಮಿಷದ ಗ್ರಾಮಫೋನ್ ರಿಕಾರ್ಡ್ ಅದು. ಅದು ಮುಗಿಯುತ್ತಿದ್ದಂತೆಯೇ ಯಾವ ಪವಾಡಪುರುಷ ಇಂಥ ಸಂಗೀತ ನುಡಿಸಿದವನು ಎಂದು ಗಮನವಿಟ್ಟು ರೇಡಿಯೋ ಕೇಳಿದೆ. ಸಿಲೋನೀ ಭಾಷೆಯಲ್ಲಿ ಮಾತುಗಳಿದ್ದರೂ ಸಂಗೀತಗಾರನ ಹೆಸರು ಸ್ಪಷ್ಟವಾಗಿ ಕೇಳಿಸಿತು, ‘ಪಂಡಿತ್‌ ರವಿಶಂಕರ್’ ಎಂದು.

ನನ್ನನ್ನು ದಿಗ್ಭ್ರಾಂತನನ್ನಾಗಿ ಮಾಡಿದ ನನ್ನ ಜೀವನದ ಆ ಮೂರು ನಿಮಿಷಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಅವತ್ತು ನನಗೆ ಅರ್ಥವಾಯ್ತು ಅಣ್ಣ ಅಲ್ಲಾಡದೆ ಕಣ್ಣುಮುಚ್ಚಿಕೊಂಡು ದೊರೆಸ್ವಾಮಿ ಐಯ್ಯಂಗಾರ್ಯರ ವೀಣಾವಾದನವನ್ನು ಏಕೆ ಕೇಳುತ್ತಾರೆ ಎಂದು. ಅಲ್ಲಿಂದ ಮುಂದೆ ಹೆಜ್ಜೆ ಇಡಬೇಕಾದರೆ ನನ್ನ ಮನಸ್ಸಿನ ನಿರ್ಧಾರವೇ ಬೇರಾಗಿತ್ತು. ನಾನು ಕೇಳಿದ ಸಂಗೀತದ ಮುಂದೆ ಪ್ರಪಂಚದ ಇನ್ಯಾವುದೂ ಅಮೂಲ್ಯ ಅಲ್ಲ ಎನ್ನಿಸಿತು. ಈಗ ಯೋಚಿಸಿದರೆ ಆಗ ನನಗನ್ನಿಸಿದ್ದು ಅತಿ ಎನ್ನಿಸಿದರೂ ಆಗ ಹಾಗನ್ನಿಸಿದ್ದು ನಿಜ. ನನ್ನ ಜೀವನ ಇಲ್ಲಿಯವರೆಗೆ ನಡೆದು ಬಂದಿರುವುದೇ ಈ ರೀತಿಯ ಅತಿರೇಕಗಳ ಅಂಚಿನಲ್ಲಿ. ಮೈಸೂರಿಗೆ ಹಿಂದಿರುಗಿದವನು ಹೋಗಿ ಶಾಮಣ್ಣನಿಗೆ ಹೇಳಿದೆ “ಈ ಹಾಳು ಪೀಪಿ ಕಿಂದರಿಗಳನ್ನೆಲ್ಲಾ ಬಿಸಾಕಿ, ಕಲಿತರೆ ಸರಿಯಾದ ಸಂಗೀತ ಕಲಿಯೋಣ. ಇದು ಸಂಗೀತ ಅಲ್ಲವೇ ಅಲ್ಲ” ಎಂದು. ಇಬ್ಬರೂ ಸಂಪೂರ್ಣ ದಿಕ್ಕು ಬದಲಾಯಿಸಿ ಹೊರಟೆವು.

ಇದರಿಂದ ನಿಜವಾದ ಷಾಕ್ ಆಗಿದ್ದು ಅಣ್ಣನಿಗೆ! “ಇದು ಯಾವುದೋ ಇವನ ಜನ್ಮಾಂತರದ ಸಂಸ್ಕಾರ ಇರಬೇಕೇ ಹೊರತು, ಈ ಜನ್ಮದ್ದಂತೂ ಖಂಡಿತಾ ಅಲ್ಲ” ಎಂದು ಒಂದೇ ಮಾತಿನಲ್ಲಿ ಹೇಳಿ ಸುಮ್ಮನೆ ಕುಳಿತುಬಿಟ್ಟರು.

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಚಿತ್ರಕಲಾವಿದೆ ಶಾಂತಲಾ ಸತೀಶ

ಇದನ್ನೂ ಓದಿ : Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ಸೂರ್ಯ ತಣ್ಣಗಾಗೋವರೆಗೂ ತಡೀರಿ