
ಶ್ರೀನಗರ, ಸೆಪ್ಟೆಂಬರ್ 09: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವಂದೇ ಮಾತರಂ’ ಗೀತೆ ಹಾಡಿದಾಗ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಎದ್ದುನಿಂತು ಗೌರವ ಸಲ್ಲಿಸಿದ್ದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಪೂರ್ಣ ಗೀತೆಯನ್ನು ನುಡಿಸಿರುವುದಕ್ಕೆ ಮಿತ್ರಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್ಸಿಯು “ನಮ್ಮ ಮೇಲೆ ಯಾರೂ ನಿರ್ಬಂಧ ಹೇರಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದೆ. ಇದೇ ವೇಳೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಪಕ್ಷವನ್ನು 21ನೇ ಶತಮಾನದ ನವ ಮುಸ್ಲಿಂ ಲೀಗ್ ಎಂದು ಕರೆದಿದೆ.
ವೇದಿಕೆಯಲ್ಲಿ ಅಬ್ದುಲ್ಲಾ ಜೋಡಿ ಎದ್ದು ನಿಂತರು: ಶ್ರೀನಗರದಲ್ಲಿ ನಡೆದ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ನುಡಿಸಲಾಯಿತು. ಈ ವೇಳೆ ವೇದಿಕೆಯಲ್ಲಿದ್ದ ಒಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಇಬ್ಬರೂ ಹಾಡು ಮುಗಿಯುವವರೆಗೂ ಎದ್ದುನಿಂತು ಗೌರವ ಸೂಚಿಸಿದರು.
ಕಾಂಗ್ರೆಸ್ ಅಪಸ್ವರ: ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ಪೂರ್ಣ ವಂದೇ ಮಾತರಂ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದ ಬಹುತ್ವದ ಭಾರತದ ಕಲ್ಪನೆಗೆ ಹೊಂದಿಕೆಯಾಗುವುದಿಲ್ಲ. ರವೀಂದ್ರನಾಥ ಟ್ಯಾಗೋರ್, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್ ಅವರ ನಿರ್ಧಾರವನ್ನು ಗೌರವಿಸಿ, ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ನಿಲುವಿಗೆ ಮಿತ್ರಪಕ್ಷ ಎನ್ಸಿ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಎನ್ಸಿ ತೀಕ್ಷ್ಣ ತಿರುಗೇಟು: ಕಾಂಗ್ರೆಸ್ನ ಸಲಹೆಯನ್ನು ತಳ್ಳಿಹಾಕಿದ ಎನ್ಸಿ ಮುಖಂಡ ಬಶೀರ್ ಅಹ್ಮದ್, “ಮೈತ್ರಿಕೂಟದಲ್ಲಿ ಇದ್ದೇವೆ ಎಂದ ಮಾತ್ರಕ್ಕೆ ನಮ್ಮ ಮೇಲೆ ಷರತ್ತುಗಳನ್ನು ಹೇರಲು ಸಾಧ್ಯವಿಲ್ಲ. ಎಷ್ಟು ಹಾಡಬೇಕು, ಹಾಡಬಾರದು ಎಂಬುದು ಜನರ ಆಯ್ಕೆ” ಎಂದು ಸ್ಪಷ್ಟಪಡಿಸಿದರು.
ಪೋಸ್ಟ್
The full version of Vande Mataram sits uneasily with the syncretic and pluralist ethos that our freedom fighters envisioned and nurtured for India.
For us, the considered judgment of Mahatma Gandhi, Pandit Nehru, Sardar Patel, Subhash Chandra Bose, Rajendra Prasad, Acharya… pic.twitter.com/VngmVUmevz
— K C Venugopal (@kcvenugopalmp) September 8, 2026
ಬಿಜೆಪಿ ಕಿಡಿ: ಈ ವಿವಾದಕ್ಕೆ ಧುಮುಕಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, “ಪೂರ್ಣ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮೂಲಭೂತವಾದಿಗಳಿಗೆ ಶರಣಾಗಿದ್ದು, 21ನೇ ಶತಮಾನದ ಮುಸ್ಲಿಂ ಲೀಗ್ ಆಗಿದೆ” ಎಂದು ಟೀಕಿಸಿದರು. ಕಣಿವೆಯ ಪ್ರತ್ಯೇಕತಾವಾದಿಗಳು ಕೂಡ ಎಂದೂ ಇಂತಹ ಆಕ್ಷೇಪ ಎತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಆರ್.ಎಸ್. ಪಠಾನಿಯಾ ಆಕ್ರೋಶ ವ್ಯಕ್ತಪಡಿಸಿದರು.
ಮತ್ತಷ್ಟು ಓದಿ: ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ ಕುರಿತು ಕಳವಳ ವ್ಯಕ್ತಪಡಿಸಿದ ಸಿಎಂ ಒಮರ್ ಅಬ್ದುಲ್ಲಾ
1937ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ, ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳು ಪ್ರಕೃತಿ ಮತ್ತು ತಾಯ್ನಾಡಿನ ಸೌಂದರ್ಯವನ್ನು ವರ್ಣಿಸುವುದರಿಂದ ಅವುಗಳನ್ನು ಮಾತ್ರ ಸಾರ್ವಜನಿಕವಾಗಿ ಹಾಡಲು ನಿರ್ಧರಿಸಲಾಗಿತ್ತು. ಮುಂದಿನ ಚರಣಗಳಲ್ಲಿ ದುರ್ಗಾ ದೇವಿಯ ಉಲ್ಲೇಖವಿರುವುದರಿಂದ ಅದು ಇತರ ಧರ್ಮೀಯರ ಭಾವನೆಗೆ ತೊಡಕಾಗಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಕೇಂದ್ರ ಸರ್ಕಾರದ ನೂತನ ನಿಯಮ: ಕೇಂದ್ರ ಸರ್ಕಾರವು ಎಲ್ಲಾ ಅಧಿಕೃತ ಕಾರ್ಯಕ್ರಮಗಳು, ಶಾಲೆಗಳು ಮತ್ತು ಸರ್ಕಾರಿ ಸಮಾರಂಭಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸುವ ಮುನ್ನ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ಇತ್ತೀಚೆಗೆ ಆದೇಶಿಸಿರುವುದು ಈ ರಾಜಕೀಯ ಜಟಾಪಟಿಗೆ ಪ್ರಮುಖ ಕಾರಣವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ