ಕೇರಳದ ಕೊಲ್ಲಂನಲ್ಲಿ ದೋಣಿ ಮುಳುಗಿ 4 ಮೀನುಗಾರರು ಸಾವು; 12 ಜನರ ರಕ್ಷಣೆ

ಕೊಲ್ಲಂ ಕರಾವಳಿ ತೀರದಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿದ್ದು, ಈ ದುರಂತದಲ್ಲಿ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ.

ಕೇರಳದ ಕೊಲ್ಲಂನಲ್ಲಿ ದೋಣಿ ಮುಳುಗಿ 4 ಮೀನುಗಾರರು ಸಾವು; 12 ಜನರ ರಕ್ಷಣೆ
ಕೊಲ್ಲಂನಲ್ಲಿ ಮುಳುಗಿದ ಬೋಟ್
Updated By: ಸುಷ್ಮಾ ಚಕ್ರೆ

Updated on: Sep 02, 2021 | 4:10 PM

ಕೊಲ್ಲಂ: ಕೇರಳದ ಕೊಲ್ಲಂನ ಕರಾವಳಿ ತೀರದಲ್ಲಿ ದೋಣಿ ಮಗುಚಿದ ಪರಿಣಾಮ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದು, ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಮೀನು ಹಿಡಿಯಲು ಹೋಗಿದ್ದ ಮೀನುಗಾರರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿದ್ದು, ನಾಲ್ಕು ಮೈಲು ದೂರ ಕೊಚ್ಚಿಕೊಂಡು ಹೋಗಿತ್ತು. ಈ ದುರಂತದಲ್ಲಿ ನಾಲ್ವರು ಮೀನುಗಾರರು ಸಾವನ್ನಪ್ಪಿದ್ದಾರೆ. ಉಳಿದ 12 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಅವರಲ್ಲಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ.

ಮೃತಪಟ್ಟ ಮೀನುಗಾರರನ್ನು ತಂಕಪ್ಪನ್, ಸುದೇವನ್, ಸುನಿಲ್ ದತ್, ಶ್ರೀಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೇರಳದ ಅಲಪ್ಪುಳದ ನಿವಾಸಿಯಾಗಿದ್ದರು. ಸಮುದ್ರದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ದೋಣಿ ಮಗುಚಿತ್ತು. ಈ ವೇಳೆ ಮೀನು ಹಿಡಿಯುವ ಬಲೆ ಕೂಡ ಬೋಟ್​ನಲ್ಲಿ ಸಿಲುಕಿಕೊಂಡು ಈ ದುರಂತ ಸಂಭವಿಸಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮೀನು ಹಿಡಿದುಕೊಂಡು ಓಂಕಾರನ್ ಎಂಬ ಬೋಟ್​ನಲ್ಲಿ ವಾಪಾಸ್ ಬರುತ್ತಿದ್ದಾಗ ಬೋಟ್ ಹೊಯ್ದಾಡಲಾರಂಭಿಸಿತ್ತು. ಆ ಬೋಟ್​ನಲ್ಲಿ 16 ಜನರಿದ್ದರು. ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದು, ಉಳಿದ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗಿನ ಜಾವ 5.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಮೃತದೇಹಗಳನ್ನು ಹುಡುಕಿ, ಹೊರಗೆ ತರಲಾಗಿದೆ.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಬೋಟ್ ಮುಳುಗಿ 9 ಮೀನುಗಾರರ ಸಾವು; ಇನ್ನೊಬ್ಬರು ನಾಪತ್ತೆ

ಬಿಹಾರದ ಗಂದಕ್ ನದಿಯಲ್ಲಿ ದೋಣಿ ಮುಳುಗಿ 5 ಜನ ಸಾವು, ಐವರು ನಾಪತ್ತೆ

(Four fishermen Dead after boat capsizes near Kollam coast, 12 rescued)

Published On - 4:09 pm, Thu, 2 September 21