ಅಕ್ಟೋಬರ್​ನಿಂದ ಕೊವಿಡ್ 19 ಲಸಿಕೆ ರಫ್ತು ಮತ್ತೆ ಪ್ರಾರಂಭ; ಇಂದು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ

ಮುಂದಿನ ತಿಂಗಳಿಂದ ಭಾರತ ಕೊರೊನಾ ಲಸಿಕೆ ರಫ್ತು ಮಾಡುವುದಾಗಿ ಘೋಷಿಸಿದ್ದರೂ ಯಾವ ಲಸಿಕೆ ರಫ್ತು ಮಾಡುತ್ತದೆ ಎಂಬುದನ್ನು ಹೇಳಿಲ್ಲ.ಭಾರತದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆಗಳನ್ನು ಹೊರತುಪಡಿಸಿ, ರಷ್ಯಾದ ಸ್ಪುಟ್ನಿಕ್​ ವಿ, ಸ್ಟುಟ್ನಿಕ್​ ಲೈಟ್​ ಲಸಿಕೆಯ ಉತ್ಪಾದನೆಯೂ ಆಗುತ್ತಿದೆ.

ಅಕ್ಟೋಬರ್​ನಿಂದ ಕೊವಿಡ್ 19 ಲಸಿಕೆ ರಫ್ತು ಮತ್ತೆ ಪ್ರಾರಂಭ; ಇಂದು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ
ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ
Follow us
| Updated By: Lakshmi Hegde

Updated on:Sep 20, 2021 | 6:36 PM

ದೆಹಲಿ: ಬರುವ ತಿಂಗಳಿಂದ ಭಾರತ ಕೊವಿಡ್​ 19 ಲಸಿಕೆಗಳ ರಫ್ತು ಕಾರ್ಯವನ್ನು ಮರುಆರಂಭ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಲಸಿಕೆ ಮೈತ್ರಿ (Vaccine Friendship) ಕಾರ್ಯಕ್ರಮದಡಿ ಮತ್ತೆ ರಫ್ತು ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಜನವರಿಯಿಂದ ಕೊರೊನಾ ಲಸಿಕಾ ಅಭಿಯಾನ ಶುರುವಾಗಿತ್ತು. ಹಾಗೇ, ಹೊರದೇಶಗಳಿಗೂ ಲಸಿಕೆ ಕಳಿಸಲಾಗುತ್ತಿತ್ತು. ಆದರೆ ಮಾರ್ಚ್​ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಶುರುವಾಗಿತ್ತು. ಹೀಗಾಗಿ ಲಸಿಕೆ ಪಡೆಯಲು ಮುಂದೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿತ್ತು. ಇದರಿಂದಾಗಿ ಉಂಟಾದ ಕೊವಿಡ್ 19 ಲಸಿಕೆ ಕೊರತೆ ನೀಗಿಸಲು, ರಫ್ತು ಮಾಡುವುದನ್ನು ನಿಲ್ಲಿಸಲಾಗಿತ್ತು. 

ಮಾರ್ಚ್​ನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾದಾಗ ಲಸಿಕೆಯ ಅವಶ್ಯಕತೆಯೂ ಹೆಚ್ಚಾಗಿತ್ತು. ಹೀಗಾಗಿ ಮೊದಲು ಭಾರತೀಯರಿಗೆ ಕೊರೊನಾ ಲಸಿಕೆ ನೀಡೋಣ, ಬಳಿಕ ವಿದೇಶಗಳಿಗೆ ರಫ್ತು ಮಾಡೋಣ ಎಂಬ ನೀತಿಯನ್ನು ಭಾರತ ಅನುಸರಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಸುಮಾರು 80.85  ಕೋಟಿ ಡೋಸ್ ಲಸಿಕೆಯನ್ನು ಭಾರತದ ಜನರಿಗೆ ನೀಡಲಾಗಿದೆ. ಇದೀಗ ಮತ್ತೆ ಮುಂದಿನ ತಿಂಗಳು ಅಂದರೆ ಅಕ್ಟೋಬರ್​ನಿಂದಲೇ ಮತ್ತೆ ಹೊರದೇಶಗಳಿಗೆ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದೆ.

ಮಾರ್ಚ್​ ತಿಂಗಳವರೆಗೆ ರಫ್ತಾಗಿದ್ದೆಷ್ಟು? 2021ರ ಜನವರಿಯಿಂದ ಮಾರ್ಚ್​ ತಿಂಗಳವರೆಗೆ ಒಟ್ಟು 70 ದೇಶಗಳಿಗೆ 6.6 ಕೋಟಿ ಡೋಸ್​ ಕೊರೊನಾ ಲಸಿಕೆಯನ್ನು ಭಾರತ ರಫ್ತು ಮಾಡಿತ್ತು. ಆಗ ರಫ್ತು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ದೇಶದಲ್ಲಿ ಹೆಚ್ಚುವರಿ ಕೊರೊನಾ ಲಸಿಕೆ ಉತ್ಪಾದನೆ ಮಾಡಲಾಗುವುದು. ಅದನ್ನು ಹೊರದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಮನ್​ಸುಖ್​ ಮಾಂಡವಿಯಾ ಘೋಷಿಸಿದ್ದಾರೆ. ಈಗಲೂ ನಮ್ಮ ದೇಶದಲ್ಲಿ ಒಂದು ದಿನಕ್ಕೆ 1 ಕೋಟಿ ಡೋಸ್​​ ಲಸಿಕೆಯನ್ನು ಪ್ರತಿದಿನವೂ ನೀಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಎಲ್ಲರಿಗೂ ಎರಡೂ ಡೋಸ್​ ಲಸಿಕೆಯನ್ನೂ ನೀಡಿ ಮುಗಿದಿಲ್ಲ. ಹೆಚ್ಚುವರಿ ಲಸಿಕೆ ಇದ್ದರೆ ಇನ್ನಷ್ಟು ವೇಗವಾಗಿ ಭಾರತದ ಜನರಿಗೇ ಕೊರೊನಾ ಲಸಿಕೆ ನೀಡಬಹುದು. ಆದರೆ ಆ ಹೆಚ್ಚುವರಿ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದರೆ, 94 ಕೋಟಿ ಜನರಿಗೆ ಡಿಸೆಂಬರ್​ ಒಳಗೆ ಎರಡೂ ಡೋಸ್​ ಲಸಿಕೆ ನೀಡಲು ಸಾಧ್ಯವಾಗುತ್ತದೆಯಾ ಎಂಬ ಪ್ರಶ್ನೆಯೂ ಕಾಡುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ 23.5 ಕೋಟಿ ಡೋಸ್ ಲಸಿಕೆಯು ದೇಶಕ್ಕೆ ಲಭ್ಯವಾಗುತ್ತೆ ಎಂದು ಈ ಮೊದಲು ಕೇಂದ್ರ ಸರ್ಕಾರ ಹೇಳಿತ್ತು. ಆದರೇ ಈಗ ಕೇಂದ್ರದ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಅಕ್ಟೋಬರ್ ತಿಂಗಳಿನಲ್ಲಿ 30 ಕೋಟಿ ಡೋಸ್ ಲಸಿಕೆ ಲಭ್ಯವಾಗುತ್ತೆ ಎಂದಿದ್ದಾರೆ. ಈ ವರ್ಷದ ಅಕ್ಟೋಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ನೂರು ಕೋಟಿ ಡೋಸ್ ಗಿಂತ ಹೆಚ್ಚಿನ ಡೋಸ್ ಲಸಿಕೆ ಲಭ್ಯವಾಗುವುದಾಗಿ ಮನಸುಖ್ ಮಾಂಡವೀಯಾ ಇಂದು ಹೇಳಿದ್ದಾರೆ. ಈ ಲಸಿಕೆಯನ್ನು ಸಂಪೂರ್ಣ ಭಾರತವೇ ಬಳಸಿಕೊಂಡರೂ 94 ಕೋಟಿ ಜನರಿಗೆ ಬೇಕಾದ 188 ಕೋಟಿ ಡೋಸ್ ಲಸಿಕೆ ನೀಡಿಕೆಯನ್ನು ತಲುಪಲು ಸಾಧ್ಯ. ಹೀಗಾಗಿ ಈ ವರ್ಷದ ಡಿಸೆಂಬರ್ ನೊಳಗೆ ಭಾರತದ ವಯಸ್ಕ ಜನಸಂಖ್ಯೆಯ 94 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲು ಈಗ ರಫ್ತು ಮಾಡಿದರೇ, ಸಾಧ್ಯವಾಗುವುದಿಲ್ಲ. ಆದರೂ, ಈಗ ಕೇಂದ್ರ ಸರ್ಕಾರವು ಕೊರೊನಾ ಲಸಿಕೆಯನ್ನ ಮುಂದಿನ ತಿಂಗಳಿನಿಂದಲೇ ರಫ್ತು ಮಾಡಲು ನಿರ್ಧರಿಸಿದೆ .

ಯಾವ ಲಸಿಕೆ ರಫ್ತು ಎಂಬುದು ಸ್ಪಷ್ಟವಿಲ್ಲ ಮುಂದಿನ ತಿಂಗಳಿಂದ ಭಾರತ ಕೊರೊನಾ ಲಸಿಕೆ ರಫ್ತು ಮಾಡುವುದಾಗಿ ಘೋಷಿಸಿದ್ದರೂ ಯಾವ ಲಸಿಕೆ ರಫ್ತು ಮಾಡುತ್ತದೆ ಎಂಬುದನ್ನು ಹೇಳಿಲ್ಲ.ಭಾರತದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆಗಳನ್ನು ಹೊರತುಪಡಿಸಿ, ರಷ್ಯಾದ ಸ್ಪುಟ್ನಿಕ್​ ವಿ, ಸ್ಟುಟ್ನಿಕ್​ ಲೈಟ್​ ಲಸಿಕೆಯ ಉತ್ಪಾದನೆಯೂ ಆಗುತ್ತಿದೆ.  ಪನಸಿಯಾ ಬಯೋಟೆಕ್ ಕಂಪನಿಯು ಈಗಾಗಲೇ ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ ಲಸಿಕೆಯನ್ನು ಉತ್ಪಾದಿಸಿದೆ. ಈ ಲಸಿಕೆಯ ರಫ್ತು ಮಾಡಲು ಅನುಮತಿ ನೀಡಬೇಕೆಂದು ರಷ್ಯಾ ದೇಶವು ಭಾರತವನ್ನು ಕೋರಿದೆ. ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಗೆ ಇನ್ನೂ ಡಿಸಿಜಿಐ ತುರ್ತು ಬಳಕೆಗೆ ಅನುಮತಿ ನೀಡಿಲ್ಲ. ಹೀಗಾಗಿ ಸ್ಪುಟ್ನಿಕ್ ಲೈಟ್ ಲಸಿಕೆಯ ಬ್ರಿಡ್ಜ್ ಪ್ರಯೋಗ ಮುಗಿಯುವವರೆಗೂ ಕಾದರೇ, ಲಸಿಕೆಯು ವ್ಯರ್ಥವಾಗುವ ಸಾಧ್ಯತೆ ಇದೆ. ಲಸಿಕೆಯ ಲೈಫ್ ಮೂರು ತಿಂಗಳು ಮಾತ್ರ. ಅಷ್ಟರೊಳಗೆ ಲಸಿಕೆಯನ್ನು ಜನರಿಗೆ ನೀಡಿ ಬಳಸಬೇಕು. ಹೀಗಾಗಿ ಈ ಲಸಿಕೆಯ ರಫ್ತಿಗೆ ರಷ್ಯಾ ಅನುಮತಿ ಕೇಳಿದೆ. ಹೀಗಾಗಿ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ರಷ್ಯಾಗೆ ರಫ್ತು ಮಾಡುವುದರಿಂದ ಭಾರತದ ಲಸಿಕಾ ಅಭಿಯಾನಕ್ಕೆ ಹಿನ್ನಡೆಯಾಗಲಾರದು. ಭಾರತ ಕೂಡ ಇದೇ ಯೋಜನೆಯನ್ನೇ ಹಾಕಿರಬಹುದು ಎಂದು ಹೇಳಲಾಗುತ್ತಿದೆ.

ಗವಿ ಸಂಘಟನೆಯ ಕೊವ್ಯಾಕ್ಸ್ ಬದ್ದತೆಯನ್ನು ಪೂರ್ಣಗೊಳಿಸಲು ಲಸಿಕೆಯನ್ನು ರಫ್ತು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಭಾರತದಲ್ಲಿ ಈಗ ಕೊರೊನಾ ಲಸಿಕೆಯ ಅಭಿಯಾನಕ್ಕೆ ವೇಗ ಸಿಕ್ಕಿದೆ. ಕೇವಲ 11 ದಿನಗಳಲ್ಲೇ ಭಾರತವು 70 ರಿಂದ 80 ಕೋಟಿವರೆಗೂ ಲಸಿಕೆಯನ್ನು ನೀಡಿದೆ. ಕಳೆದ 11 ದಿನಗಳಲ್ಲೇ ನಾಲ್ಕು ದಿನ ನಿತ್ಯ 1 ಕೋಟಿ ಡೋಸ್​​ ಗಿಂತ ಹೆಚ್ಚಿನ ಲಸಿಕೆಯನ್ನು ಜನರಿಗೆ ನೀಡಲಾಗಿದೆ ಎಂದು ಮನ್​ಸುಖ್​ ಮಾಂಡವಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೀದರನ ಗುರು ನಾನಕ್ ಜೀರಾ ಸಾಹಿಬ್ ಅಮೃತಸರ್​ನಲ್ಲಿರುವ ಸ್ವರ್ಣಮಂದಿರಕ್ಕೆ ಪರ್ಯಾಯ ಎನಿಸಿಕೊಂಡಿದೆ

ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್; ಮೋದಿ ಪ್ರಧಾನಿ ಆದ್ಮೇಲೆ ದೇಶದ ಬೆಲೆ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ

(India will resume the export of Covid 19 vaccine by next month Union health minister Mansukh Mandaviya)

Published On - 6:32 pm, Mon, 20 September 21