ಕೇರಳ ಕಾಂಗ್ರೆಸ್ ಚುನಾವಣೆ ಚಿಹ್ನೆ ವಿವಾದ: ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಲು ಕೇರಳ ಕಾಂಗ್ರೆಸ್ ಎಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Jose K Mani: ಕಾಂಗ್ರೆಸ್ (ಎಂ) ಪಕ್ಷದ ಸಂಸ್ಥಾಪಕ ಕೆ.ಎಂ.ಮಾಣಿ ಅವರ ನಿಧನದ ನಂತರ ಕಾಂಗ್ರೆಸ್ ನಾಯಕ ಜೋಸೆಫ್ ಮತ್ತು ಜೋಸ್.ಕೆ.ಮಾಣಿ ಗುಂಪುಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಜೋಸ್.ಕೆ. ಮಾಣಿ ಪಕ್ಷಕ್ಕೆ ಎರಡೆಲೆ ಚಿಹ್ನೆ ನೀಡಿದ್ದನ್ನು ಪ್ರಶ್ನಿಸಿ ಜೋಸೆಫ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕೇರಳ ಕಾಂಗ್ರೆಸ್ ಚುನಾವಣೆ ಚಿಹ್ನೆ ವಿವಾದ: ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಲು ಕೇರಳ ಕಾಂಗ್ರೆಸ್ ಎಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ಜೋಸ್.ಕೆ.ಮಾಣಿ
ರಶ್ಮಿ ಕಲ್ಲಕಟ್ಟ

Updated on: Mar 15, 2021 | 3:27 PM

ನವದೆಹಲಿ: ಜೋಸ್.ಕೆ. ಮಾಣಿ ನೇತೃತ್ವದ ಕಾಂಗ್ರೆಸ್ (ಎಂ) ಪಕ್ಷ ಎರಡೆಲೆ ಚಿಹ್ನೆಯಲ್ಲಿ ಸ್ಪರ್ಧಿಸಬಹುದು ಸುಪ್ರೀಂಕೋರ್ಟ್  ಹೇಳಿದೆ. ಕಾಂಗ್ರೆಸ್ (ಎಂ) ಪಕ್ಷಕ್ಕೆ ಚುನಾವಣಾ ಆಯೋಗ ಎರಡೆಲೆ ಚಿಹ್ನೆಯನ್ನು ನೀಡಿತ್ತು. ಇದನ್ನು ಪ್ರಶ್ನಿಸಿ  ಕೇರಳ ಕಾಂಗ್ರೆಸ್ ನಾಯಕ ಪಿ.ಜೆ.ಜೋಸೆಫ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿದೆ. ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಣಿಯನ್ ಅವರ ನ್ಯಾಯಪೀಠ ಪಿಜೆ ಜೋಸೆಫ್ ಅವರ ಮೇಲ್ಮನವಿ ಅರ್ಜಿಯನ್ನು ನಿರಾಕರಿಸಿದೆ .

ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಪಿಜೆ ಜೋಸೆಫ್ ಪರ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, 450 ಸದಸ್ಯರಿರುವ ರಾಜ್ಯ ಸಮಿತಿಯಲ್ಲಿ 255 ಸದಸ್ಯರ ಬೆಂಬಲ ನಮಗಿದೆ. ಇವರ ಬೆಂಬಲವನ್ನು ತೋರಿಸುವ ದಾಖಲೆಗಳನ್ನು ಪರಿಶೀಲಿಸದೆ ಚುನಾವಣಾ ಆಯೋಗ ಜೋಸ್.ಕೆ. ಮಾಣಿ ಅವರ ಪರವಾಗಿ ತೀರ್ಪು ನೀಡಿತ್ತು ಎಂದಿದ್ದಾರೆ. ಈ ವಿಷಯಗಳನ್ನು ಹೈಕೋರ್ಟ್ ಕೂಡಾ ಪರಿಗಣಿಸಿಲ್ಲ ಎಂದಿದ್ದಾರೆ ದಿವಾನ್. ಆದರೆ ಚುನಾವಣಾ ಚಿಹ್ನೆ ನೀಡುವ ಅಧಿಕಾರ ಚುನಾವಣಾ ಆಯೋಗದ್ದು. ಹೈಕೋರ್ಟ್ ತೀರ್ಪು ಬಗ್ಗೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿ ಸುಪ್ರೀಂಕೋರ್ಟ್ ಮೇಲ್ಮನವಿಯನ್ನು ತಳ್ಳಿದೆ.

ಪಿಜೆ ಜೋಸೆಫ್ ಪರವಾಗಿ ಶ್ಯಾಮ್​ ದಿವಾನ್, ರೋಮಿ ಚಾಕೊ ಹಾಜರಾಗಿದ್ದರು. ಜೋಸ್.ಕೆ.ಮಾಣಿ ಪರವಾಗಿ ಹಿರಿಯ ವಕೀಲ ಕೃಷ್ಣನ್ ವೇಣುಗೋಪಾಲ್ ಹಾಜರಾಗಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯೋಗವು ಜೋಸ್.ಕೆ. ಮಾಣಿ ಪಕ್ಷಕ್ಕೆ ಎರಡೆಲೆ ಚಿಹ್ನೆ ನೀಡಿತ್ತು.

ಕಾಂಗ್ರೆಸ್ (ಎಂ) ಪಕ್ಷದ ಸಂಸ್ಥಾಪಕ ಕೆ.ಎಂ.ಮಾಣಿ ಅವರ ನಿಧನದ ನಂತರ ಕಾಂಗ್ರೆಸ್ ನಾಯಕ ಜೋಸೆಫ್ ಮತ್ತು ಜೋಸ್.ಕೆ.ಮಾಣಿ ಗುಂಪುಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಜೋಸ್.ಕೆ. ಮಾಣಿ ಪಕ್ಷಕ್ಕೆ ಎರಡೆಲೆ ಚಿಹ್ನೆ ನೀಡಿದ್ದನ್ನು ಪ್ರಶ್ನಿಸಿ ಜೋಸೆಫ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನವೆಂಬರ್​ನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ನಗರೇಶ್ ಅವರ ಏಕಸದಸ್ಯ ಪೀಠವು ಜೋಸೆಫ್ ಅವರ ಅರ್ಜಿಯನ್ನು ತಳ್ಳಿಹಾಕಿತ್ತು. ಪಕ್ಷದ ಚಿಹ್ನೆಯ ವಿವಾದದಲ್ಲಿ ತೀರ್ಪು ನೀಡುವ ಹಕ್ಕು ಚುನಾವಣೆ ಆಯೋಗಕ್ಕಿಲ್ಲ ಎಂದು ಜೋಫೆಸ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಎಲ್ ಡಿಎಫ್ ಜತೆ ಕೈ ಜೋಡಿಸಿದ ಕೇರಳ ಕಾಂಗ್ರೆಸ್ (ಎಂ)
ಯುಡಿಎಫ್​ನಿಂದ ಎಲ್​ಡಿಎಫ್​ಗೆ ಬಂದಿರುವ ಜೋಸ್.ಕೆ. ಮಾಣಿ ನೇತೃತ್ವದ ಕೇರಳ ಕಾಂಗ್ರೆಸ್ (ಎಂ) ಪಕ್ಷ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯುಡಿಎಫ್ ಮತಗಳನ್ನು ಇಳಿಸಿ ಎಲ್​ಡಿಎಫ್ ವಿಜಯ ಪತಾಕೆ ಹಾರಿಸಲು ಪ್ರಧಾನ ಪಾತ್ರ ವಹಿಸಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ ಸೇರಿದಂತೆ ಮೈತ್ರಿ ಪಕ್ಷಗಳ ಅಸಮಾಧಾನವನ್ನು ಕಡೆಗಣಿಸಿ ಸಿಪಿಎಂ, ಕೇರಳ ಕಾಂಗ್ರೆಸ್ (ಎಂ) ಪಕ್ಷಕ್ಕೆ 13 ಸೀಟುಗಳನ್ನು ನೀಡಿದೆ.

ಕುಟ್ಯಾಡಿ ಸೀಟು ಸಿಪಿಎಂಗೆ ಬಿಟ್ಟುಕೊಟ್ಟ ಕಾಂಗ್ರೆಸ್ (ಎಂ)
ಕೋಯಿಕ್ಕೋಡ್ ಜಿಲ್ಲೆ ಕುಟ್ಯಾಡಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿ ಸ್ಪರ್ಧಿಸಲಿ ಎಂದು ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ಜೋಸ್.ಕೆ.ಮಾಣಿ ಹೇಳಿದ್ದಾರೆ. ಕುಟ್ಯಾಡಿ ಸಿಪಿಎಂ ಪ್ರಾತಿನಿಧ್ಯವಿರುವ ಕ್ಷೇತ್ರವಾಗಿದೆ. ಹಾಗಾಗಿ ಆ ಸೀಟಿನಲ್ಲಿ ಕೇರಳ ಕಾಂಗ್ರೆಸ್ (ಎಂ) ಸ್ಪರ್ಧಿಸುವುದಿಲ್ಲ. ಎಲ್​ಡಿಎಫ್ ಜತೆ ಮಾತುಕತೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ ಜೋಸ್.ಕೆ.ಮಾಣಿ.

ಪಾಲಾ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ
ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಾ ಕ್ಷೇತ್ರದಿಂದ ಎಲ್​ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೋಸ್.ಕೆ. ಮಾಣಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ:  Kerala Assembly Elections 2021: ಕೇರಳ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ 

ಕೇರಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಣೆ; ತಲೆಕೂದಲು ಬೋಳಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಲಿತಾ ಸುಭಾಶ್

Published On - 3:24 pm, Mon, 15 March 21

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us