ಬಾಟ್ಲಾ ಹೌಸ್ ಎನ್​ಕೌಂಟರ್; ಅಪರಾಧಿ ಅರಿಜ್ ಖಾನ್​ಗೆ ಮರಣ ದಂಡನೆ

Batla House Encounter: ಪೊಲೀಸರ ಪರ ವಕೀಲರ ‘ಆರೋಪಿಗೆ ಮರಣದಂಡಣೆ ವಿಧಿಸಬೇಕು’ ಎಂಬ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅರಿಜ್ ಖಾನ್​ಗೆ ಮರಣದಂಡನೆ ನೀಡುವಂತೆ ಆದೇಶ ನೀಡಿದೆ.

ಬಾಟ್ಲಾ ಹೌಸ್ ಎನ್​ಕೌಂಟರ್; ಅಪರಾಧಿ ಅರಿಜ್ ಖಾನ್​ಗೆ ಮರಣ ದಂಡನೆ
ಬಾಟ್ಲಾ ಹೌಸ್ ಎನ್​ಕೌಂಟರ್​ ಪ್ರಕರಣದ ಅಪರಾಧಿ ಅರಿಜ್ ಖಾನ್ (ಪಿಟಿಐ ಚಿತ್ರ)
Edited By:

Updated on: Mar 15, 2021 | 7:19 PM

ದೆಹಲಿ: ಬಾಟ್ಲಾ ಹೌಸ್ ಎನ್​ಕೌಂಟರ್​ ಪ್ರಕರಣವನ್ನು ವಿಶೇಷ ಪ್ರಕರಣಗಳಲ್ಲಿ ವಿಶೇಷವೆಂದು ಉಲ್ಲೇಖಿಸಿರುವ ದೆಹಲಿ ಕೋರ್ಟ್ ಅಪರಾಧಿ ಅರಿಜ್​ ಖಾನ್​ಗೆ ಗಲ್ಲುಶಿಕ್ಷೆ ವಿಧಿಸಿದೆ. 2008ರ ಬಾಟ್ಲಾ ಹೌಸ್​​ ಎನ್​ಕೌಂಟರ್​ ಪ್ರಕರಣದಲ್ಲಿ ಅರಿಝ್ ಖಾನ್ ಅಪರಾಧಿಯಾಗಿ ಸಾಬೀತಾಗಿದ್ದು, ಪೊಲೀಸ್ ಇನ್ಸ್​ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆಗೈದ ಆರೋಪ ಅರಿಜ್ ಖಾನ್ ಮೇಲಿತ್ತು. ಪೊಲೀಸರ ಪರ ವಕೀಲರ ‘ಆರೋಪಿಗೆ ಮರಣದಂಡಣೆ ವಿಧಿಸಬೇಕು’ ಎಂಬ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅರಿಜ್ ಖಾನ್​ಗೆ ಮರಣದಂಡನೆ ವಿಧಿಸಿ ಆದೇಶ ನೀಡಿದೆ. ಈ ಹಿಂದೆಯೇ ಅರಿಜ್ ಖಾನ್ ತಪ್ಪಿತಸ್ಥ ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಶಿಕ್ಷೆಯ ಪ್ರಮಾಣವನ್ನು ಇಂದು ಸಂಜೆ ಘೋಷಿಸುವುದಾಗಿ ತಿಳಿಸಿತ್ತು.

ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್​ ಸದಸ್ಯನಾಗಿದ್ದ ಅರಿಜ್ ಖಾನ್​ 2008ರಲ್ಲಿ ದೆಹಲಿಯಲ್ಲಿ ನಡೆದಿದ್ದ ಬಾಟ್ಲಾ ಹೌಸ್ ಎನ್​ಕೌಂಟರ್​ನಲ್ಲಿ ಪೊಲೀಸ್ ಇನ್ಸ್​ಪೆಕ್ಟರ್​ ಮೋಹನ್ ಚಂದ್ರ ಶರ್ಮಾ ಅವರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯಲ್ಲಿ ಅರಿಜ್ ಖಾನ್ ಭಾಗಿಯಾಗಿರುವುದು ಸಾಬೀತಾಗಿತ್ತು. ಈ ಎನ್​ಕೌಂಟರ್​ಗೂ ಮುನ್ನ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ ಘಟನೆಗಳು ಜರುಗಿದ್ದವು. ಮರಣ ದಂಡನೆಯ ಜತೆ ಅರಿಜ್ ಖಾನ್​ಗೆ 11 ಲಕ್ಷ ದಂಡವನ್ನು ಸಹ ನ್ಯಾಯಾಧೀಶರು ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಅರಿಜ್ ಖಾನ್ ತಪ್ಪಿತಸ್ಥ ಎಂದು ನ್ಯಾಯಪೀಠಕ್ಕೆ ಮನವರಿಕೆಯಾಗಿದೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸಂದೀಪ್ ಯಾದವ್ ತೀರ್ಪಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ವಿಶೇಷ ಪ್ರಕರಣಗಳಲ್ಲಿ ವಿಶೇಷವಾದದ್ದು ಎಂದು ಪರಿಗಣಿಸಿರುವ ಕೋರ್ಟ್, ಸೆಕ್ಷನ್ 302ರ ಅಡಿ ಶಿಕ್ಷೆ ವಿಧಿಸುವುದಾಗಿ ತಿಳಿಸಿತ್ತು. ಸೆಕ್ಷನ್ 302ರಡಿ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶಗಳಿತ್ತು. ಇವೆರಡರ ಪೈಕಿ ನ್ಯಾಯಾಲಯ ಅಪರಾಧಿ ಎಂದು ಸಾಬೀತಾದ ಅರಿಜ್ ಖಾನ್​ಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. 2013ರಲ್ಲಿ ಬಾಟ್ಲಾ ಹೌಸ್ ಎನ್​ಕೌಂಟರ್​ ಪ್ರಕರಣದಲ್ಲಿ ಅರಿಜ್ ಖಾನ್​ ಜತೆ ಶಹ್ಜಾದ್ ಎಂಬ ವ್ಯಕ್ತಿ ಪಾಲ್ಗೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯೆ
ಬಾಟ್ಲಾ ಹೌಸ್ ಎನ್​ಕೌಂಟರ್ ಪ್ರಕರಣದಲ್ಲಿ ಅರಿಜ್ ಖಾನ್​ಗೆ ಮರಣ ದಂಡನೆ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. ಈ ತೀರ್ಪು ಭಯೋತ್ಪಾದಕರ ಬೆಂಬಲಿಗರ ಮನೋಭಾವವನ್ನು ಬಹಿರಂಗಪಡಿಸುತ್ತದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆಮ್​ಆದ್ಮಿಯ ಅರವಿಂದ್ ಕೇಜ್ರಿವಾಲ್ ದೆಹಲಿಯ ಹುತಾತ್ಮ ಮತ್ತು ವೀರ ಪೊಲೀಸರ ಶೌರ್ಯವನ್ನು ಅನುಮಾನಿಸಿದ್ದರು. ಇದೀಗ ಅವರು ದೇಶದ ಜನರೆದುರು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಅರವಿಂದ್ ಕೇಜ್ರಿವಾಲ್ ವಿಪಕ್ಷ ನಾಯಕರನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ನ್ಯಾಯಾಲಯದ ಸಿಬ್ಬಂದಿ ವರ್ಗಕ್ಕೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡಬೇಕೆಂದು ಸುಪ್ರೀಂಗೆ ಅರ್ಜಿ: ಕೇಂದ್ರ ಸರ್ಕಾರ ವಿರೋಧ

ಇದನ್ನೂ ಓದಿ: ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತ ಬಿದ್ದರೆ ಚುನಾವಣೆ ರದ್ದು; ಕೇಂದ್ರ ಸರ್ಕಾರಕ್ಕೆ ಉತ್ತರಿಸಲು ತಿಳಿಸಿದ ಸುಪ್ರೀಂ

Published On - 7:17 pm, Mon, 15 March 21