Viral Video: ದೆಹಲಿಯಲ್ಲಿ ಆಪ್ ಶಾಸಕನಿಗೆ ಹಿಗ್ಗಾಮುಗ್ಗ ಥಳಿಸಿದ ಕಾರ್ಯಕರ್ತರು; ವಿಡಿಯೋ ವೈರಲ್

ಗುಲಾಬ್ ಸಿಂಗ್ ಯಾದವ್ ಅವರು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾಗ ಈ ಗಲಾಟೆ ನಡೆದಿದೆ. ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Viral Video: ದೆಹಲಿಯಲ್ಲಿ ಆಪ್ ಶಾಸಕನಿಗೆ ಹಿಗ್ಗಾಮುಗ್ಗ ಥಳಿಸಿದ ಕಾರ್ಯಕರ್ತರು; ವಿಡಿಯೋ ವೈರಲ್
ಆಪ್ ಶಾಸಕ ಗುಲಾಬ್ ಸಿಂಗ್ ಯಾದವ್
Updated By: ಸುಷ್ಮಾ ಚಕ್ರೆ

Updated on: Nov 22, 2022 | 11:47 AM

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಶಾಸಕರೊಬ್ಬರ ಮೇಲೆ ಅವರ ಪಕ್ಷದ ಕಾರ್ಯಕರ್ತರೇ ಅಮಾನವೀಯವಾಗಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆಪ್ ಶಾಸಕ ಗುಲಾಬ್ ಸಿಂಗ್ ಯಾದವ್ (Gulab Singh Yadav) ಅವರ ಬೆನ್ನತ್ತಿ ಓಡಿದ ಕಾರ್ಯಕರ್ತರು ಅವರಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದೆಹಲಿ ಸಿವಿಲ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಹಂಚಿಕೆಯ ವಿಚಾರಕ್ಕೆ ಈ ಗಲಾಟೆ ನಡೆದಿದೆ. ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್​ಗಳನ್ನು ಮಾರಾಟ ಮಾಡುತ್ತಿದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಈ ವಿಡಿಯೋವನ್ನು ಬಿಜೆಪಿ ಶೇರ್ ಮಾಡಿಕೊಂಡಿದೆ. ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಡಿಸಿಪಿ ಎಂ. ಹರ್ಷ ವರ್ಧನ್, ಆಪ್ ಶಾಸಕ ಗುಲಾಬ್ ಸಿಂಗ್ ಯಾದವ್ ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಅವರಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಕೈಕಾಲುಗಳು ಸ್ವಲ್ಪ ತರಚಿ ಹೋಗಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಆಪ್ ಸಚಿವ ಸತ್ಯೇಂದ್ರ ಜೈನ್​ಗೆ ವಿಐಪಿ ಉಪಚಾರ; ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್

ದೆಹಲಿ ವಿಧಾನಸಭೆಯಲ್ಲಿ ಮಟಿಯಾಲಾವನ್ನು ಪ್ರತಿನಿಧಿಸುವ ಗುಲಾಬ್ ಸಿಂಗ್ ಯಾದವ್ ಅವರು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾಗ ಈ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವಿವಾದ ಏನಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ, ಆದರೆ ತೀವ್ರ ಮಾತಿನ ಚಕಮಕಿಯ ನಡುವೆ ಕೋಪಗೊಂಡ ಕಾರ್ಯಕರ್ತರು ಶಾಸಕರ ಕಾಲರ್‌ ಹಿಡಿದು ತಳ್ಳಲು ಪ್ರಾರಂಭಿಸಿದರು. ಆಗ ಶಾಸಕ ಯಾದವ್ ಹೊರಹೋಗಲು ಪ್ರಯತ್ನಿಸಿದಾಗ ಕಾರ್ಯಕರ್ತರು ಅವರ ಬೆನ್ನತ್ತಿ ಹೊಡೆದಿದ್ದಾರೆ. ಕೊನೆಗೆ ಕಷ್ಟಪಟ್ಟು ಆಪ್ ಶಾಸಕರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಗುಜರಾತ್​​ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಗುಟ್ಟಾಗಿ ಸಹಾಯ ಮಾಡುತ್ತಿದೆ; ಅರವಿಂದ್ ಕೇಜ್ರಿವಾಲ್ ಶಾಕಿಂಗ್ ಹೇಳಿಕೆ

ಈ ವಿಡಿಯೋ ಶೇರ್ ಮಾಡಿದವರಲ್ಲಿ ಬಿಜೆಪಿಯ ಸಂಬಿತ್ ಪಾತ್ರ ಕೂಡ ಸೇರಿದ್ದಾರೆ. “ಪ್ರಾಮಾಣಿಕ ರಾಜಕಾರಣ’ದ ನಾಟಕೀಯ ನಾಟಕದಲ್ಲಿ ತೊಡಗಿದ ಪಕ್ಷದಿಂದ ಅಭೂತಪೂರ್ವ ದೃಶ್ಯಗಳು. ಎಎಪಿಯ ಭ್ರಷ್ಟಾಚಾರದಿಂದಾಗಿ ಅವರ ಪಕ್ಷದ ಸದಸ್ಯರೂ ಸಹ ತಮ್ಮ ಶಾಸಕರನ್ನು ಉಳಿಸುತ್ತಿಲ್ಲ! ಮುಂಬರುವ ಎಂಸಿಡಿ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶವು ಅವರಿಗೆ ಕಾಯುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ