ಬಿಹಾರದಲ್ಲಿ 10 ಸೇತುವೆಗಳು ಕುಸಿತ; 16 ಎಂಜಿನಿಯರ್​​ಗಳ ಅಮಾನತು

ಬುಧವಾರ ನಡೆದ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆಯನ್ನು ನಡೆಸುವಂತೆ ಮತ್ತು ತಕ್ಷಣದ ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ" ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಹಾರದಲ್ಲಿ 10 ಸೇತುವೆಗಳು ಕುಸಿತ; 16 ಎಂಜಿನಿಯರ್​​ಗಳ ಅಮಾನತು
ಕುಸಿದ ಸೇತುವೆ
ರಶ್ಮಿ ಕಲ್ಲಕಟ್ಟ

Updated on: Jul 05, 2024 | 8:23 PM

ದೆಹಲಿ ಜುಲೈ 05 : ಬಿಹಾರದಲ್ಲಿ (Bihar) ಕಳೆದ 15 ದಿನಗಳಲ್ಲಿ 10 ಸೇತುವೆಗಳು (Bride Collapase) ಕುಸಿದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ 16 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಹಾರ ಅಭಿವೃದ್ಧಿ ಕಾರ್ಯದರ್ಶಿ ಚೈತನ್ಯ ಪ್ರಸಾದ್ (Chaitanya Prasad), ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಸೇತುವೆ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ 10ನೇ ಸೇತುವೆ ಕುಸಿದಿದ್ದು ಗುರುವಾರ ಸರನ್ ಜಿಲ್ಲೆಯಿಂದ ವರದಿಯಾಗಿದೆ. ಇದು 24 ಗಂಟೆಗಳ ಅವಧಿಯಲ್ಲಿ ಸರನ್ ಜಿಲ್ಲೆಯಲ್ಲಿ ಕುಸಿದ ಮೂರನೇ ಸೇತುವೆಯಾಗಿದೆ ಇದು. ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ 10 ಸೇತುವೆಗಳು ಕುಸಿದಿವೆ.

“ಬುಧವಾರ ನಡೆದ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆಯನ್ನು ನಡೆಸುವಂತೆ ಮತ್ತು ತಕ್ಷಣದ ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ” ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ಜೂನ್ 18 ರಿಂದ ಬಿಹಾರದಲ್ಲಿ 12 ಸೇತುವೆಗಳು ಕುಸಿದಿವೆ ಎಂದು ಆರೋಪಿಸಿದ್ದಾರೆ.
ಜೂನ್ 18 ರಿಂದ ಬಿಹಾರದಲ್ಲಿ 12 ಸೇತುವೆಗಳು ಕುಸಿದಿವೆ.ಬಿಹಾರದಲ್ಲಿ ನಡೆದ ಈ ಘಟನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಮೌನವಾಗಿದ್ದಾರೆ. ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರದ ವಾಗ್ದಾನ ಏನಾಯಿತು?. ಈ ಘಟನೆಗಳು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರವು ಹೇಗೆ ಅತಿರೇಕವಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಬಿಹಾರದ ರಸ್ತೆ ನಿರ್ಮಾಣ ಇಲಾಖೆಯು ಸೇತುವೆ ನಿರ್ವಹಣಾ ನೀತಿಯನ್ನು ಸಿದ್ಧಪಡಿಸಿದ್ದು ಸಾಧ್ಯವಾದಷ್ಟು ಬೇಗ ತನ್ನ ಯೋಜನೆಯನ್ನು ಅಂತಿಮಗೊಳಿಸುವಂತೆ ಗ್ರಾಮೀಣ ಕಾಮಗಾರಿ ಇಲಾಖೆಗೆ ತಿಳಿಸಿದೆ.

ಇದನ್ನೂ ಓದಿ: ಎನ್‌ಸಿಡಬ್ಲ್ಯೂ ಮುಖ್ಯಸ್ಥರ ವಿರುದ್ಧ ಮಹುವಾ ಮೊಯಿತ್ರಾ ಹೇಳಿಕೆಗೆ ಬಿಜೆಪಿ ವಾಗ್ದಾಳಿ

ಯಾದವ್ ಅವರು 15 ತಿಂಗಳ ಕಾಲ ಈ ಖಾತೆಯನ್ನು ಹೊಂದಿದ್ದಾಗ ಪರಿಸ್ಥಿತಿಯನ್ನು ಸರಿಪಡಿಸಲು ಏನೂ ಮಾಡಲಿಲ್ಲ ಎಂದು ಗ್ರಾಮೀಣ ಕಾಮಗಾರಿ ಇಲಾಖೆ ಸಚಿವ ಅಶೋಕ್ ಚೌಧರಿ ಟೀಕಿಸಿದ್ದಾರೆ. “ಹಿಂದಿನ ಮಹಾಘಟಬಂಧನ್ ಸರ್ಕಾರದ ಅವಧಿಯಲ್ಲಿ ಅವರು 15 ತಿಂಗಳಿಗೂ ಹೆಚ್ಚು ಕಾಲ ಖಾತೆಯನ್ನು ಹೊಂದಿದ್ದರು ಎಂಬುದನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನೆನಪಿಸಿಕೊಳ್ಳಬೇಕು. ಆಗ ಅವರು ಏನು ಮಾಡುತ್ತಿದ್ದರು? ಹಿಂದಿನ ಆರ್‌ಜೆಡಿ ನೇತೃತ್ವದ ಬಿಹಾರ ಸರ್ಕಾರ ಮತ್ತು ಅವರೇ ಈ ಅವ್ಯವಸ್ಥೆಗೆ ಹೊಣೆ ಎಂದಿದ್ದಾರೆ ಚೌಧರಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us