ಮುಸ್ಲಿಂ ಲೀಗ್ ಅನ್ನು ಜಾತ್ಯಾತೀತ ಪಕ್ಷ ಎಂದ ರಾಹುಲ್ ಗಾಂಧಿ; ಇದು ಅತ್ಯಂತ ದುರದೃಷ್ಟಕರ ಎಂದು ಬಿಜೆಪಿ ಟೀಕೆ

ರಿಜಿಜು ಅವರ ಮಾತುಗಳನ್ನು ಬೆಂಬಲಿಸಿದ ಬಿಜೆಪಿಯ ವಕ್ತಾರ ಮತ್ತು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ವಯನಾಡ್‌ನಲ್ಲಿ ಸ್ವೀಕಾರಾರ್ಹವಾಗಿ ಉಳಿಯವುದಕ್ಕಾಗಿರುವ ಒತ್ತಡವೇ ಕಾಂಗ್ರೆಸ್ ನಾಯಕ ಮುಸ್ಲಿಂ ಲೀಗ್ ಅನ್ನು "ಜಾತ್ಯತೀತ ಪಕ್ಷ" ಎಂದು ಕರೆಯುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಲೀಗ್ ಅನ್ನು ಜಾತ್ಯಾತೀತ ಪಕ್ಷ ಎಂದ ರಾಹುಲ್ ಗಾಂಧಿ; ಇದು ಅತ್ಯಂತ ದುರದೃಷ್ಟಕರ ಎಂದು ಬಿಜೆಪಿ ಟೀಕೆ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ

Updated on: Jun 02, 2023 | 6:15 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುರುವಾರ ‘ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್’ (IUML) ಅನ್ನು “ಜಾತ್ಯತೀತ” ಪಕ್ಷ ಎಂದು ಹೇಳಿದ್ದಾರೆ. ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿಯವರಲ್ಲಿ, ಕೇರಳದ ‘ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್’ ನೊಂದಿಗೆ ಕಾಂಗ್ರೆಸ್ ಮೈತ್ರಿ ಬಗ್ಗೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ರಾಹುಲ್ ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷ (secular) ಎಂದು ಹೇಳಿದ್ದಾರೆ. ಈ ಹೇಳಿಕೆ ಟೀಕೆಗೆ ಗುರಿಯಾಗಿದ್ದು, ಬಿಜೆಪಿ ರಾಹುಲ್​​ನ್ನು ತರಾಟೆಗೆ ತೆಗೆದುಕೊಂಡಿದೆ.

ರಾಹುಲ್ ಗಾಂಧಿ ಹೇಳಿಕೆಯನ್ನು ಅತ್ಯಂತ ದುರದೃಷ್ಟಕರ ಎಂದು ಹೇಳಿದ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಕಿರಣ್ ರಿಜಿಜು ಜಿನ್ನಾರ ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷವೇ? ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಪಕ್ಷವು ಜಾತ್ಯತೀತ ಪಕ್ಷವಾಗಿದ್ದು, ಮುಸ್ಲಿಂ ಲೀಗ್ ಅನ್ನು ಬೆಂಬಲಿಸುವ ವ್ಯಕ್ತಿಯನ್ನು ಇನ್ನೂ ಕೆಲವು ಜನರು ಸೆಕ್ಯುಲರ್ ಎಂದು ಪರಿಗಣಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಇದು ತುಂಬಾ ದುಃಖಕರ. ವಿದೇಶಿ ನೆಲದಲ್ಲಿ ರಾಷ್ಟ್ರವನ್ನು ಅವಮಾನಿಸುವುದನ್ನು ಭಾರತದ ಜನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.


ರಿಜಿಜು ಅವರ ಮಾತುಗಳನ್ನು ಬೆಂಬಲಿಸಿದ ಬಿಜೆಪಿಯ ವಕ್ತಾರ ಮತ್ತು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ವಯನಾಡ್‌ನಲ್ಲಿ ಸ್ವೀಕಾರಾರ್ಹವಾಗಿ ಉಳಿಯವುದಕ್ಕಾಗಿರುವ ಒತ್ತಡವೇ ಕಾಂಗ್ರೆಸ್ ನಾಯಕ ಮುಸ್ಲಿಂ ಲೀಗ್ ಅನ್ನು “ಜಾತ್ಯತೀತ ಪಕ್ಷ” ಎಂದು ಕರೆಯುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಆದರೆ ಜಿನ್ನಾ ಅವರ ಮುಸ್ಲಿಂ ಲೀಗ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಎರಡು ವಿಭಿನ್ನ ಪಕ್ಷಗಳು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಗಮನಸೆಳೆದಿದ್ದಾರೆ. ಮಾಳವಿಯಾ ಅವರ ಟ್ವೀಟ್ ಅನ್ನು ಉಲ್ಲೇಖಿಸಿದ ಖೇರಾ, ನೀವು ಅನಕ್ಷರಸ್ಥರೇ? ಕೇರಳ ಮುಸ್ಲಿಂ ಲೀಗ್ ಮತ್ತು ಜಿನ್ನಾ ಮುಸ್ಲಿಂ ಲೀಗ್ ನಡುವಿನ ವ್ಯತ್ಯಾಸ ನಿಮಗೆ ತಿಳಿದಿದೆಯೇ? ನಿಮ್ಮ ಪೂರ್ವಜರು ಮೈತ್ರಿ ಮಾಡಿಕೊಂಡದ್ದು ಜಿನ್ನಾರ ಮುಸ್ಲಿಂ ಲೀಗ್. ಇನ್ನೊಂದು ಮುಸ್ಲಿಂ ಲೀಗ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು ಎಂದಿದ್ದಾರೆ.

ಇದನ್ನೂ ಓದಿ2024ರ ಚುನಾವಣೆಯಲ್ಲಿ ವಿಪಕ್ಷಗಳು ಬಿಜೆಪಿಯನ್ನು ಸೋಲಿಸಲಿವೆ:ಅಮೆರಿಕದಲ್ಲಿ ರಾಹುಲ್ ಗಾಂಧಿ

ಖೇರಾ ಅವರಂತೆಯೇ, ಹಲವಾರು ಕಾಂಗ್ರೆಸ್ ಬೆಂಬಲಿಗರು 2012 ರಲ್ಲಿ ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಐಯುಎಂಎಲ್ ಜತೆ ಮೈತ್ರಿ ಮಾಡಿದರ ಬಗ್ಗೆ 10 ವರ್ಷಗಳ ಹಿಂದಿನ ಸುದ್ದಿ ವರದಿಗಳನ್ನು ಉಲ್ಲೇಖಿಸಿದ್ದಾರೆ.
ಮಾಳವಿಯಾ ಅವರನ್ನು ‘ನಕಲಿ ಸುದ್ದಿ ವ್ಯಾಪಾರಿ’ ಎಂದು ಕರೆದ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷೆ ಸುಪ್ರಿಯಾ ಶ್ರೀನಾಥೆ, ರಾಹುಲ್ ಗಾಂಧಿಯವರ ಯುಎಸ್ ಪ್ರವಾಸದ ಬಗ್ಗೆ ಟ್ರ್ಯಾಕ್ ಮಾಡಲು ನೀವು ಮತ್ತಷ್ಟು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಗುತ್ತದೆ ಎಂದಿದ್ದಾರೆ.

ಹೇ ನಕಲಿ ಸುದ್ದಿ ವ್ಯಾಪಾರಿ, ನಿದ್ದೆ ಕೆಡಿಸಿರುವುದನ್ನು ನೋಡಲು ಖುಷಿಯಾಗಿದೆ. ಆದರೆ ರಾಹುಲ್ ಗಾಂಧಿಯವರ ಅಮೆರಿಕಾ ಪ್ರವಾಸವನ್ನು ಟ್ರ್ಯಾಕ್ ಮಾಡಲು ಇನ್ನೊಂದಷ್ಟು ದಿನ ನಿದ್ದೆ ಕೆಡಿಸಿಕೊಳ್ಳಿ. ಎಂಥಾ ದುಃಖದ ಬದುಕು ಎಂದಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವವು ಜಾಗತಿಕ ಒಳಿತಿಗಾಗಿದೆ: ರಾಹುಲ್ ಗಾಂಧಿ

ಭಾರತೀಯ ಪ್ರಜಾಪ್ರಭುತ್ವವು “ಜಾಗತಿಕ ಒಳಿತಿಗಾಗಿದೆ” ಎಂದು ಪ್ರತಿಪಾದಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದರ “ಕುಸಿತವು” ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಇದು ನಮ್ಮ ಕೆಲಸ, ಇದು ನಮ್ಮ ವ್ಯವಹಾರ, ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ನಮ್ಮ ಕೆಲಸ. ಇದನ್ನು  ನಾವು ಅರ್ಥಮಾಡಿಕೊಂಡಿದ್ದೇವೆ, ನಾವು ಸ್ವೀಕರಿಸುತ್ತೇವೆ ಮತ್ತು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ನೆನಪಿಡಬೇಕಾದ ವಿಷಯವೆಂದರೆ ಭಾರತೀಯ ಪ್ರಜಾಪ್ರಭುತ್ವವು ಜಾಗತಿಕ ಒಳಿತಿಗಾಗಿ ಇರುವುದು. ಏಕೆಂದರೆ ಭಾರತವು ಸಾಕಷ್ಟು ದೊಡ್ಡದಾಗಿದೆ, ಭಾರತದಲ್ಲಿ ಪ್ರಜಾಪ್ರಭುತ್ವದ ಕುಸಿತವು ಪರಿಣಾಮ ಬೀರುತ್ತದೆ. ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಭಾರತೀಯ ಪ್ರಜಾಪ್ರಭುತ್ವವನ್ನು ಎಷ್ಟು ಗೌರವಿಸಬೇಕು ಎಂದು ಯೋಚಿಸಬೇಕು. ಆದರೆ ನಮಗೆ, ಇದು ಆಂತರಿಕ ವಿಷಯವಾಗಿದೆ. ಇದು ನಾವು ಬದ್ಧವಾಗಿರುವ ಹೋರಾಟವಾಗಿದೆ, ನಾವು ಗೆಲ್ಲಲಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Fri, 2 June 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us