Bhopal Gas Tragedy: ಭೋಪಾಲ್​ ಭೀಕರ ಅನಿಲ ದುರಂತಕ್ಕೆ 37 ವರ್ಷ; ಸಂತ್ರಸ್ತರಿಗೆ ಸಿಗಲೇ ಇಲ್ಲ ನ್ಯಾಯ, ಜೈಲು ಸೇರಲಿಲ್ಲ ದೋಷಿಗಳು !

| Updated By: Lakshmi Hegde

Updated on: Dec 02, 2021 | 3:11 PM

37 Years of Bhopal Gas Tragedy: ಅಂದಿನ ದುರಂತದಿಂದ ಜೀವ ಕಳೆದುಕೊಂಡವರು ಒಂದೆಡೆಯಾದರೆ ಬೇರೆ ಕೆಲವು ರೋಗಗಳಿಗೀಡಾದವರು ಮತ್ತೊಂದಷ್ಟು ಜನರು. ದುಡಿಯುವವರನ್ನು ಕಳೆದುಕೊಂಡು ನಿರಾಶ್ರಿತರಾದವರೂ ಇದ್ದಾರೆ. ಆದರೆ ಅಂಥವರಿಗೆ, ಅಂಥವರ ಕುಟುಂಬಕ್ಕೆ ಯಾವ ಸರ್ಕಾರಗಳೂ ನ್ಯಾಯ ಒದಗಿಸಿಲ್ಲ ಎಂಬುದು ಅನೇಕರ ಆರೋಪ.

Bhopal Gas Tragedy: ಭೋಪಾಲ್​ ಭೀಕರ ಅನಿಲ ದುರಂತಕ್ಕೆ 37 ವರ್ಷ; ಸಂತ್ರಸ್ತರಿಗೆ ಸಿಗಲೇ ಇಲ್ಲ ನ್ಯಾಯ, ಜೈಲು ಸೇರಲಿಲ್ಲ ದೋಷಿಗಳು !
ಸಾಂಕೇತಿಕ ಚಿತ್ರ
Follow us on

ಮಧ್ಯಪ್ರದೇಶದ ಭೋಪಾಲ್​​ನಲ್ಲಿ 1984ರಲ್ಲಿ ನಡೆದಿದ್ದ ಭೀಕರ ಅನಿಲ ದುರಂತ(Bhopal Gas Tragedy)ಕ್ಕೆ ಬರೋಬ್ಬರಿ 37 ವರ್ಷ. ಆದರೆ ಸಂತ್ರಸ್ತರಿಗೆ ನ್ಯಾಯ ಸಿಗಲಿಲ್ಲ, ಗ್ಯಾಸ್​ ಟ್ರ್ಯಾಜಿಡಿಗೆ ಸಂಬಂಧ ಪಟ್ಟ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರವೇ ಸಿಗಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಲು ಅಂದಿನಿಂದಲೂ ಇಲ್ಲಿಯವರೆಗೆ ಎಲ್ಲ ಸರ್ಕಾರಗಳೂ ವಿಫಲವಾಗಿವೆ ಎಂದು ಆರೋಪಿಸಿ ಹಲವು ಎನ್​ಜಿಒಗಳು ಒಂದು ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದವು. ‘ಭೋಪಾಲ್​ ಅನಿಲ ದುರಂಕ್ಕೆ 37 ವರ್ಷವಾದ ಹೊತ್ತಲ್ಲಿ, 37 ಪ್ರಶ್ನೆಗಳು’ ಎಂಬ ಸ್ಲೋಗನ್​​ನೊಟ್ಟಿಗೆ ತಿಂಗಳ ಕಾಲ ನಡೆಸಿದ್ದ ಪ್ರತಿಭಟನೆಯನ್ನು ನಿನ್ನೆಗೆ ಮುಕ್ತಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ಈಗಲೂ ಕೂಡ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆ ದುರಂತದ ದೋಷಿಗಳಿಗೆ ಶಿಕ್ಷೆಯಾಗಿಲ್ಲ ಎಂದೇ ಆರೋಪಿಸಿದ್ದಾರೆ.  

ಭೋಪಾಲ್​​ನ  ಯೂನಿಯನ್​ ಕಾರ್ಬೈಡ್​ ಇಂಡಿಯಾ ಲಿಮಿಟೆಡ್​ ಕೀಟನಾಶಕ ಘಟಕದಲ್ಲಿ 1984ರ ಡಿಸೆಂಬರ್​ 2-3ರ ಮಧ್ಯರಾತ್ರಿಯಲ್ಲಿ ಈ ಘೋರ ದುರಂತ ನಡೆದಿತ್ತು. ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತದಲ್ಲೊಂದು ಎಂದು ಕರೆಯಲ್ಪಡುವ ಭೋಪಾಲ್​ ಅನಿಲ ದುರಂತದಲ್ಲಿ ಸಿಲುಕಿ ಸಂಕಟಪಟ್ಟವರು 5 ಲಕ್ಷಕ್ಕೂ ಅಧಿಕ ಮಂದಿ. ಮಿಥೇಲ್​ ಗ್ಯಾಸ್​ನಿಂದ ಪರಿತಪಿಸಿದರು. ಈ ದುರಂತದಲ್ಲಿ ತಕ್ಷಣಕ್ಕೆ ಮೃತಪಟ್ಟವರು  2259 ಮಂದಿ ಎಂದು ಹೇಳಲಾಗಿತ್ತು. ಆದರೆ 2008ರಲ್ಲಿ ಅಂದಿನ ಮಧ್ಯಪ್ರದೇಶ ಸರ್ಕಾರ ಒಟ್ಟು 3787 ಮಂದಿ ಮೃತಪಟ್ಟಿದ್ದಾರೆಂದು ಹೇಳಿ ಅವರ ಕುಟುಂಬಕ್ಕೆ ಪರಿಹಾರ ನೀಡಿದೆ. ಹಾಗೇ, ದುರಂತದಲ್ಲಿ ಗಾಯಗೊಂಡ, ಅಸ್ವಸ್ಥರಾದ 5,74,366 ಮಂದಿಗೂ ನೆರವು ನೀಡಿತ್ತು. ಅಂದು ಸೋರಿಕೆಯಾದ ಮಿಥೇಲ್​ಗೆ ಒಡ್ಡಿಕೊಂಡವರು ಹಲವರು ಕೆಲವೇ ದಿನಗಳಲ್ಲಿ ಮೃತಪಟ್ಟರು. ಒಂದಷ್ಟು ಜನ ರೋಗದಿಂದ ಬಳಲಿ ಸತ್ತರು. ಸದ್ಯದ ಅಂದಾಜಿನ ಪ್ರಕಾರ ಅಂದಿನ ಭೋಪಾಲ್​ ಅನಿಲ ದುರಂತದಲ್ಲಿ ಒಟ್ಟಾರೆ ಸತ್ತವರು 8 ಸಾವಿರಕ್ಕೂ ಹೆಚ್ಚು ಮಂದಿ ಎಂದು ಹೇಳಲಾಗಿದೆ.

ಅಂದಿನ ದುರಂತದಿಂದ ಜೀವ ಕಳೆದುಕೊಂಡವರು ಒಂದೆಡೆಯಾದರೆ ಬೇರೆ ಕೆಲವು ರೋಗಗಳಿಗೀಡಾದವರು ಮತ್ತೊಂದಷ್ಟು ಜನರು. ದುಡಿಯುವವರನ್ನು ಕಳೆದುಕೊಂಡು ನಿರಾಶ್ರಿತರಾದವರೂ ಇದ್ದಾರೆ. ಆದರೆ ಅಂಥವರಿಗೆ, ಅಂಥವರ ಕುಟುಂಬಕ್ಕೆ ಯಾವ ಸರ್ಕಾರಗಳೂ ನ್ಯಾಯ ಒದಗಿಸಿಲ್ಲ ಎಂಬುದು ಅನೇಕರ ಆರೋಪ. ಈಗ ಘಟನೆ ನಡೆದು 37 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲವು ಎನ್​ಜಿಒಗಳು ಸ್ಥಳೀಯರನ್ನು ಒಟ್ಟಾಗಿಸಿಕೊಂಡು ಅಕ್ಟೋಬರ್​ 26ರಿಂದ ಪ್ರತಿಭಟನೆ ಶುರು ಮಾಡಿದ್ದವು. ಭೋಪಾಲ್​ನಲ್ಲಿ ಈಗ ಮುಚ್ಚಲ್ಪಟ್ಟ ಯೂನಿಯನ್​ ಕಾರ್ಬೈಡ್​ ಕಾರ್ಖಾನೆಯಿಂದ 1 ಕಿಮೀ ದೂರದಲ್ಲಿ ರಸ್ತೆ ಬದಿಯಲ್ಲೇ ಪ್ರತಿಭಟನೆ ನಡೆದಿತ್ತು. ಅನಿಲ ದುರಂತದಲ್ಲಿ ಸಂತ್ರಸ್ತರಾದವರಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ, ಪರಿಹಾರ ಮತ್ತು ಪುನರ್ವಸತಿ ನೀಡಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಿದ್ದಲ್ಲದೆ, ಸರ್ಕಾರಗಳ ನಿರ್ಲಕ್ಷ್ಯತೆ ಬಗ್ಗೆ 37 ಪ್ರಶ್ನೆಗಳನ್ನೂ ಎತ್ತಲಾಗಿದೆ. ಇನ್ನು ಈ ಪ್ರತಿಭಟನೆಯಲ್ಲಿ ಬಹುಪಾಲು ವೃದ್ಧ ಮಹಿಳೆಯರೇ ಇದ್ದುದು ವಿಶೇಷವಾಗಿತ್ತು.

ಭೋಪಾಲ್ ಗ್ಯಾಸ್ ಪೀಡಿತ್ ಮಹಿಳಾ ಸ್ಟೇಷನರಿ ಕರ್ಮಚಾರಿ ಸಂಘದ ಮುಖ್ಯಸ್ಥರಾದ ರಶೀದಾ ಬೀ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಭೋಪಾಲ ಅನಿಲ ದುರಂತದಲ್ಲಿ ಸಂತ್ರಸ್ತರಾದವರಿಗೆ ನ್ಯಾಯ, ಪರಿಹಾರಕ್ಕಾಗಿ 37 ವರ್ಷಗಳಿಂದ ಕಾದಿದ್ದೇಬಂತು. ಅಂದು ಘೋರ ದುರಂತವನ್ನು ಎದುರಿಸಿ, ಒಂದಷ್ಟು ಕಾಯಿಲೆಗಳನ್ನು ಹೊತ್ತು ಬದುಕುತ್ತಿರುವವರು ಇದ್ದಾರೆ. ಅವರಿಗೆಲ್ಲ ಇನ್ನೂ ಕೂಡ ಸೂಕ್ತವಾದ ಪರಿಹಾರ ಸಿಕ್ಕಿಲ್ಲ. ಅಷ್ಟೇ ಅಲ್ಲ, ಈ ದುರಂತಕ್ಕೆ ಕಾರಣವಾದ ಪ್ರಮುಖ ಆರೋಪಿಗಳನ್ನು ಇನ್ನೂ ಜೈಲಿಗೆ ಕಳಿಸಿಲ್ಲ. ಒಟ್ಟಾರೆ ಸರ್ಕಾರಗಳ ನಿಷ್ಕ್ರಿಯತೆ, ವೈಫಲ್ಯವನ್ನು ತೋರಿಸಲು ಈ ಪ್ರತಿಭಟನೆ ನಡೆಸಲಾಗಿತ್ತು. ನಾವು ಸರ್ಕಾರದ ಎದುರು 37 ಪ್ರಶ್ನೆಗಳನ್ನು ಇಟ್ಟಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Cyclone Jawad: ಭಾರತಕ್ಕೆ ಜವಾದ್​ ಚಂಡಮಾರುತದ ಭೀತಿ; ಡಿ.4ಕ್ಕೆ ಅಪ್ಪಳಿಸಲಿರುವ ಸೈಕ್ಲೋನ್​​ನಿಂದ ಈ ರಾಜ್ಯಗಳಿಗೆ ಆತಂಕ

Published On - 2:44 pm, Thu, 2 December 21