Chakka Jam: ಇಂದು ಮಧ್ಯಾಹ್ನ ರಸ್ತೆ ತಡೆ ಪ್ರೋಗ್ರಾಂ, ದೆಹಲಿ ಗಡಿಭಾಗಗಳಲ್ಲಿ ಪೊಲೀಸ್ ಬಿಗಿ ಭದ್ರತೆ

Farmers Protest: ಉತ್ತರ ಪ್ರದೇಶ-ದೆಹಲಿ ಗಡಿಭಾಗವಾದ ಗಾಜಿಪುರ್​ನಲ್ಲಿ ರೈತರು ಚಳುವಳಿ ಮುಂದುವರಿಸಿದ್ದಾರೆ. ಗಣರಾಜ್ಯೋತ್ಸವ ದಿನದ ಬಳಿಕ, ರೈತರು ಆಯೋಜಿಸಿರುವ ದೊಡ್ಡ ಪ್ರತಿಭಟನೆ ಇದಾಗಿದೆ.

Chakka Jam: ಇಂದು ಮಧ್ಯಾಹ್ನ ರಸ್ತೆ ತಡೆ ಪ್ರೋಗ್ರಾಂ, ದೆಹಲಿ ಗಡಿಭಾಗಗಳಲ್ಲಿ ಪೊಲೀಸ್ ಬಿಗಿ ಭದ್ರತೆ
ಪೊಲೀಸ್ ಬಿಗಿ ಭದ್ರತೆ
Edited By:

Updated on: Apr 06, 2022 | 8:15 PM

ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು (ಫೆ.6) ದೇಶಾದ್ಯಂತ ರಸ್ತೆ ತಡೆ ನಡೆಸಿ ಹೋರಾಟ ಮಾಡಲು ಮುಂದಾಗಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಒಟ್ಟು ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ನೂತನ ಕೃಷಿ ಕಾಯ್ದೆಗಳು ಕೃಷಿ ವಿರೋಧಿ ಎಂಬ ಕಾರಣಕ್ಕೆ ಅವುಗಳನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ಉತ್ತರ ಪ್ರದೇಶ-ದೆಹಲಿ ಗಡಿಭಾಗವಾದ ಗಾಜಿಪುರ್​ನಲ್ಲಿ ರೈತರು ಚಳುವಳಿ ಮುಂದುವರಿಸಿದ್ದಾರೆ. ಗಣರಾಜ್ಯೋತ್ಸವ ದಿನದ ಬಳಿಕ, ರೈತರು ಆಯೋಜಿಸಿರುವ ದೊಡ್ಡ ಪ್ರತಿಭಟನೆ ಇದಾಗಿದೆ.

ಗಣತಂತ್ರ ದಿನದಂದು ರೈತರ ಪ್ರತಿಭಟನೆಯು ಹಿಂಸಾತ್ಮಕ ರೂಪ ತಾಳಿತ್ತು. ನಿಗದಿತ ರಸ್ತೆಯ ಬದಲಾಗಿ, ಬೇರೆ ಮಾರ್ಗದಲ್ಲಿ ಚಳುವಳಿಕಾರರು ಟ್ರ್ಯಾಕ್ಟರ್ ಚಲಾಯಿಸಿ, ಕೆಂಪುಕೋಟೆಯವರೆಗೂ ಲಗ್ಗೆ ಇಟ್ಟಿದ್ದರು. ಯೋಜನೆಯಂತೆ ಶಾಂತಿಯುತ ಪ್ರತಿಭಟನೆ ನಡೆದಿರಲಿಲ್ಲ. ಇಂದು ಅಂತಹ ಯಾವುದೇ ಅನುಚಿತ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಶಾಂತಿಯುತ ಪ್ರತಿಭಟನೆ ನಡೆಸಲು ರೈತ ಮುಖಂಡರು ಕರೆ ನೀಡಿದ್ದಾರೆ.

ರೈತ ಸಂಘಟನೆ, ಸಂಯುಕ್ತ ಕಿಸಾನ್ ಮೋರ್ಚಾ ರಸ್ತೆ ತಡೆಗೆ (Chakka Jam) ಕರೆ ನೀಡಿದೆ. ಕೇಂದ್ರ ಸರ್ಕಾರ ರೈತರ ಅಹವಾಲನ್ನು ಕಡೆಗಣಿಸಿದೆ ಮತ್ತು ಪ್ರತಿಭಟನಾ ನಿರತ ಪ್ರದೇಶಗಳಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಿದೆ ಎಂಬ ವಿಚಾರವನ್ನು ವಿರೋಧಿಸಿ ರೈತ ಸಂಘಟನೆಗಳು ರಸ್ತೆ ತಡೆ ನಡೆಸುತ್ತಿವೆ. ದೆಹಲಿ ಗಡಿಭಾಗ, ಉತ್ತರ ಪ್ರದೇಶ, ಹರ್ಯಾಣ, ರಾಜಸ್ಥಾನ ಹಾಗೂ ಮತ್ತಿತರ ಭಾಗಗಳಲ್ಲಿ ರೈತರ ಪ್ರತಿಭಟನೆ ನಡೆಯಲಿದೆ.

ರಸ್ತೆ ತಡೆಯ ಬಗ್ಗೆ ಮಾತನಾಡಿರುವ ರಾಕೇಶ್ ಟಿಕಾಯತ್, ದೆಹಲಿಯಲ್ಲಿ ನಾವು ರಸ್ತೆ ತಡೆ ಮಾಡುತ್ತಿಲ್ಲ. ಅಲ್ಲಿ ದೇಶ ನಾಯಕರೇ ರಸ್ತೆ ಮುಚ್ಚಿದ್ದಾರೆ. ಅಲ್ಲಿ ನಾವು ರಸ್ತೆ ತಡೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ರೈತರು ದೆಹಲಿ ಗಡಿಭಾಗಗಳಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ನೂತನ ಕೃಷಿ ಕಾಯ್ದೆಗಳು ಬಂಡವಾಳಶಾಹಿಗಳಿಗೆ ಲಾಭದಾಯಕವಾಗಿದೆ ಹೊರತು ರೈತರಿಗಲ್ಲ ಎಂಬುದು ರೈತರ ಆರೋಪವಾಗಿದೆ.

ಇದನ್ನೂ ಓದಿ: Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್

ಭದ್ರತೆಗಾಗಿ 50 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರ ಅಹೋರಾತ್ರಿ ಪ್ರತಿಭಟನೆ 70 ದಿನಗಳಿಂದ ನಡೆಯುತ್ತಿದೆ. ಈ ಬಗ್ಗೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಪ್ರತಿಕ್ರಿಯೆ ನೀಡಿದೆ. ಧರಣಿ ನಿರತರು, ಅಧಿಕಾರಿಗಳು ಸಂಯಮದಿಂದ ವರ್ತಿಸಬೇಕು. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಬಹಳ ಮುಖ್ಯ ಎಂದು ಸಲಹೆ ನೀಡಿದೆ.

ರೈತರ ಹೋರಾಟದ ಅಂಗವಾಗಿ ನಡೆಯುತ್ತಿರುವ ಹೆದ್ದಾರಿ ತಡೆಗೆ, ದೆಹಲಿಯಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಆಯೋಜಿಸಲಾಗಿದೆ. ದೆಹಲಿಯಲ್ಲಿ ಭದ್ರತೆಗಾಗಿ 50 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದೆ. ಪ್ಯಾರಾ ಮಿಲಿಟರಿ ಪಡೆ, ಡ್ರೋನ್ ಕಣ್ಗಾವಲು ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಕಾಯುತ್ತಿದೆ. ದೆಹಲಿ, ನೋಯ್ಡಾ, ಗುರುಗ್ರಾಮದಲ್ಲಿ ಹೆಚ್ಚುವರಿ ಭದ್ರತೆ ಮತ್ತು ದೆಹಲಿಯ 12 ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹೈಅಲರ್ಟ್ ಮಾಡಲಾಗಿದೆ.

ಡ್ರೋನ್ ಕಣ್ಗಾವಲು

ಪೊಲೀಸ್ ಭದ್ರತೆ

Farmers Protest: ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ; ಷರತ್ತು ವಿಧಿಸಿದ ಪೊಲೀಸರು

Published On - 11:21 am, Sat, 6 February 21