Bhupendra Patel: ಗುಜರಾತ್​ ಮುಂದಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​

| Updated By: Lakshmi Hegde

Updated on: Sep 12, 2021 | 4:40 PM

Gujarat New Chief Minister: ಭೂಪೇಂದ್ರ ಪಟೇಲ್​ ಅವರು  ಗುಜರಾತ್​ನ ಘಾಟ್​ಲೋಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್​ ಪಟೇಲ್​ ವಿರುದ್ಧ ಬರೋಬ್ಬರಿ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

Bhupendra Patel: ಗುಜರಾತ್​ ಮುಂದಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​
ಭೂಪೇಂದ್ರ ಪಟೇಲ್​
Follow us on

ಗುಜರಾತ್​ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಿರಿಯ ನಾಯಕ ಭೂಪೇಂದ್ರ ಪಟೇಲ್ (Bhupendra Patel)​ರನ್ನು ಗುಜರಾತ್​ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. ನಿನ್ನೆ ವಿಜಯ್​ ರೂಪಾನಿ ದಿಢೀರ್ ರಾಜೀನಾಮೆ ನೀಡಿದಾಗಿನಿಂದ ಗುಜರಾತ್​ನ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ದೊಡ್ಡ ಕುತೂಹಲ ಸೃಷ್ಟಿಸಿದ್ದ ವಿಷಯವಾಗಿತ್ತು. ಇಂದು ಬಿಎಲ್​ಪಿ ಸಭೆ ಕೂಡ ನಡೆದಿತ್ತು. ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್​ ತೋಮರ್​ ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದರು. ಸಭೆ ಮುಕ್ತಾಯವಾಗಿದ್ದು, ಭೂಪೇಂದ್ರ ಪಾಟೀಲ್​ರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಇವರ ಹೆಸರನ್ನು ವಿಜಯ್​ ರೂಪಾನಿಯವರೇ ಸೂಚಿಸಿದ್ದಾರೆ ಎನ್ನಲಾಗಿದೆ.

ಭೂಪೇಂದ್ರ ಪಟೇಲ್​ ಅವರು  ಗುಜರಾತ್​ನ ಘಾಟ್​ಲೋಡಿಯಾ ವಿಧಾನಸಭಾ ಕ್ಷೇತ್ರದ ಶಾಸಕರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್​ ಪಟೇಲ್​ ವಿರುದ್ಧ ಬರೋಬ್ಬರಿ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಭೂಪೇಂದ್ರ ಪಟೇಲ್​​ಗೂ ಮೊದಲು ಆನಂದಿಬೆನ್​ ಪಟೇಲ್ (ಉತ್ತರಪ್ರದೇಶದ ಈಗಿನ ರಾಜ್ಯಪಾಲರು)​ ಅಭ್ಯರ್ಥಿಯಾಗಿದ್ದರು. ವಿಶೇಷವೆಂದರೆ ಆನಂದಿ ಬೆನ್ ಪಟೇಲ್​ ಇದೇ ಕ್ಷೇತ್ರದಿಂದ ಗೆದ್ದು ಗುಜರಾತ್​ ಮುಖ್ಯಮಂತ್ರಿಯಾಗಿದ್ದರು (2014-2016ರ ಅವಧಿ). ಇಂಜನಿಯರಿಂಗ್​ ಓದಿದ್ದ ಭೂಪೇಂದ್ರ ಪಟೇಲ್​ ಅವರು ಈ ಹಿಂದೆ ಅಹ್ಮದಾಬಾದ್​ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (AUDA)ರಾಗಿ, ಅಮದ್​ವಾಡ ಮುನ್ಸಿಪಲ್ ಕಾರ್ಪೋರೇಶನ್​ ಸ್ಥಾಯಿ ಸಮಿತಿ (AMC) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಿನ್ನೆ ವಿಜಯ್​ ರೂಪಾನಿ ರಾಜೀನಾಮೆ ನೀಡಿದ್ದು ಬಹು ಅಚ್ಚರಿ ಮೂಡಿಸಿತ್ತು. ಗುಜರಾತ್ ಚುನಾವಣೆ ಒಂದೇ ವರ್ಷದಲ್ಲಿದ್ದಾಗ ಮುಖ್ಯಮಂತ್ರಿ ಬದಲಾವಣೆ ಯಾಕೆ ಎಂಬ ಪ್ರಶ್ನೆಯನ್ನೂ ಮೂಡಿಸಿತ್ತು. ಹಾಗೇ, ಮುಖ್ಯಮಂತ್ರಿ ಹುದ್ದೆ ರೇಸ್​ನಲ್ಲಿ ಆರೋಗ್ಯ ಸಚಿವ ಮನ್​ಸುಖ್ ಮಾಂಡವಿಯಾ, ಪ್ರಫುಲ್​ ಪಟೇಲ್​ ಸೇರಿ ಇನ್ನೂ ಹಲವು ಪ್ರಮುಖ ನಾಯಕರ ಹೆಸರುಗಳು ಕೇಳಿಬಂದಿದ್ದವು. ಅದರಲ್ಲಿ ಭೂಪೇಂದ್ರ ಪಟೇಲ್​ ಹೆಸರೇನೂ ಅಷ್ಟೊಂದು ಪ್ರಾಮುಖ್ಯತೆ ಪಡೆದಿರಲಿಲ್ಲ. ಇದೀಗ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವ ಅವರು ನಾಳೆಯೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟದ ಶಂಕೆ; ಕಿರುತೆರೆ ನಟ ಆತ್ಮಹತ್ಯೆ: ಅನುಮಾನ ಮೂಡಿಸಿದ ಸಾವು

ನಂಜನಗೂಡು ದೇಗುಲ ತೆರವು ವಿಚಾರ: ದೇವಾಲಯ ಮರುನಿರ್ಮಾಣಕ್ಕೆ ಗ್ರಾಮಸ್ಥರ ತಯಾರಿ

Published On - 4:23 pm, Sun, 12 September 21