ಕೇರಳ: ಹಿರಿಯ ಮುಸ್ಲಿಂ ವ್ಯಕ್ತಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿ ವಾರ್ಷಿಕ ಮಹೋತ್ಸವ ರದ್ದು ಮಾಡಿದ ಹಿಂದೂ ದೇವಾಲಯ

ಹೈದರ್ ನಮಗೆ ಹಾಗೂ ಹಳ್ಳಿಯಲ್ಲಿದ್ದ ಹಿಂದೂ ಸಮಾಜಕ್ಕೆ ತುಂಬಾ ಹತ್ತಿರವಾಗಿದ್ದರು. ಒಂದಾನೊಂದು ಕಾಲದಲ್ಲಿ ಮರದ ವ್ಯಾಪಾರಿಯಾಗಿದ್ದ ಅವರು ದೇವಸ್ಥಾನದ ಎದುರುಗಡೆಯೇ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಹೈದರ್ ಮೃತಪಟ್ಟಿದ್ದಾರೆ

ಕೇರಳ: ಹಿರಿಯ ಮುಸ್ಲಿಂ ವ್ಯಕ್ತಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿ ವಾರ್ಷಿಕ ಮಹೋತ್ಸವ ರದ್ದು ಮಾಡಿದ ಹಿಂದೂ ದೇವಾಲಯ
ಪ್ರಾತಿನಿಧಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Feb 17, 2022 | 8:27 PM

ತಿರೂರ್: ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಹಿಂದೂ ದೇವಾಲಯವೊಂದು ಕಳೆದ ವಾರ ಫೆಬ್ರವರಿ 11 ರ ರಾತ್ರಿ ಸಾವನ್ನಪ್ಪಿದ ಮುಸ್ಲಿಂ ವ್ಯಕ್ತಿಗೆ ಗೌರವ ಸೂಚಕವಾಗಿ ಮಹೋತ್ಸವವನ್ನು ರದ್ದು ಮಾಡಿದೆ. ಮುಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಯಾದ ಮಲಪ್ಪುರಂನ (Malappuram) ಬೀರಂಚಿರಾ ಗ್ರಾಮದ ಪುನ್ನಶ್ಶೇರಿ ಭಗವತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವನ್ನು ಆಚರಿಸುತ್ತಿದ್ದಾಗ, ಅದೇ ಊರಿನ ನಿವಾಸಿ ಚೆರತ್ತಿಲ್ ಹೈದರ್ ಎಂಬ 72 ವರ್ಷದ ವ್ಯಕ್ತಿ ಕಳೆದ ಶುಕ್ರವಾರ ನಿಧನರಾದರು. ಶನಿವಾರದವರೆಗೆ ನಡೆಯಬೇಕಿದ್ದ ದೇವಾಲಯದ ಮೆರವಣಿಗೆ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ದೇವಾಲಯದ ಅಧಿಕಾರಿಗಳು ನಿರ್ಧರಿಸಿದರು. ದೇವಾಲಯದಲ್ಲಿ ಸೀಮಿತ ಆಚರಣೆಗಳನ್ನು ಮಾತ್ರ ನಡೆಸಲಾಗಿತ್ತು. ಹೈದರ್ ನಮಗೆ ಹಾಗೂ ಹಳ್ಳಿಯಲ್ಲಿದ್ದ ಹಿಂದೂ ಸಮಾಜಕ್ಕೆ ತುಂಬಾ ಹತ್ತಿರವಾಗಿದ್ದರು. ಒಂದಾನೊಂದು ಕಾಲದಲ್ಲಿ ಮರದ ವ್ಯಾಪಾರಿಯಾಗಿದ್ದ ಅವರು ದೇವಸ್ಥಾನದ ಎದುರುಗಡೆಯೇ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಹೈದರ್ ಮೃತಪಟ್ಟಿದ್ದಾರೆ ಎಂದು ನಮಗೆ ತಿಳಿಸಲಾಯಿತು. ಕೊವಿಡ್-19 ನಿಯಮಾವಳಿಗಳನ್ನು ಸಡಿಲಿಸಿದ ನಂತರ ದೇವಸ್ಥಾನವು ಆಚರಣೆಗಳನ್ನು ಆರಂಭ ಮಾಡಿದ್ದೆವು. ಹಲವಾರು ಮೆರವಣಿಗೆಗಳು ದೇವಸ್ಥಾನಕ್ಕೆ ಹೋಗುತ್ತಿದ್ದವು. ನಾವು ಮೆರವಣಿಗೆಗಳನ್ನು ಸ್ಥಗಿತಗೊಳಿಸಿದ್ದೇವೆ ಎಂದು ದೇವಸ್ಥಾನ ಸಮಿತಿ ಉಪಾಧ್ಯಕ್ಷ ಎಂ ವಿ ವಾಸು ಸೋಮವಾರ ಹೇಳಿದ್ದಾರೆ.

ದೇವಸ್ಥಾನದ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸ್ಥಳೀಯ ಪಂಚಾಯಿತಿ ಸದಸ್ಯ ಪಿ.ಮುಸ್ತಫಾ ಹೇಳಿದರು. “ಜನಾಝಾ (ಅಂತ್ಯಕ್ರಿಯೆಯ ಪ್ರಾರ್ಥನೆ) ಸಮಯದಲ್ಲಿ,ದೇವಸ್ಥಾನದ ಪದಾಧಿಕಾರಿಗಳು ಮತ್ತು ಹಿಂದೂ ಸಮುದಾಯದ ಪ್ರೀತಿಯನ್ನು ಪ್ರಶಂಸಿಸಲಾಯಿತು. ಹೈದರ್ ಹಳ್ಳಿಯ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರು, ”ಎಂದು ಅವರು ಹೇಳಿದರು.

ದೇಗುಲ ಸಮಿತಿ ಪದಾಧಿಕಾರಿಗಳಾದ ಟಿ.ಪಿ.ವೇಲಾಯುಧನ್, ಎ.ವಿ.ವಾಸು, ಟಿ.ಪಿ.ಅನಿಲ್ ಕುಮಾರ್, ಕೆ.ಪಿ.ಸುರೇಶ್, ಬಾಬು ಪುನ್ನಶ್ಶೇರಿ, ಪ್ರೇಮನ್ ಪುನ್ನಶ್ಶೇರಿ, ಕೆ.ಇ.ಸುರೇಶ್ ಮಾತನಾಡಿ, ಊರಿನ ಹಿರಿಯರ ನಿಧನದಿಂದಾಗಿತ್ಸವ ಕೈಬಿಡಲು ನಿರ್ಧರಿಸಲಾಗಿದೆ. ಕುಟುಂಬ ಸದಸ್ಯರು ಮತ್ತು ಸ್ಥಳೀಯ ಜನರು ದುಃಖಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಇದು ಅಸಂಬದ್ಧ’: ಪಂಜಾಬ್ ಸಿಎಂ ಭಯ್ಯಾಸ್ ಹೇಳಿಕೆಗೆ ಬಿಹಾರ ಸಿಎಂ ನಿತೀಶ್ ಪ್ರತಿಕ್ರಿಯೆ