AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀಡಿ ಕಟ್ಟಿ ಗಳಿಸಿ-ಉಳಿಸಿದ ಹಣವನ್ನೆಲ್ಲ ಕೊವಿಡ್ ಲಸಿಕೆ ಖರೀದಿಗೆ ನೀಡಿದ ಅಂಗವಿಕಲ ವ್ಯಕ್ತಿ..

ಜನಾರ್ದನ್ ಅವರು ಹಣವನ್ನು ಸಿಎಂ ಸಂಕಷ್ಟ ಪರಿಹಾರ ನಿಧಿಗೆ ವರ್ಗಾಯಿಸಲು ಹೋದಾಗ ಬ್ಯಾಂಕ್​ನವರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರಂತೆ. ಅರ್ಧದಷ್ಟಾದರೂ ನೀವೇ ಇಟ್ಟುಕೊಳ್ಳಬಹುದಲ್ಲ ಎಂಬ ಸಲಹೆಯನ್ನೂ ನೀಡಿದ್ದರಂತೆ.

ಬೀಡಿ ಕಟ್ಟಿ ಗಳಿಸಿ-ಉಳಿಸಿದ ಹಣವನ್ನೆಲ್ಲ ಕೊವಿಡ್ ಲಸಿಕೆ ಖರೀದಿಗೆ ನೀಡಿದ ಅಂಗವಿಕಲ ವ್ಯಕ್ತಿ..
ಜನಾರ್ದನ್​ (ಬೀಡಿ ಕಟ್ಟುವ ಕೆಲಸಗಾರ)
Lakshmi Hegde
|

Updated on: Apr 27, 2021 | 3:56 PM

Share

ಕೋಳಿಕ್ಕೋಡ್​: ಕೊರೊನಾ ವಿರುದ್ಧದ ಹೋರಾಟದಲ್ಲಿ ಒಬ್ಬ ಸಾಮಾನ್ಯ ಬೀಡಿ ಕಟ್ಟುವ ಕಾರ್ಮಿಕನೊಬ್ಬ ಕೈಜೋಡಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಬೀಡಿ ಕಟ್ಟುವ ಕಾಯಕದಿಂದ ಗಳಿಸಿ-ಉಳಿಸಿದ 2 ಲಕ್ಷ ರೂಪಾಯಿಯನ್ನು ಇವರು ಸಿಎಂ-ಸಂಕಷ್ಟ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ಕೊವಿಡ್​ 19 ಲಸಿಕೆಯನ್ನು ಎಲ್ಲರೂ ಪಡೆಯುವಂತಾಗಬೇಕು. ಹಾಗಾಗಿ ಲಸಿಕೆ ಖರೀದಿಗಾಗಿ ನಾನು 2 ಲಕ್ಷ ರೂಪಾಯಿ ಕೊಡುತ್ತಿದ್ದೇನೆ ಎಂದು ಈ ಬೀಡಿ ಕಾರ್ಮಿಕ ಹೇಳಿಕೊಂಡಿದ್ದಾರೆ.

ಇವರ ಹೆಸರು ಜನಾರ್ಧನ. ಕೇರಳದ ಕಣ್ಣೂರಿನವರಾಗಿದ್ದು, ತಾನು ಉಳಿತಾಯ ಮಾಡಿದ್ದ 2 ಲಕ್ಷ ರೂಪಾಯಿಯನ್ನು ಸಿಎಂ ಸಂಕಷ್ಟ ಪರಿಹಾರ ನಿಧಿಗೆ ನೀಡಿದ್ದಾರೆ. ಇದೀಗ ಅವರ ಖಾತೆಯಲ್ಲಿ ಕೇವಲ 850 ರೂಪಾಯಿ ಉಳಿದಿದೆ. ಈ ಇಳಿವಯಸ್ಸಿನಲ್ಲೂ ಕೂಡ ಬೀಡಿ ಸುತ್ತಿಯೇ ಜೀವನ ಸಾಗಿಸುತ್ತಾರೆ. ಅದೇ ಅವರಿಗೆ ಅನ್ನ ನೀಡುವ ಕಾಯಕ. ಇದೀಗ ಹಣವನ್ನು ಕೊವಿಡ್ 19 ವಿರುದ್ಧ ಹೋರಾಟಕ್ಕೆ ನೀಡುವ ಮೂಲಕ ಸಮಾಜ ಮೊದಲು.. ನಂತರ ತಾನು ಎಂಬುದನ್ನು ಸಾರಿದ್ದಾರೆ. ತನ್ನ ಮೃತ ಪತ್ನಿಗೆ ಬರುತ್ತಿದ್ದ ಅಂಗವೈಕಲ್ಯರ ಪಿಂಚಣಿ ಹಣವನ್ನೂ ಈ ಮೊತ್ತದಲ್ಲಿ ಸೇರಿಸಿದ್ದಾಗಿ ತಿಳಿಸಿದ್ದಾರೆ.

ಮೊದಲಿನಿಂದಲೂ ಸಿಪಿಎಂ ಪಕ್ಷದ ಬೆಂಬಲಿಗರಾಗಿರುವ ಜನಾರ್ಧನ್​, ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಕಟ್ಟಾ ಅಭಿಮಾನಿಯೂ ಹೌದು. ಏಪ್ರಿಲ್ 21ರಂದು ಸುದ್ದಿಗೋಷ್ಠಿ ನಡೆಸಿದ್ದ ಪಿಣರಾಯಿ ವಿಜಯನ್​ ಅವರು ರಾಜ್ಯಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದರು. ಅಂದೇ ರಾತ್ರಿ ಜನಾರ್ದನ್ ಅವರು ತಾವೇನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದರಂತೆ. ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲು ಸರ್ಕಾರ ಅಪಾರ ಪ್ರಮಾಣದ ಹಣ ವ್ಯಯಿಸಲೇಬೇಕು. ಹಾಗಾಗಿ ನನ್ನ ಕೈಲಾದ ಮಟ್ಟಿಗೆ ನೆರವು ನೀಡಲು ಇಚ್ಛಿಸಿ ಈ ನಿರ್ಧಾರ ಕೈಗೊಂಡೆ ಎನ್ನುತ್ತಾರೆ ಜನಾರ್ದನ್​.

ಜನಾರ್ದನ್ ಅವರು ಹಣವನ್ನು ಸಿಎಂ ಸಂಕಷ್ಟ ಪರಿಹಾರ ನಿಧಿಗೆ ವರ್ಗಾಯಿಸಲು ಹೋದಾಗ ಬ್ಯಾಂಕ್​ನವರೂ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರಂತೆ. ಅರ್ಧದಷ್ಟಾದರೂ ನೀವೇ ಇಟ್ಟುಕೊಳ್ಳಬಹುದಲ್ಲ ಎಂಬ ಸಲಹೆಯನ್ನೂ ನೀಡಿದ್ದರಂತೆ. ಆದರೆ ಅದಕ್ಕೆಲ್ಲ ಒಪ್ಪದ ಜನಾರ್ದನ್​, ಇಲ್ಲ, ನಾನು 2 ಲಕ್ಷ ರೂಪಾಯಿಯನ್ನು ಸಿಎಂ ಸಂಕಷ್ಟ ಪರಿಹಾರ ನಿಧಿಗೆ ಕೊಟ್ಟರೆ ಮಾತ್ರ ತೃಪ್ತಿಯಾಗುತ್ತದೆ ಎಂದು ಹೇಳಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಈಗಾಗಲೇ ಮೊದಲನೇ ಡೋಸ್​ ಲಸಿಕೆ ಪಡೆದಿರುವ ಜನಾರ್ದನ್​, ಎಲ್ಲರೂ ಮುಂದಾಗಿ ಕೊರೊನಾ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ. ಅಲ್ಲದೆ, ನಾನು 2 ಲಕ್ಷ ರೂಪಾಯಿ ನೀಡಿದ್ದರ ಬಗ್ಗೆ ಯಾವುದೇ ಬೇಸರವೂ ಇಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿರುವ ಜಿಲ್ಲಾ ಬಾಲಕಿಯರ ಬಾಲ ಮಂದಿರದ 8 ವಿದ್ಯಾರ್ಥಿನಿಯರಿಗೆ ಕೊವಿಡ್

ಮಾರುತಿ ಸುಜುಕಿ ಕಂಪೆನಿಗೆ ನಾಲ್ಕನೇ ತ್ರೈಮಾಸಿಕದಲ್ಲಿ 1,166 ಕೋಟಿ ರೂ. ಲಾಭ; 45 ರೂ. ಡಿವಿಡೆಂಡ್ ಘೋಷಣೆ