
ಭೋಪಾಲ್: ಚುನಾವಣೆ ವೇಳೆ ರಾಜಕೀಯ ನಾಯಕರು ನೀಡುವ ಪೊಳ್ಳು ಭರವಸೆ ಮತ್ತು ಸುಳ್ಳು ಆಶ್ವಾಸನೆಗಳಿಗೆ ಕಾಯದೆ ಗ್ರಾಮದ ಮಹಿಳೆಯರು ತಮ್ಮ ಹಳ್ಳಿಯ ಕೆರೆಗೆ ತಾವೇ ನೀರು ಹರಿಸುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಯ ಅಗ್ರೋಥಾ ಗ್ರಾಮದಲ್ಲಿ ನಡೆದಿದೆ.
ಈ ನಿಟ್ಟಿನಲ್ಲಿ ಗ್ರಾಮದ ಸುಮಾರು 250 ಮಹಿಳೆಯರು ಒಟ್ಟುಗೂಡಿ ತಮ್ಮ ಹಳ್ಳಿಗೆ ಅಂಟಿಕೊಂಡಿದ್ದ ಗುಡ್ಡವೊಂದನ್ನು ಕೊರೆದು ಕಾಲುವೆ ನಿರ್ಮಿಸುತ್ತಿದ್ದಾರೆ. ಈ ಮೂಲಕ ಗುಡ್ಡದ ಆಚೆಯಿದ್ದ ಹೊಳೆಯಿಂದ ತಮ್ಮ ಊರಿನ ಕೆರೆಗೆ ನೀರು ಹರಿಸಲು ಮುಂದಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಭಗೀರಥನಂತೆ ಛಲಬಿಡದೆ ತಮ್ಮ ಹಳ್ಳಿಗೆ ನೀರು ಹರಿಸಲು ಶ್ರಮಿಸುತ್ತಿದ್ದಾರೆ.