AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತ ಬಿದ್ದರೆ ಚುನಾವಣೆ ರದ್ದು; ಕೇಂದ್ರ ಸರ್ಕಾರಕ್ಕೆ ಉತ್ತರಿಸಲು ತಿಳಿಸಿದ ಸುಪ್ರೀಂ

‘ಇದು ಸಾಂವಿಧಾನಿಕ ಸಮಸ್ಯೆಯಾಗಿದೆ. ಒಂದುವೇಳೆ ನಿಮ್ಮ ವಾದದಂತೆ ಚುನಾವಣೆಯನ್ನು ರದ್ದುಗೊಳಿಸಿ ಅಭ್ಯರ್ಥಿಗಳನ್ನು ಮರು ಸ್ಪರ್ಧಿಸದಂತೆ ತಡೆದರೆ ಶಾಸನಸಭೆಯಲ್ಲಿ ಆ ಕ್ಷೇತ್ರದ ಅಸ್ತಿತ್ವ ಇರುವುದಿಲ್ಲ..ಇದನ್ನು ನೀವು ಹೇಗೆ ಪರಿಹರಿಸಬಲ್ಲಿರಿ?’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಪ್ರಶ್ನಿಸಿದರು.

ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತ ಬಿದ್ದರೆ ಚುನಾವಣೆ ರದ್ದು; ಕೇಂದ್ರ ಸರ್ಕಾರಕ್ಕೆ ಉತ್ತರಿಸಲು ತಿಳಿಸಿದ ಸುಪ್ರೀಂ
ಸುಪ್ರೀಂ ಕೋರ್ಟ್​
guruganesh bhat
|

Updated on: Mar 15, 2021 | 1:23 PM

Share

ದೆಹಲಿ: ಚುನಾವಣಾ ಕಣದಲ್ಲಿರುವ  ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚು ಮತ ಚಲಾವಣೆಯಾದರೆ ಚುನಾವಣೆಯನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿ ನಾಯಕ, ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಈ ಕುರಿತು ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.

ಕ್ಷೇತ್ರವೊಂದಕ್ಕೆ ನಡೆದ ಚುನಾವಣೆಯನ್ನು ಉಲ್ಲೇಖಿಸಿ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದರು. ಚುನಾವಣೆಯಲ್ಲಿ ಅಭ್ಯರ್ಥಿಗಿಂತ ನೋಟಾಕ್ಕೆ ಹೆಚ್ಚು ಮತ ಚಲಾವಣೆಯಾದರೆ ಆ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಬೇಕು. ನಂತರ ಹೊಸದಾಗಿ ಆ ಕ್ಷೇತ್ರದಲ್ಲಿ ಚುನಾವಣೆ ನಡೆಸಬೇಕು ಎಂದು ಅಶ್ವಿನಿ ಉಪಾಧ್ಯಾಯ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅಲ್ಲದೇ ಮುಂದುವರೆದು, ಮೊದಲು ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮರುಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕು ಎಂದು ಸಹ ಬಿಜೆಪಿ ನಾಯಕ, ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಮಾಡಿದೆ. ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು ಅಶ್ವಿನಿ ಉಪಾಧ್ಯಾಯ ಅವರ ಪರವಾಗಿ ವಾದ ಮಂಡಿಸಿದ್ದರು. ಈಗಾಗಲೇ ಅರ್ಜಿದಾರರು ಈ ವಿಷಯದ ಕುರಿತು ಶಾಸನಬದ್ಧ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರೂ ಸಹ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಅರ್ಜಿದಾರರ ಪರ ನ್ಯಾಯವಾದಿ ಮೇನಕಾ ಗುರುಸ್ವಾಮಿ ವಾದ ಮಂಡಿಸಿದರು.

ಅವರಿಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ‘ಇದು ಸಾಂವಿಧಾನಿಕ ಸಮಸ್ಯೆಯಾಗಿದೆ. ಒಂದುವೇಳೆ ನಿಮ್ಮ ವಾದದಂತೆ ಚುನಾವಣೆಯನ್ನು ರದ್ದುಗೊಳಿಸಿ ಅಭ್ಯರ್ಥಿಗಳನ್ನು ಮರು ಸ್ಪರ್ಧಿಸದಂತೆ ತಡೆದರೆ ಶಾಸನಸಭೆಯಲ್ಲಿ ಆ ಕ್ಷೇತ್ರದ ಅಸ್ತಿತ್ವ ಇರುವುದಿಲ್ಲ..ಇದನ್ನು ನೀವು ಹೇಗೆ ಪರಿಹರಿಸಬಲ್ಲಿರಿ?’ ಎಂದು ಪ್ರಶ್ನಿಸಿದರು.

ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ನ್ಯಾಯವಾದಿ ಮೇನಕಾ ಗುರುಸ್ವಾಮಿ, ‘ಒಮ್ಮೆ ಕಣದಲ್ಲಿರುವ ಅಭ್ಯರ್ಥಿಗಳಿಗಿಂತ  ನೋಟಾಗೆ ಹೆಚ್ಚು ಮತ ಬಂದರೆ, ಆ ಎಲ್ಲಾ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಿದಂತೆ ಎಂಬ ಅರ್ಥ. ಈ ತಿರಸ್ಕರಿಸುವ ಹಕ್ಕನ್ನು ಮತದಾರರು ಪ್ರಯೋಗಿಸಿದರೆ, ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ. ಅರ್ಹ ಮತ್ತು ಉತ್ತಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವಂತೆ ಒತ್ತಡ ಹೇರುವ ಸಂದೇಶ ಕಳಿಸಿದಂತಾಗುತ್ತದೆ . ಮತದಾರರ ತಿರಸ್ಕರಿಸುವ ಹಕ್ಕಿಗೆ ಇನ್ನಷ್ಟು ಬಲ ಒದಗಿಸಿದಂತಾಗುತ್ತದೆ’ ಎಂದು ಉತ್ತರಿಸಿದರು.

ಮತದಾರರು ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು 1999ರಲ್ಲಿ ಕಾನೂನು ಆಯೋಗ ತನ್ನ 170 ನೇ ವರದಿಯಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಉಲ್ಲೇಖಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಶೇ 50+1ರಷ್ಟು ಮತಗಳನ್ನು ಪಡೆದ ಅಭ್ಯರ್ಥಿಗಳಷ್ಟೇ ವಿಜೇತರೆಂದು ಘೋಷಿಸುವ ಪ್ರಸ್ತಾಪವೂ ಈ ವರದಿಯಲ್ಲಿತ್ತು ಎಂದು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ವಿಚ್ಛೇದಿತ ಮಗಳ ಹಕ್ಕುಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಉತ್ತಮ ಅಂಕಗಳಿಸಿದ ಮೀಸಲು ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಬರುತ್ತಾರೆ: ಸುಪ್ರೀಂಕೋರ್ಟ್​ ತೀರ್ಪು