ಬ್ಯಾಂಕ್ ಖಾಸಗೀಕರಣದ ಬಗ್ಗೆ ರಿಸರ್ವ್ ಬ್ಯಾಂಕ್ ಜತೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ; ಶಕ್ತಿಕಾಂತ್ ದಾಸ್

ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್​ ಮತ್ತು ಕೇಂದ್ರ ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.

ಬ್ಯಾಂಕ್ ಖಾಸಗೀಕರಣದ ಬಗ್ಗೆ ರಿಸರ್ವ್ ಬ್ಯಾಂಕ್ ಜತೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ; ಶಕ್ತಿಕಾಂತ್ ದಾಸ್
ಆರ್​ಬಿಐ ಗವರ್ನರ್ ಶಕ್ತಿಕಾಂತ್​ ದಾಸ್ (ಸಂಗ್ರಹ ಚಿತ್ರ)
Edited By:

Updated on: Mar 25, 2021 | 1:33 PM

ದೆಹಲಿ: ಸಾರ್ವಜನಿಕ ರಂಗದ ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸುವ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗರ್ವನರ್ ಶಕ್ತಿಕಾಂತ್ ದಾಸ್ ಗುರುವಾರ (ಮಾರ್ಚ್ 25) ಹೇಳಿದ್ದಾರೆ. ಕೇಂದ್ರ ಸರ್ಕಾರವು ಬ್ಯಾಕಿಂಗ್ ವಲಯವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದೆ ಎಂದು ವಿವರಿಸಿದ ಅವರು, ಕೇಂದ್ರ ಸರ್ಕಾರ ಜತೆ ಬ್ಯಾಂಕ್ ಖಾಸಗೀಕರಣದ ನೀತಿಯನ್ನು ಎಲ್ಲ ಆಯಾಮಗಳಲ್ಲೂ ರಿಸರ್ವ್ ಬ್ಯಾಂಕ್ ಚರ್ಚೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ದೇಶದ ಆರ್ಥಿಕ ಸ್ಥಿತಿಯ ಕುರಿತು ಮುಂದುವರೆದು ವಿವರಿಸಿರುವ ಶಕ್ತಿಕಾಂತ್ ದಾಸ್, ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್​ ಮತ್ತು ಕೇಂದ್ರ ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.‌ ಅಲ್ಲದೇ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಖಾಸಗೀಕರಣದ ಬಗ್ಗೆಯೂ ಸರ್ಕಾರದ ಜೊತೆಗೆ ರಿಸರ್ವ್ ಬ್ಯಾಂಕ್ ಚರ್ಚೆ ನಡೆಸುತ್ತಿದೆ. ಆರ್ಥಿಕ ಚಟುವಟಿಕೆ ನಿರಾತಂಕವಾಗಿ ಮುಂದುವರಿಕೆ ಆಗಲಿದೆ. 2022 ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.10.5 ರಷ್ಟು ಬೆಳವಣಿಗೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಇತ್ತೀಚಿಗೆ ಹೇಳಿದ್ದೇನು?
ಬ್ಯಾಂಕ್ ಖಾಸಗೀಕರಣದ ಕುರಿತು ದೇಶಾದ್ಯಂತ ಚರ್ಚೆ ಬಲಗೊಳ್ಳುತ್ತಿರುವ ಹೊತ್ತಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿಗಷ್ಟೇ ಸ್ಪಷ್ಟನೆ ನೀಡಿದ್ದರು.

ಚಿಕ್ಕ ಬ್ಯಾಂಕ್​ಗಳ ವಿಲೀನದಿಂದ ದೊಡ್ಡ ಬ್ಯಾಂಕ್​ಗಳು ಸೃಷ್ಟಿಯಾಗಲಿವೆ. ಹಾಗೆಂದು ಎಲ್ಲ ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡುವುದಿಲ್ಲ. ದೇಶದ ಜನರ ಆಕಾಂಕ್ಷೆ ಈಡೇರಿಸುವ ದೃಷ್ಟಿಯಿಂದ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ತಿಳಿಸಿದ್ದರು. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಇತ್ತೀಚೆಗೆ ಕೈಗೊಂಡ  ಬ್ಯಾಂಕ್ ವಿಲೀನದ ತೀರ್ಮಾನ ದಿಢೀರ್ ನಿರ್ಧಾರವಲ್ಲ. ಹಲವು ವರ್ಷಗಳ ಚಿಂತನೆಯ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡದಿದ್ದರೂ ಬ್ಯಾಂಕ್​ಗಳ ಖಾಸಗೀಕರಣ ಪೂರ್ಣಗೊಂಡ ನಂತರ ಅಲ್ಲಿಯ ಉದ್ಯೋಗಿಗಳ ಹಿತರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.

ಯಾವುದೇ ಬ್ಯಾಂಕ್ ಆಗಲಿ, ಖಾಸಗೀಕರಣ ಪ್ರಕ್ರಿಯೆ ನಂತರ ಅಲ್ಲಿಯ ಉದ್ಯೋಗಿಗಳು ಚಿಂತೆಗೊಳಗಾಗುವುದು ಬೇಡ. ಅಂತಹ ಬ್ಯಾಂಕ್​ಗಳ ಉದ್ಯೋಗಿಗಳ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ ಖಾಸಗೀಕರಣದ ಮೂಲಕ ಎಲ್ಲ ಬ್ಯಾಂಕ್​ಗಳ ಮಾರಾಟ ಮಾಡುತ್ತಿದೆ ಎಂದು ವಿಪಕ್ಷಗಳು ದೂರುತ್ತಿವೆ. ಹಿಗೆ ದೂರುವುದು ಸರಿಯಲ್ಲ ಎಂದು ವಿಪಕ್ಷಗಳ ವಿರುದ್ಧ ಟೀಕಿಸಿದ ಅವರು, ಯುಪಿಎ ಸರ್ಕಾರದ ಕಾಲದಲ್ಲಿ ಬ್ಯಾಂಕ್​ಗಳ ನಷ್ಟದಲ್ಲಿದ್ದವು ಎಂಬುದನ್ನು ರಾಹುಲ್ ಗಾಂಧಿ ನೆನಪಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಟೀಕೆಗೆ ಪ್ರತ್ಯುತ್ತರ ನೀಡಿದ್ದರು.

ಇದನ್ನೂ ಓದಿ: ಮಹಿಳೆಯರ ಪಾಲಿಗೆ ಸಿಹಿಸುದ್ದಿ ನೀಡಿದ ಸುಪ್ರೀಂಕೋರ್ಟ್; ದೈಹಿಕ ಸಾಮರ್ಥ್ಯ ಆಧರಿತ ಕೆಲಸಗಳಲ್ಲಿ ನಿವೃತ್ತಿ ವಯಸ್ಸಿನವರೆಗೂ ಮುಂದುವರೆಯಲು ಅವಕಾಶ

 ಕೇಂದ್ರ ಸರ್ಕಾರಿ ನೌಕರರಿಗೆ ವಾರಕ್ಕೆ 4 ದಿನ- 40 ಗಂಟೆಗಳ ಕೆಲಸದ ಪದ್ಧತಿ ಪರಿಚಯಿಸುವ ಪ್ರಸ್ತಾವ ಇಲ್ಲ

guruganesh bhat
Follow Us