UNGA ಪಾಕಿಸ್ತಾನ, ಚೀನಾ ವಿರುದ್ಧ ವಾಗ್ದಾಳಿ; ಭಾರತ ಎಂದಿಗೂ ಶಾಂತಿಯ ಪರ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎಸ್ ಜೈಶಂಕರ್

ಉಕ್ರೇನ್ ಸಂಘರ್ಷ ತೀವ್ರಗೊಳ್ಳುತ್ತಿರುವಾಗ ನಾವು ಯಾರ ಪರವಾಗಿರುತ್ತೇವೆ ಎಂದು ನಮ್ಮನ್ನು ಆಗಾಗ್ಗೆ ಕೇಳಲಾಗುತ್ತದೆ. ನಮ್ಮ ಉತ್ತರವು ಪ್ರತಿ ಬಾರಿಯೂ ನೇರ ಮತ್ತು ಪ್ರಾಮಾಣಿಕವಾಗಿರುತ್ತದೆ.

UNGA ಪಾಕಿಸ್ತಾನ, ಚೀನಾ ವಿರುದ್ಧ ವಾಗ್ದಾಳಿ; ಭಾರತ ಎಂದಿಗೂ ಶಾಂತಿಯ ಪರ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎಸ್ ಜೈಶಂಕರ್
ಎಸ್. ಜೈಶಂಕರ್
Edited By: ರಶ್ಮಿ ಕಲ್ಲಕಟ್ಟ

Updated on: Sep 25, 2022 | 9:30 AM

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಶನಿವಾರ  ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ,   ರಷ್ಯಾ- ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಉಂಟಾದ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು , ರಷ್ಯಾ-ಉಕ್ರೇನ್ ಯುದ್ಧದಲ್ಲಿ (Russia-Ukraine war) ಭಾರತವು ಶಾಂತಿಯ ಪರವಾಗಿದ್ದು, ಶಾಂತಿಯನ್ನೇ ಬಯಸುತ್ತಿದೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ನಿರ್ಬಂಧಗಳಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಕಾಪಾಡುತ್ತಿರುವ ಚೀನಾವನ್ನು ಜೈಶಂಕರ್ (Jaishankar) ಟೀಕಿಸಿದ್ದಾರೆ. ವಿಶ್ವಸಂಸ್ಥೆಯು ಭಯೋತ್ಪಾದನೆಗೆ ಪ್ರತಿಕ್ರಿಯಿಸುವ ಮೂಲಕ ಅದರ ಅಪರಾಧಿಗಳನ್ನು ಖಂಡಿಸುತ್ತದೆ. UNSC 1267 ನಿರ್ಬಂಧಗಳ ಆಡಳಿತವನ್ನು ರಾಜಕೀಯಗೊಳಿಸುವವರು, ಕೆಲವೊಮ್ಮೆ ಘೋಷಿತ ಭಯೋತ್ಪಾದಕರನ್ನು ರಕ್ಷಿಸುತ್ತಾರೆ, ಅವರು ಭಯದಿಂದ ಹಾಗೆ ಮಾಡುತ್ತಾರೆ. ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಭಾರವನ್ನು ಹೊತ್ತಿರುವ ಭಾರತವು ‘ಶೂನ್ಯ-ಸಹಿಷ್ಣುತೆ’ ವಿಧಾನವನ್ನು ದೃಢವಾಗಿ ಪ್ರತಿಪಾದಿಸುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ. ಉಕ್ರೇನ್ ಸಂಘರ್ಷ ತೀವ್ರಗೊಳ್ಳುತ್ತಿರುವಾಗ ನಾವು ಯಾರ ಪರವಾಗಿರುತ್ತೇವೆ ಎಂದು ನಮ್ಮನ್ನು ಆಗಾಗ್ಗೆ ಕೇಳಲಾಗುತ್ತದೆ. ನಮ್ಮ ಉತ್ತರವು ಪ್ರತಿ ಬಾರಿಯೂ ನೇರ ಮತ್ತು ಪ್ರಾಮಾಣಿಕವಾಗಿರುತ್ತದೆ. ಭಾರತವು ಶಾಂತಿಯ ಪರವಾಗಿದ್ದು, ಅದೇ ನಿಲುವಿನಲ್ಲಿ ದೃಢವಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದರು. “ನಾವು ಯುಎನ್ ಚಾರ್ಟರ್ ಮತ್ತು ಅದರ ಸಂಸ್ಥಾಪಕ ತತ್ವಗಳನ್ನು ಗೌರವಿಸುವ ಪಕ್ಷದಲ್ಲಿದ್ದೇವೆ ಎಂದು ಅವರು ಹೇಳಿದರು.

ಯುಎನ್‌ಜಿಎ ಸಾಮಾನ್ಯ ಚರ್ಚೆಯ ಉನ್ನತ ಮಟ್ಟದ ವಿಭಾಗದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಿ ಜೈಶಂಕರ್ ಮಾತನಾಡಿದ್ದಾರೆ. ಯುಎನ್‌ಜಿಎ 77ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಈ ವರ್ಷ ನ್ಯೂಯಾರ್ಕ್‌ಗೆ ತೆರಳಿರಲಿಲ್ಲ.

ಸಂವಾದ ಮತ್ತು ರಾಜತಾಂತ್ರಿಕತೆಯ ಬಗ್ಗೆ ಭಾರತದ ಕರೆಯನ್ನು ಜೈಶಂಕರ್ ಪುನರುಚ್ಚರಿಸಿದ್ದು ಸಂಘರ್ಷವನ್ನು ಕೊನೆಗೊಳಿಸಲು ಇದು ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದಾರೆ. “ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯಾಗುತ್ತಿದ್ದು, ದಿನನಿತ್ಯದ ಬದುಕು ಸಾಗಿಸಲು ಹೆಣಗಾಡುತ್ತಿರುವವರ ಪರ ನಾವಿದ್ದೇವೆ ಎಂದಿದ್ದಾರೆ ಜೈಶಂಕರ್.

ಜೈಶಂಕರ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಯುಎನ್‌ಜಿಎಯನ್ನು ಉದ್ದೇಶಿಸಿ ಮಾತನಾಡುವ ಮುನ್ನ ನ್ಯೂಯಾರ್ಕ್‌ನಲ್ಲಿರುವ ಯುಎನ್ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಕೋವಿಡ್
ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆಯ ಸವಾಲುಗಳೊಂದಿಗೆ ಜಗತ್ತು ಈಗಾಗಲೇ ಹೋರಾಡುತ್ತಿದೆ. ಅಭಿವೃದ್ಧಿಶೀಲ (ದೇಶಗಳ) ಸಾಲದ ಪರಿಸ್ಥಿತಿಯು ಅನಿಶ್ಚಿತವಾಗಿದೆ.

ಉಕ್ರೇನ್ ಸಂಘರ್ಷದಲ್ಲಿನ ಪರಿಣಾಮದ ಜತೆಗೆ ಬೆಲೆ ಏರಿಕೆ ಮತ್ತು ಇಂಧನ, ಆಹಾರ ಮತ್ತು ರಸಗೊಬ್ಬರಗಳ ಕೊರತೆಯೂ ಕಾಡುತ್ತಿದೆ. ಉಕ್ರೇನ್ ಸಂಘರ್ಷದ ಪರಿಣಾಮಗಳು ವಿಶೇಷವಾಗಿ ಆಹಾರ ಮತ್ತು ಶಕ್ತಿಯ ಮೇಲೆ ಆರ್ಥಿಕ ಒತ್ತಡಗಳನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ಜೈಶಂಕರ್ ಹೇಳಿದ್ದಾರೆ. ಭಾರತವು ಎಲ್ಲಾ ಯುದ್ಧಗಳನ್ನು ತಕ್ಷಣವೇ ನಿಲ್ಲಿಸುವ ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವ ಅಗತ್ಯವನ್ನು ವಿದೇಶಾಂಗ ಸಚಿವರು ಪುನರುಚ್ಛರಿಸಿದ್ದಾರೆ.

Published On - 8:36 am, Sun, 25 September 22

Web contact

TV9 Kannada

Read More
Follow Us