Bengal Blast: ಬಂಗಾಳ ಸ್ಫೋಟಕ್ಕೆ ಟಿಎಂಸಿ ಕಾರ್ಯಕರ್ತ ಬಲಿ ಘಟನೆ: ಮಾವೋವಾದಿಗಳ ಮೇಲೆ ಶಂಕೆ

TMC Alleges Maoists Behind Bomb Blast In Birbhum District: ಫೆಬ್ರುವರಿ 4ರಂದು ಪಶ್ಚಿಮ ಬಂಗಾಳದ ಬೀರ್​ಭೂಮ್​ನ ಗ್ರಾಮವೊಂದರಲ್ಲಿ ಒಬ್ಬ ವ್ಯಕ್ತಿಯ ಬಲಿಪಡೆದ ಬಾಂಬ್ ಸ್ಫೋಟ ವಿಚಾರಕ್ಕೆ ಅಲ್ಲಿ ರಾಜಕೀಯ ಕೆಸರೆರಚಾಟ ನಡೆದಿದೆ.

Bengal Blast: ಬಂಗಾಳ ಸ್ಫೋಟಕ್ಕೆ ಟಿಎಂಸಿ ಕಾರ್ಯಕರ್ತ ಬಲಿ ಘಟನೆ: ಮಾವೋವಾದಿಗಳ ಮೇಲೆ ಶಂಕೆ
ಬಂಗಾಳ ಸ್ಫೋಟಕ್ಕೆ ಟಿಎಂಸಿ ಕಾರ್ಯಕರ್ತ ಬಲಿ

Updated on: Feb 05, 2023 | 3:33 PM

ಕೋಲ್ಕತಾ: ಪಶ್ಚಿಮ ಬಂಗಾಳದ ಬೀರ್​ಭೂಮ್ ಜಿಲ್ಲೆಯ ಮಾರ್​ಗ್ರಾಮ್ ಬಳಿ ಸಂಭವಿಸಿದ ಬಾಂಬ್ ಸ್ಫೋಟ (Bomb Blast in West Bengal) ಘಟನೆಯಲ್ಲಿ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್​ನ ಕಾರ್ಯಕರ್ತರೊಬ್ಬರು ಬಲಿಯಾಗಿದ್ದಾರೆ. ಈ ಘಟನೆ ಇಂದು ಭಾನುವಾರ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ (Political blame game) ಕಾರಣವಾಗಿದೆ. ಶನಿವಾರ ನಡೆದ ಈ ದುರ್ಘಟನೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸಹೋದರನಿಗೆ ಗಾಯವಾಗಿದೆ. ಸಾವನ್ನಪ್ಪಿದ ವ್ಯಕ್ತಿ ನ್ಯೂಟನ್ ಶೇಖ್ ಆಗಿದ್ದರೆ, ಗಾಯಗೊಂಡ ಲಾಲ್ತು ಶೇಖ್ ಅವರನ್ನು ಕೋಲ್ಕತಾದ ಎಸ್​ಎಸ್​ಕೆಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ವೇಳೆ, ಬಾಂಬ್ ಸ್ಫೋಟ ನಡೆಸಿದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಮಾವೋವಾದಿ ಉಗ್ರರು ಮತ್ತು ಕಾಂಗ್ರೆಸ್​ನತ್ತ ಹಲವರು ಬೊಟ್ಟು ಮಾಡಿದ್ದಾರೆ. ಇನ್ನೂ ಕೆಲವರು ಇದು ಟಿಎಂಸಿಯ ಒಳಗಿನವರೇ ಯಾರೋ ಎಸಗಿದ ಕೃತ್ಯ ಇರಬಹುದು ಎಂದು ಅನುಮಾನಪಟ್ಟಿದ್ದಾರೆ.

ಬಾಂಬ್ ಸ್ಫೋಟಕ್ಕೆ ಬಲಿಯಾದ ನ್ಯೂಟನ್ ಶೇಖ್​ರ ಕುಟುಂಬ ಸದಸ್ಯರು ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದಾರೆ. ಆದರೆ, ಮಾರ್​ಗ್ರಾಮ್​ನಲ್ಲಿ ಕಾಂಗ್ರೆಸ್ ಉಪಸ್ಥಿತಿ ನಗಣ್ಯವಾಗಿದ್ದು, ಈ ಪರಿಸ್ಥಿತಿಯಲ್ಲಿ ಪಕ್ಷದವರಿಂದ ಇಂಥ ಕೃತ್ಯ ಎಸಗಲು ಹೇಗೆ ಸಾಧ್ಯ ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.

ಇದನ್ನೂ ಓದಿ: Vande Metro: ವಂದೇ ಭಾರತ್ ಯಶಸ್ಸಿನ ನಂತರ ವಂದೇ ಮೆಟ್ರೋ ರೀಜನಲ್ ಟ್ರಾನ್ಸ್​ ರೈಲು ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಧಾನಿ ಮೋದಿ ಸೂಚನೆ

ಇನ್ನು, ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಅವರು, ಈ ಕೃತ್ಯದ ಹಿಂದೆ ಮಾವೋವಾದಿ ಉಗ್ರರ ಕೈವಾಡ ಇರಬಹುದು ಎಂದು ಶಂಕಿಸಿದ್ದಾರೆ.

ಯಾವುದೋ ದೊಡ್ಡ ಸಂಚು ನಡೆದಿರುವಂತೆ ಭಾಸವಾಗುತ್ತಿದೆ. ಬಾಂಬ್​ಗಳನ್ನು ತಯಾರಿಸಲು ಬಳಸಲಾದ ವಸ್ತುಗಳನ್ನು ಎಲ್ಲಿಂದ ಸಾಗಿಸಲಾಗಿದೆ ಎಂಬುದನ್ನು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಬೇಕು. ಬಾಂಬ್ ದಾಳಿಯನ್ನು ಹೇಗೆ ಮತ್ತು ಯಾಕೆ ನಡೆಸಲಾಯಿತು ಎಂಬುದು ಗೊತ್ತಾಗಬೇಕಾದರೆ ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವರು ಹೇಳಿದ್ದಾರೆ.

ಇನ್ನು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇದು ಟಿಎಂಸಿಯೊಳಗಿನ ಅಂತರ್​ಕಲಹದ ಫಲ ಎಂದು ಶಂಕಿಸಿವೆ.

ಮಾರ್​ಗ್ರಾಮ್​ನಲ್ಲಿ ಕಾಂಗ್ರೆಸ್​ನ ಅಸ್ತಿತ್ವ ತೀರಾ ಕಡಿಮೆ ಇದೆ. ಬಾಂಬ್ ದಾಳಿ ಎಸಗಿದ ದುಷ್ಕರ್ಮಿಗಳು ಮತ್ತು ದಾಳಿಯಲ್ಲಿ ಬಲಿಯಾದವರು ಇಬ್ಬರೂ ಟಿಎಂಸಿಗೆ ಸೇರಿದವರೆಂದು ಎಲ್ಲರಿಗೂ ಗೊತ್ತಿದೆ. ಇದು ಗೊತ್ತಿದ್ದರೂ ಯಾರಾದರೂ ಕಾಂಗ್ರೆಸ್ ಮೇಲೆ ಆರೋಪ ಮಾಡಿ ಪ್ರಚಾರ ಕೊಟ್ಟರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.

Published On - 3:33 pm, Sun, 5 February 23