ಬದ್ಲಾಪುರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

Badlapur school sexual abuse: ಸಾರ್ವಜನಿಕರ ಆಕ್ರೋಶವಿಲ್ಲದೇ ಇದ್ದರೆ ಅಧಿಕಾರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಪೀಠ ಗಮನಿಸಿದೆ. ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿದಿದ್ದರೂ ಪೊಲೀಸರಿಗೆ ದೂರು ನೀಡದ ಬದ್ಲಾಪುರ್ ಶಾಲೆಯ ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಿಯೇ ತೀರುತ್ತೇವೆ ಎಂದು ಹೇಳಿದೆ.

ಬದ್ಲಾಪುರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
ರಶ್ಮಿ ಕಲ್ಲಕಟ್ಟ

Updated on: Aug 22, 2024 | 2:57 PM

ಮುಂಬೈ ಆಗಸ್ಟ್ 22: ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ (Badlapur school sexual abuse)ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಪ್ರಕರಣದಲ್ಲಿ ಎರಡನೇ ಸಂತ್ರಸ್ತೆಯ ಹೇಳಿಕೆಯನ್ನು ಏಕೆ ದಾಖಲಿಸಿಲ್ಲ ಎಂದು ಬಾಂಬೆ ಹೈಕೋರ್ಟ್ (Bombay high court) ಗುರುವಾರ ಮಹಾರಾಷ್ಟ್ರ ಪೊಲೀಸರನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ರೇವತಿ ಮೋಹಿತೆ-ದೇರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಕೆ ಚವಾಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಇಬ್ಬರು ಬಾಲಕಿಯರ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಗಳನ್ನು ನೀಡುವಂತೆ ಪೊಲೀಸರಿಗೆ ಹೇಳಿದ್ದು ಕ್ರಮಗಳನ್ನು ಪರಿಶೀಲಿಸುವುದಾಗಿ ಹೇಳಿದೆ.

ಸೆಕ್ಷನ್ 164 ರ ಅಡಿಯಲ್ಲಿ ಎರಡನೇ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಬದ್ಲಾಪುರ ಪೊಲೀಸರು ದಾಖಲಿಸದಿರುವುದು ನಮಗೆ ದಿಗಿಲು ತಂದಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಇದು ದೊಡ್ಡ ಸಮಸ್ಯೆಗಳ ಮೇಲೆ ಸ್ವಯಂ ಪ್ರೇರಿತ ಪಿಐಎಲ್ ಆಗಿರುವುದರಿಂದ ಹುಡುಗಿಯರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಸಾರ್ವಜನಿಕರ ಆಕ್ರೋಶವಿಲ್ಲದೇ ಇದ್ದರೆ ಅಧಿಕಾರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಪೀಠ ಗಮನಿಸಿದೆ.
ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿದಿದ್ದರೂ ಪೊಲೀಸರಿಗೆ ದೂರು ನೀಡದ ಬದ್ಲಾಪುರ್ ಶಾಲೆಯ ಅಧಿಕಾರಿಗಳನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಿಯೇ ತೀರುತ್ತೇವೆ ಎಂದು ಹೇಳಿದೆ.

ಪ್ರಕರಣದ ಹೇಳಿಕೆಗಳನ್ನು ಏಕೆ ವಿಳಂಬಗೊಳಿಸಲಾಯಿತು ಎಂಬುದರ ಕುರಿತು ನ್ಯಾಯಮೂರ್ತಿ ಮೋಹಿತೆ-ದೇರೆ ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ನೀವು (ಪೊಲೀಸರು) ಯಾಕೆ ತಡವಾಗಿ ಹೇಳಿಕೆಗಳನ್ನು ದಾಖಲಿಸಿದ್ದೀರಿ? ಘಟನೆ ಆಗಸ್ಟ್ 13ರಂದು ನಡೆದಿದ್ದು ಎಫ್‌ಐಆರ್ 16ರಂದು ದಾಖಲಾಗಿದೆ. ಈಗ ಹೇಳಿಕೆ ದಾಖಲಿಸಲಾಗಿದೆಯೇ? ಪೋಷಕರ ಹೇಳಿಕೆಗಳನ್ನು ಮೊದಲೇ ಏಕೆ ದಾಖಲಿಸಲಾಗಿಲ್ಲ? ಕಾರ್ಯವಿಧಾನದ ಪ್ರಕಾರ ಹೇಳಿಕೆಯನ್ನು ದಾಖಲಿಸುವುದು ಪೊಲೀಸ್ ಅಧಿಕಾರಿಯ ಕರ್ತವ್ಯ. ಸಂತ್ರಸ್ತರಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಆಸಕ್ತಿ ಹೊಂದಿದ್ದೇವೆ.

ಇದನ್ನೂ ಓದಿ: 30 ವರ್ಷಗಳಲ್ಲಿ ಈ ರೀತಿಯ ಪ್ರಕರಣವನ್ನು ನೋಡಿಲ್ಲ: ಕೋಲ್ಕತ್ತಾ ಕೇಸ್ ಬಗ್ಗೆ ಸುಪ್ರೀಂಕೋರ್ಟ್

ನಿನ್ನೆ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿದ ನಂತರವೇ, ಮಧ್ಯರಾತ್ರಿಯ ನಂತರ ತಡವಾಗಿ ಸಂತ್ರಸ್ತರೊಬ್ಬರ ತಂದೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ವಿಭಾಗೀಯ ಪೀಠವು ಗಮನಿಸಿದೆ.

ಶಾಲೆಗಳು ಸುರಕ್ಷಿತವಾಗಿಲ್ಲದಿದ್ದರೆ, ಶಿಕ್ಷಣದ ಹಕ್ಕಿನಿಂದ ಏನು ಪ್ರಯೋಜನ?

ಬದ್ಲಾಪುರ್ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ ಗುರುವಾರ ಪೀಠವು, “ಶಾಲೆ ಸುರಕ್ಷಿತ ಸ್ಥಳವಲ್ಲದಿದ್ದರೆ, ಶಿಕ್ಷಣದ ಹಕ್ಕು ಮತ್ತು ಅಂತಹ ವಿಷಯಗಳ ಬಗ್ಗೆ ಮಾತನಾಡುವುದರಿಂದ ಏನು ಪ್ರಯೋಜನ? 4 ವರ್ಷದ ಹೆಣ್ಣುಮಕ್ಕಳನ್ನೂ ಬಿಡಲಾಗುತ್ತಿಲ್ಲ. ಈ ಪರಿಸ್ಥಿತಿ ಏನು? ಇದು ಅತ್ಯಂತ ಆಘಾತಕಾರಿ,” ಎಂದು ನ್ಯಾಯಮೂರ್ತಿ ಮೋಹಿತೆ-ದೇರೆ ಟೀಕಿಸಿದ್ದಾರೆ. ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಎಸ್‌ಐಟಿ  ಯಾರನ್ನೂ ಸುಮ್ಮನೇ ಬಿಡುವುದಿಲ್ಲ. ಆದಾಗ್ಯೂ ಪೀಠವು ಮುಂದಿನ ಮಂಗಳವಾರ, ಆಗಸ್ಟ್ 27 ರಂದು ಅರ್ಜಿಯ ವಿಚಾರಣೆ ನಡೆಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Thu, 22 August 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us