Mohammadean Law: ಅಮ್ಮ ಇಸ್ಲಾಂಗೆ ಮತಾಂತರ; ಹಿಂದೂ ಧರ್ಮೀಯ ಮಕ್ಕಳಿಗಿಲ್ಲ ಆಸ್ತಿ: ಗುಜರಾತ್ ಕೋರ್ಟ್​ನಲ್ಲೊಂದು ಪ್ರಕರಣ

Only Muslim Can Be Class I Heir To Muslims Property: ಇಸ್ಲಾಂಗೆ ಮತಾಂತರಗೊಂಡು ಸಾವನ್ನಪ್ಪಿದ ಅಮ್ಮನ ಆಸ್ತಿಯಲ್ಲಿ ಪಾಲು ಕೇಳಲು ಹೋದ ಹಿಂದೂ ಹೆಣ್ಮಕ್ಕಳ ಅರ್ಜಿಯನ್ನು ಗುಜರಾತ್​ನ ಕೋರ್ಟ್​ವೊಂದು ತಿರಸ್ಕರಿಸಿದೆ.

Mohammadean Law: ಅಮ್ಮ ಇಸ್ಲಾಂಗೆ ಮತಾಂತರ; ಹಿಂದೂ ಧರ್ಮೀಯ ಮಕ್ಕಳಿಗಿಲ್ಲ ಆಸ್ತಿ: ಗುಜರಾತ್ ಕೋರ್ಟ್​ನಲ್ಲೊಂದು ಪ್ರಕರಣ
ಇಸ್ಲಾಮಿಕ್ ಕಾನೂನು

Updated on: Feb 05, 2023 | 4:18 PM

ಅಹ್ಮದಾಬಾದ್: ಮುಸ್ಲಿಂ ಮಹಿಳೆಯ ಆಸ್ತಿಯ ಹಕ್ಕು (Heirs To Muslim Property) ಕೇಳಲು ಹೋದ ಆಕೆಯ ಮೂವರು ಹಿಂದೂ ಧರ್ಮಸ್ಥ ಹೆಣ್ಮಕ್ಕಳ ಅರ್ಜಿಯನ್ನು ಗುಜರಾತ್​ನ ನ್ಯಾಯಾಲಯವೊಂದು ವಜಾಗೊಳಿಸಿದೆ. ಮಹಮದೀಯ ಕಾನೂನು (Mohammadean Law) ಪ್ರಕಾರ ಮುಸ್ಲಿಮರ ಆಸ್ತಿಯ ಹಕ್ಕು ಹಿಂದೂಗಳಿಗೆ ಇರುವುದಿಲ್ಲ ಎಂದು ಅಹ್ಮದಾಬಾದ್​ನ ಸ್ಥಳೀಯ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಿಧನ ಹೊಂದಿದ ಆ ಮುಸ್ಲಿಂ ಮಹಿಳೆಯ ಆಸ್ತಿಗೆ ಆಕೆಯ ಮಗ ನಿಜವಾದ ವಾರಸುದಾರ ಎಂದು ಕೋರ್ಟ್ ತೀರ್ಮಾನಿಸಿದೆ.

ಏನಿದು ಘಟನೆ?: ಈ ಮುಸ್ಲಿಂ ಮಹಿಳೆಯ ಮೂಲ ಹೆಸರು ರಂಜನ್ ತ್ರಿಪಾಠಿ. ಈಕೆಯ ಗಂಡ ಬಿಎಸ್​ಎನ್​ಎಲ್ ಉದ್ಯೋಗಿಯಾಗಿದ್ದು, 1979ರಲ್ಲಿ ಸಾವನ್ನಪ್ಪಿರುತ್ತಾರೆ. ಆಗ ಈಗ ದಂಪತಿಗೆ ಇಬ್ಬರು ಹೆಣ್ಮಕ್ಕಳಿರುತ್ತಾರೆ. ಜೊತೆಗೆ ರಂಜನ್ ತ್ರಿಪಾಠಿ ಗರ್ಭಿಣಿಯಾಗಿದ್ದು ನಂತರ ಮೂರನೇ ಹೆಣ್ಮಗುವಿಗೆ ಜನ್ಮ ನೀಡುತ್ತಾರೆ. ನಂತರ ಗಂಡ ಕೆಲಸ ಮಾಡುತ್ತಿದ್ದ ಬಿಎಸ್​ಎನ್​ಎಲ್​ನಲ್ಲಿ ಈಕೆಗೆ ಉದ್ಯೋಗ ಸಿಗುತ್ತದೆ.

ಇದಾದ ಬಳಿಕ ರಂಜನಾ ತನ್ನ ಕುಟುಂಬವನ್ನು ಬಿಟ್ಟು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು 1995ರಲ್ಲಿ ಮದುವೆಯಾಗುತ್ತಾರೆ. ರಂಜನಾ ತ್ರಿಪಾಠಿ ಹೆಸರು ರೆಹನಾ ಮಾಲಿಕ್ ಎಂದು ಬದಲಾಗುತ್ತದೆ. ಹೊಸ ದಾಂಪತ್ಯದಲ್ಲಿ ರೆಹನಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಅತ್ತ ಈಕೆಯ ಮೂವರು ಹೆಣ್ಮಕ್ಕಳನ್ನು ಅಪ್ಪನ ಕುಟುಂಬದವರು ಪೋಷಿಸುತ್ತಾರೆ. ರೆಹಾನ ಮಲಿಕ್ ಕೆಲ ವರ್ಷಗಳ ಬಳಿಕ ನಿಧನ ಹೊಂದುತ್ತಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಸರ್ಕಾರ ಕ್ರಮ; ಕಾನೂನು ಬಗ್ಗೆ ತಿಳಿದಿಲ್ಲ, ಹದಿಹರೆಯದಲ್ಲೇ ಅಮ್ಮನಾದ ಬಾಲಕಿಯರ ಕಣ್ಣೀರು

ಈಗ ರೆಹನಾ ಮಲಿಕ್​ರ ಮೂವರು ಹೆಣ್ಮಕ್ಕಳು ಅಮ್ಮನ ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟ್ ಮೆಟ್ಟಿಲೇರುತ್ತಾರೆ. ತನ್ನ ಅಪ್ಪ ಸಾವನ್ನಪ್ಪಿದ್ದರಿಂದ ಅಮ್ಮನಿಗೆ ಕೆಲಸ ಸಿಕ್ಕಿದೆ. ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ತಮಗಿದೆ ಎಂದು ಈ ಹೆಣ್ಮಕ್ಕಳು ವಾದಿಸುತ್ತಾರೆ.

ಆದರೆ, ನ್ಯಾಯಾಲಯವು ಮೊಹಮ್ಮಡನ್ ಕಾನೂನನ್ನು ಉಲ್ಲೇಖಿಸಿ ಹೆಣ್ಮಕ್ಕಳ ಮನವಿಯನ್ನು ತಿರಸ್ಕರಿಸುತ್ತದೆ. ನಿಧನ ಹೊಂದಿದವರು ಮುಸ್ಲಿಮರಾಗಿದ್ದರೆ ಅವರ ಕ್ಲಾಸ್ ಒನ್ ವಾರಸುದಾರರು ಹಿಂದೂಗಳಾಗಲು ಸಾಧ್ಯವಿಲ್ಲ. ಮುಸ್ಲಿಮರು ಮಾತ್ರ ಆಸ್ತಿಯಲ್ಲಿ ಹಕ್ಕು ಕೇಳಲು ಸಾಧ್ಯ ಎಂದು ಮಹಮ್ಮದೀಯ ಕಾನೂನು ಹೇಳುತ್ತದೆ. ತಾಯಿಯು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ಆದ ಬಳಿಕ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಆದ್ದರಿಂದ ಆ ಗಂಡು ಮಗುವೇ ಕ್ಲಾಸ್ ಒನ್ ವಾರಸುದಾರ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us