ದೆಹಲಿ ನಿವಾಸದಲ್ಲಿ ಸುದ್ದಿಗೋಷ್ಠಿ ವೇಳೆ ಪಪ್ಪು ಯಾದವ್ ಮೇಲೆ ಚಾಕು ದಾಳಿ ಯತ್ನ
ದೆಹಲಿಯ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸುತ್ತಿದ್ದ ಬಿಹಾರ ಸಂಸದ ಪಪ್ಪು ಯಾದವ್ ಅವರ ಮೇಲೆ ಚಾಕು ದಾಳಿ ಯತ್ನ ನಡೆದಿದೆ. "ಇದು ನನ್ನ ಕೊಲ್ಲುವ ಸಂಚು," ಎಂದು ಯಾದವ್ ಆರೋಪಿಸಿದ್ದಾರೆ. ರಾಮ ಮಂದಿರ ದೇಣಿಗೆ ಕುರಿತು ಪ್ರಶ್ನಿಸಿದ್ದಕ್ಕೆ ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರು ಭದ್ರತಾ ಲೋಪ ಮತ್ತು ದಾಳಿಯ ಹಿಂದಿನ ರಾಜಕೀಯ ಉದ್ದೇಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನವದೆಹಲಿ, ಆಗಸ್ಟ್ 03: ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್(Pappu Yadav) ಅವರ ದೆಹಲಿಯ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯ ವೇಳೆ ಭಾರಿ ಗದ್ದಲ, ತಳ್ಳಾಟ ಏರ್ಪಟ್ಟಿದೆ. ಚಾಕು ಹಿಡಿದು ಬಂದಿದ್ದ ವ್ಯಕ್ತಿಯೊಬ್ಬ ಸಂಸದರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದು ‘ತನ್ನ ಕೊಲ್ಲುವ ಸಂಚು’ ಎಂದು ಪಪ್ಪು ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಪಪ್ಪು ಯಾದವ್ ಅವರು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಸಾರ್ವಜನಿಕರಂತೆ ತೂರಿಬಂದ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಲು ಯತ್ನಿಸಿದ್ದಾನೆ.
ತಕ್ಷಣವೇ ಜಾಗರೂಕರಾದ ಸಂಸದರ ಬೆಂಬಲಿಗರು ಮತ್ತು ಆಪ್ತರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ದಾಳಿಕೋರನನ್ನು ಉತ್ತರ ಪ್ರದೇಶದ ಬುಲಂದ್ಶಹರ್ ಮೂಲದ, ಪ್ರಸ್ತುತ ಗಾಜಿಯಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ ಎಂದು ದೆಹಲಿ ಪೊಲೀಸರು ಗುರುತಿಸಿದ್ದಾರೆ. ಸಂಸದರ ನಿವಾಸದ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಈತನ ಸಹಚರ ಹ್ಯಾಪಿ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾಳಿಯ ನಂತರ ಸುದ್ಧಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಸಂಸದ ಪಪ್ಪು ಯಾದವ್, ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಜೀವಕ್ಕೆ ಬೆದರಿಕೆಯಿದ್ದು, ದೀರ್ಘಕಾಲದಿಂದ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡುತ್ತಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದಾರೆ. ನಿನ್ನೆ ಬೆಂಬಲಿಗರು ಇಲ್ಲದಿದ್ದರೆ ನನ್ನನ್ನು ಕೊಂದು ಹಾಕುತ್ತಿದ್ದರು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮತ್ತಷ್ಟು ಓದಿ: ರಾಮಮಂದಿರ ಕಾಣಿಕೆ ಕಳವು; ಕೇಸರಿ ಬಟ್ಟೆ ಧರಿಸಿ ಸಂಸತ್ ಹೊರಗೆ ಪಪ್ಪು ಯಾದವ್ ಪ್ರತಿಭಟನೆ
ಶ್ರೀರಾಮ ಜನ್ಮಭೂಮಿಯ 200 ಕೆಜಿ ಬೆಳ್ಳಿ ಮತ್ತು ಚಿನ್ನ ಎಲ್ಲಿ ಹೋಯಿತು ಎಂದು ನಾನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಈ ರೀತಿ ಕೊಲೆ ಯತ್ನ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣವನ್ನು ಉಲ್ಲೇಖಿಸಿ, ಪಪ್ಪು ಯಾದವ್ ಹಾಗೂ ಇತರ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಇತ್ತೀಚೆಗೆ ‘ಸ್ಕಿಟ್’ಪ್ರದರ್ಶಿಸಿದ್ದರು. ಈ ನಾಟಕವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ನಾಟಕದ ವಿರುದ್ಧ ವಾರಾಣಸಿ ಪಪ್ಪು ಯಾದವ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಮತ್ತು ಅವಧೇಶ್ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಪ್ಪು ಯಾದವ್ ಅವರು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಪಡೆಯಿಂದಲೂ ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾಗಿ ಈ ಹಿಂದೆ ತಿಳಿಸಿದ್ದರು ಹಾಗೂ ಗೃಹ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಭದ್ರತೆ ಒದಗಿಸುವಂತೆ ಹಲವು ಬಾರಿ ಪತ್ರ ಬರೆದಿದ್ದರು. ಈ ದಾಳಿಯ ಹಿಂದೆ ರಾಜಕೀಯ ವೈಷಮ್ಯವಿದೆಯೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ಕೋನದಲ್ಲಿ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




