Covid-19 India Update: ಭಾರತದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕು, ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ

ಸೋಂಕಿತರ ಸಂಖ್ಯೆ ಹದ್ದು ಮೀರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 8, ಸಾಯಂಕಾಲ 6.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಕೊವಿಡ್​-18 ಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ.

Covid-19 India Update: ಭಾರತದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕು, ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us
|

Updated on:Apr 05, 2021 | 9:51 PM

ನವದೆಹಲಿ: ಭಾರತದಲ್ಲಿ ಕೊವಿಡ್-19 ಪಿಡುಗಿನ ಎರಡನೇ ಅಲೆ ಮೊದಲ ಅಲೆಕ್ಕಿಂತ ಜೋರಾಗಿರಲಿದೆ ಎಂದು ತಜ್ಞರು ಹೇಳಿದ್ದು ಅಕ್ಷರಶಃ ನಿಜವಾಗುತ್ತಿದೆ. ಸೋಂಕಿತರ ಸಂಖ್ಯೆ ಹದ್ದು ಮೀರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 8, ಸಾಯಂಕಾಲ 6.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಕೊವಿಡ್​-18 ಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ. ರವಿವಾರದಂದು, ಭಾರತದಲ್ಲಿ ಪಿಡುಗು ವಕ್ಕರಿಸಿದಾಗಿನಿಂದ ಹಿಡಿದು ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದುವರೆಗಿನ ದಾಖಲೆ ಸೆಪ್ಟೆಂಬರ್​ 16ರಂದು ದಾಖಲಾದ 97,894 ಪ್ರಕರಣಗಳದ್ದಾಗಿತ್ತು. ಆದರೆ ರವಿವಾರ, 1,03,558 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಮೇರಿಕದ ನಂತರ ದಿನವೊಂದರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಸೋಂಕಿತರನ್ನು ಕಂಡಿರುವ ಕೇವಲ ಎರಡನೇ ರಾಷ್ಟ್ರ ಭಾರತವಾಗಿದೆ. ಭಾರತದ ಪ್ರಮುಖ ರಾಜಕಾರಣಿಗಳೆಲ್ಲ ಚುನಾವಣೆಗಲ್ಲಿ ಬ್ಯೂಸಿಯಾಗಿ ಬೃಹತ್ ರ‍್ಯಾಲಿಗಳನ್ನು ನಡೆಸುತ್ತಿರುವುದರಿಂದ ಸೋಂಕಿನ ಪ್ರಮಾಣ ಮತ್ತಷ್ಟು ಏರುವ ಸಾಧ್ಯತೆಯಿದೆ. ಆದರೆ ಕೊವಿಡ್​ ಸಂಬಂಧಿಸಿದ ಮರಣಗಳ ಸಂಖ್ಯೆ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿವೆ. ದೇಶದಲ್ಲಿ ನಿನ್ನೆಯವರೆಗೆ 1,65,101 ಜನ ಸೋಂಕಿಗೆ ಆಹುತಿಯಾಗಿದ್ದಾರೆ.

ಸೋಂಕಿನ ಹೊಸ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು (57,700) ಮಹಾರಾಷ್ಟ್ರ ರಾಜ್ಯದಲ್ಲೇ ವರದಿಯಾಗಿವೆ. ಸೋಂಕಿನ ಪ್ರಮಾಣವನ್ನು ತಗ್ಗಿಸಲು ಉದ್ಧವ್ ಠಾಕ್ರೆ ಅವರ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹಗಲು ಹೊತ್ತಿನಲ್ಲಿ ಜನರ ತಿರುಗಾಟದ ಮೇಲೆ ಕಡಿವಾಣ, ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಲಾಕ್​ಡೌನ್​- ಮುಂತಾದ ಕ್ರಮಗಳ ಹೊರತಾಗಿಯೂ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ‘ಸೋಂಕಿನ ಸರಪಳಿಯನ್ನು ಮರಿಯುವ’ ಅಭಿಯಾನದ ಪ್ರತಿಬಂಧನೆಗಳು ಸೋಮವಾರ ಬೆಳಗ್ಗೆ 8 ಗಂಟೆಯಿಂದ ಏಪ್ರಿಲ್​ 30 ರವರೆಗೆ ಜಾರಿಯಲ್ಲಿರಲಿವೆ.

ರವಿವಾರದಂದು ಮುಂಬೈಯಲ್ಲಿ 12,472 ಮತ್ತು ಪುಣೆಯಲ್ಲಿ 11,206 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಆಸ್ಪತ್ರೆಗಳು ಸೋಂಕಿತರಿಗೆ ಭರ್ತಿಯಾಗುತ್ತಿರುವುದರಿಂದ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ದೊಡ್ಡ ಸಮಸ್ಯೆಯಾಗುತ್ತಿದೆ.

ಹಾಗೆಯೇ, ದೆಹಲಿ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ 4,000 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದರೆ, ಛತ್ತೀಸ್​ಗಡ್​ನಲ್ಲಿ 5,000 ಕ್ಕೂ ಮಿಗಿಲಾಗಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯದಿಂದ ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ ಈಗ ದೇಶದಲ್ಲಿ 7.4 ಲಕ್ಷದಷ್ಟು ಸಕ್ರಿಯ ಪ್ರಕರಣಗಳಿದ್ದು, ರವಿವಾರ ಒಂದೇ ದಿನ 478 ಜನ ಸೋಂಕಿಗೆ ಬಲಿಯಾಗಿದ್ದಾರೆ.

Arvind Kejriwal

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಫೆಬ್ರುವರಿಯಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಇಳಿಮುಖಗೊಂಡ ನಂತರ ಎಲ್ಲ ರಾಜ್ಯಗಳಲ್ಲಿ ಪ್ರತಿಬಂಧನೆಗಳನ್ನು ಸಡಿಲಿಸಲಾಯಿತು. ಅದರ ದುರುಪಯೋಗ ಮಾಡಿಕೊಂಡ ಜನರು ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡಲಾರಂಭಿಸಿದರು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವ ಅಂಶವನ್ನು ಗಾಳಿಗೆ ತೂರಿದರು.

ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನ ಮಂತ್ರಿಗಳಿಗೆ ಪತ್ರವೊಂದನ್ನು ಬರೆದು, ಎಲ್ಲ ವಯೋಮಾನದವರಿಗೂ ಲಸಿಕೆ ಹಾಕಿಸುವ ನಿರ್ಣಯ ತೆಗೆದುಕೊಂಡಿದ್ದೇಯಾದರೆ ದೆಹಲಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಲಸಿಕೆ ಹಾಕಿಸಬಹುದೆಂದು ಹೇಳಿದ್ದಾರೆ. ಲಸಿಕೆ ಹಾಕುವ ಕೇಂದ್ರಗಳನ್ನು ಹೆಚ್ಚಿಸಿದರೆ ಇದು ಸಾಧ್ಯವಿದೆಯೆಂದು ಕೇಜ್ರಿವಾಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಕಳೆದೊಂದು ವಾರದಲ್ಲಿ ದೆಹಲಿಯೂ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ಸೋಂಕಿನ ಪ್ರಮಾಣ ವಿಪರೀತವಾಗಿ ಜಾಸ್ತಿಯಾಗುತ್ತಿದೆ. ಕೊರೊನಾ ವೈರಸ್​ನ ಸುಧಾರಿತ ರೂಪ ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಮೊದಲಾದ ದೇಶಗಳಲ್ಲಿ ಕಂಡುಬಂದ ವೈರಸ್​ನ ಇತರ ಪ್ರಬೇಧಗಳು ಭಾರತದ ನೂರಾರು ಸೋಂಕಿತರಲ್ಲಿ ಕಂಡುಬಂದಿವೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 5279, ಬೆಂಗಳೂರಿನಲ್ಲಿ 3728 ಮಂದಿಗೆ ಕೊರೊನಾ ಸೋಂಕು

Published On - 8:14 pm, Mon, 5 April 21