ಛತ್ತೀಸ್​ಗಢ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರಿಂದ ಎನ್​ಕೌಂಟರ್​, 12 ನಕ್ಸಲರ ಹತ್ಯೆ

ಛತ್ತೀಸ್‌ಗಢ ಗಡಿ ಸಮೀಪದ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಬುಧವಾರ ಪೊಲೀಸರು ಮತ್ತು ಕಮಾಂಡೋಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 12 ನಕ್ಸಲೀಯರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಯೋಧ ಗಾಯಗೊಂಡಿದ್ದಾರೆ. ಗಡ್ಚಿರೋಲಿ ಪೊಲೀಸರು ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಏಳು ಸಿ60 ಕಮಾಂಡೋ ತಂಡಗಳನ್ನು ನಿಯೋಜಿಸಿದ್ದರು.

ಛತ್ತೀಸ್​ಗಢ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರಿಂದ ಎನ್​ಕೌಂಟರ್​, 12 ನಕ್ಸಲರ ಹತ್ಯೆ
ನಕ್ಸಲರು-ಸಾಂದರ್ಭಿಕ ಚಿತ್ರ

Updated on: Jul 18, 2024 | 10:09 AM

ಛತ್ತೀಸ್​ಗಢ-ಮಹಾರಾಷ್ಟ್ರ ಗಡಿಯಲ್ಲಿ ನಡೆದ ಪೊಲೀಸ್​ ಎನ್​ಕೌಂಟರ್​ನಲ್ಲಿ 12 ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ನಕ್ಸಲರು ಅಡಗಿರುವ ಪ್ರದೇಶದ ಕುರಿತು ಮಾಹಿತಿ ಪಡೆದಿದ್ದ 200 ಕಮಾಂಡೋಗಳು ಹೆಲಿಕಾಪ್ಟರ್​ ಮೂಲಕ ದಟ್ಟ ಅರಣ್ಯ ತಲುಪಿದ್ದರು. ಛತ್ತೀಸ್‌ಗಢದ ಗಡಿ ಸಮೀಪದ ವಂಡೋಲಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಎನ್‌ಕೌಂಟರ್ ನಡೆದಿದ್ದು, ಆರು ಗಂಟೆಗಳಿಗೂ ಹೆಚ್ಚು ಕಾಲ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.

ಸುಮಾರು 12-15 ಮಾವೋವಾದಿಗಳು ಬೀಡು ಬಿಟ್ಟಿದ್ದಾರೆ ಎಂದು ಪೊಲೀಸರಿಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಲಭಿಸಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ CRACK C-60 ಕಮಾಂಡೋಗಳ ಏಳು ತಂಡಗಳು ಅಲ್ಲಿಗೆ ತಲುಪಿದವು. ಇದರ ಬೆನ್ನಲ್ಲೇ ಭಾರೀ ಗುಂಡಿನ ಚಕಮಕಿ ಆರಂಭವಾಯಿತು. ಸಂಜೆಯವರೆಗೂ ಪಾಖಂಜೂರಿನ ಅರಣ್ಯದಲ್ಲಿ ಗುಂಡಿನ ಚಕಮಕಿ ಮುಂದುವರಿದಿತ್ತು.

ಎನ್‌ಕೌಂಟರ್ ನಂತರ, ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ನಡೆಸಿತು ಮತ್ತು 12 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಂಡಿದೆ. ಪೊಲೀಸರು ಮೂರು ಎಕೆ-47, ಎರಡು INSAS ರೈಫಲ್‌ಗಳು, ಒಂದು ಕಾರ್ಬೈನ್ ಮತ್ತು ಒಂದು SLR ಸೇರಿದಂತೆ ಏಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಲ್ಲಲ್ಪಟ್ಟ ಮಾವೋವಾದಿಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಡಿವಿಸಿಎಂ ಲಕ್ಷ್ಮಣ್ ಅತ್ರಾಮ್ ಅಲಿಯಾಸ್ ವಿಶಾಲ್ ಅತ್ರಮ್ ಸೇರಿದ್ದಾರೆ, ಅವರು ತಿಪಗಡ ದಳದ ಉಸ್ತುವಾರಿ ವಹಿಸಿದ್ದರು.

ಮತ್ತಷ್ಟು ಓದಿ: ಛತ್ತೀಸ್‌ಗಢದ ಅಬುಜ್ಮಾರ್‌ನಲ್ಲಿ ಎನ್‌ಕೌಂಟರ್‌; 8 ನಕ್ಸಲರ ಹತ್ಯೆ, ಓರ್ವ ಭದ್ರತಾ ಸಿಬ್ಬಂದಿ ಸಾವು

ಯಶಸ್ವಿ ಕಾರ್ಯಾಚರಣೆಗಾಗಿ ಸಿ-60 ಕಮಾಂಡೋಗಳು ಮತ್ತು ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂಪಾಯಿ ನಗದು ಬಹುಮಾನವನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ, ಛತ್ತೀಸ್‌ಗಢದ ಗಡಿಯ ಸಮೀಪವಿರುವ ದಟ್ಟವಾದ ವಂಡೋಲಿ ಅರಣ್ಯಗಳಲ್ಲಿ ಭಾರೀ ಮಳೆಯ ನಡುವೆ 200 ಪೊಲೀಸ್ ಕಮಾಂಡೋಗಳನ್ನು ಏರ್‌ಲಿಫ್ಟ್ ಮಾಡಲಾಯಿತು. ಈ ಅವಧಿಯಲ್ಲಿ ಭದ್ರತಾ ಪಡೆಗಳು 2,000ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದರು.ಮೃತರಲ್ಲಿ ಮಹಿಳಾ ಮಾವೋವಾದಿ ಮತ್ತು ಚಿತ್ತಗಾಂಗ್ ಸಮಿತಿ ಸದಸ್ಯೆ ಸರಿತಾ ಪರ್ಸಾ ಕೂಡ ಸೇರಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ