AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮುಂದಿನ ಟಾರ್ಗೆಟ್ ಯಾರು?

ಸದ್ಯಕ್ಕೆ ದೇಶಾದ್ಯಂತ ಚರ್ಚೆಯಾಗುತ್ತಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ 2014ರಿಂದ ಜೈಲಿನಲ್ಲಿದ್ದಾರೆ. ಆತನನ್ನು ಇದುವರೆಗೂ 3 ವಿಭಿನ್ನ ಜೈಲುಗಳಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿದ್ದುಕೊಂಡೇ ಎನ್​ಸಿಪಿ ನಾಯಕ ಬಾಬಾ ಸಿದ್ಧಿಕ್ ಕೊಲೆಯ ಪ್ಲಾನ್ ಮಾಡಿರುವ ಲಾರೆನ್ಸ್ ಹಿಟ್​ ಲಿಸ್ಟ್​ನಲ್ಲಿ ಇನ್ನೂ ಯಾರೆಲ್ಲ ಇದ್ದಾರೆ ಎಂಬ ಕುರಿತ ಶಾಕಿಂಗ್ ಮಾಹಿತಿ ಇಲ್ಲಿದೆ.

ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮುಂದಿನ ಟಾರ್ಗೆಟ್ ಯಾರು?
ಲಾರೆನ್ಸ್ ಬಿಷ್ಣೋಯ್
ಸುಷ್ಮಾ ಚಕ್ರೆ
|

Updated on: Oct 14, 2024 | 6:32 PM

Share

ಮುಂಬೈ: ಅಕ್ಟೋಬರ್ 12ರಂದು ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತು. ಬಾಬಾ ಸಿದ್ದಿಕ್ ಮೂರು ಬಾರಿ ಶಾಸಕರಾಗಿದ್ದರು, ಮಹಾರಾಷ್ಟ್ರದ ರಾಜಕೀಯ ಶಕ್ತಿ ವಲಯಕ್ಕೆ ಹತ್ತಿರವಾಗಿದ್ದರು ಮತ್ತು ದಾವೂದ್ ಇಬ್ರಾಹಿಂ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದರು. ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಹಿನ್ನೆಲೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತೀವ್ರ ತಪಾಸಣೆಗೆ ಒಳಗಾಗಿದ್ದು, ಅಧಿಕಾರಿಗಳು ಆತ ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಪರಿಶೀಲಿಸುತ್ತಿದ್ದಾರೆ.

ಶನಿವಾರ ರಾತ್ರಿ ಮುಂಬೈನಲ್ಲಿರುವ ಕಚೇರಿಯ ಹೊರಗೆ ಬಾಬಾ ಸಿದ್ದಿಕ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅದಾದ ಕೆಲವೇ ಗಂಟೆಗಳ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೊಬ್ಬರು ಈ ಕೊಲೆಯ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯಿಂದ ಮಾಹಿತಿ ಪಡೆದಿರುವ ಇಂಡಿಯಾ ಟುಡೇ ಮಾಡಿರುವ ವರದಿ ಪ್ರಕಾರ, ಪ್ರಸ್ತುತ ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಬಿಷ್ಣೋಯ್ ತನ್ನ ಹಿಟ್-ಲಿಸ್ಟ್‌ನಲ್ಲಿರುವ ಪ್ರಮುಖ ಟಾರ್ಗೆಟ್​ಗಳನ್ನು ಎನ್‌ಐಎಗೆ ಬಹಿರಂಗಪಡಿಸಿದ್ದ. ಈ ವ್ಯಕ್ತಿಗಳಲ್ಲಿ ಕೆಲವರು ಈಗಾಗಲೇ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಆ ಗ್ಯಾಂಗ್‌ನ ಟಾರ್ಗೆಟ್​ನಲ್ಲಿ ಉಳಿದಿದ್ದಾರೆ. ಅವರಲ್ಲಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಸೇರಿದಂತೆ ಕೆಲವು ಅಚ್ಚರಿಯ ಹೆಸರುಗಳು ಕೂಡ ಇವೆ ಎಂಬುದು ಆಘಾತಕಾರಿ ಅಂಶವಾಗಿದೆ.

ಇದನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಕೊಲೆ ಹಿಂದಿದೆಯಾ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್ ಕೈವಾಡ?

ಸಲ್ಮಾನ್ ಖಾನ್:

ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಗುರಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್. NIA ದಾಖಲೆಗಳ ಪ್ರಕಾರ, 1998ರಲ್ಲಿ ಖಾನ್‌ನಿಂದ ಕೃಷ್ಣಮೃಗವನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಬಯಸಿದ್ದ. ಈ ಕೃತ್ಯವನ್ನು ಬಿಷ್ಣೋಯ್ ಸಮುದಾಯವು ತ್ಯಾಗ ಎಂದು ಪರಿಗಣಿಸಿದೆ. ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಮೇಲೆ ಕಣ್ಗಾವಲು ನಡೆಸಲು ಬಿಷ್ಣೋಯ್ ತಮ್ಮ ಸಹಾಯಕ ಸಂಪತ್ ನೆಹ್ರಾ ಎಂಬಾತನನ್ನು ಕಳುಹಿಸಿದ್ದರು. ಆದರೆ ನೆಹ್ರಾ ಅವರನ್ನು ಹರಿಯಾಣ ಪೊಲೀಸ್ ವಿಶೇಷ ಕಾರ್ಯಪಡೆ ಬಂಧಿಸಿದಾಗ ಆ ಯೋಜನೆ ವಿಫಲವಾಯಿತು ಎಂದು ಆತ ಹೇಳಿಕೊಂಡಿದ್ದಾನೆ.

ಏಪ್ರಿಲ್ 2024ರಲ್ಲಿ ಬಂದೂಕುಧಾರಿಗಳು ಸಲ್ಮಾನ್ ಖಾನ್ ಮನೆಯ ಮೇಲೆ ಅನೇಕ ಗುಂಡುಗಳನ್ನು ಹಾರಿಸಿದ್ದರು. ಆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.

ಶಗನ್‌ಪ್ರೀತ್ ಸಿಂಗ್:

ಲಾರೆನ್ಸ್ ಬಿಷ್ಣೋಯ್ ಅವರ ಲಿಸ್ಟ್​ನಲ್ಲಿ ಮುಂದಿನ ಗುರಿಯು ಶಗನ್‌ಪ್ರೀತ್ ಸಿಂಗ್. ಅವರು ಈಗಾಗಲೇ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಮ್ಯಾನೇಜರ್ ಆಗಿದ್ದವರು. ಆಗಸ್ಟ್ 2021ರಲ್ಲಿ ಮೊಹಾಲಿಯಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ತನ್ನ ನಿಕಟ ಸಹವರ್ತಿ ವಿಕ್ಕಿ ಮಿದ್ದುಖೇರಾ ಹಂತಕರಿಗೆ ಶಗನ್‌ಪ್ರೀತ್ ಆಶ್ರಯ ನೀಡಿದ್ದಾನೆಂಬುದು ಬಿಷ್ಣೋಯ್ ಕೋಪಕ್ಕೆ ಕಾರಣ. ಮಿದ್ದುಖೇರಾ ಅವರನ್ನು ಅಣ್ಣ ಎಂದು ಪರಿಗಣಿಸಿದ್ದ ಬಿಷ್ಣೋಯ್ ಆತನ ಸಾವಿಗೆ ಕಾರಣನಾದ ಶಗನ್‌ಪ್ರೀತ್‌ನನ್ನು ಕೊಲ್ಲುವ ಮೂಲಕ ಸೇಡು ತೀರಿಸಿಕೊಳ್ಳಲು ಬಯಸಿದ್ದ.

ಮಂದೀಪ್ ಧಾರಿವಾಲ್:

ತಲೆಮರೆಸಿಕೊಂಡಿರುವ ದರೋಡೆಕೋರ ಗೌರವ್ ಪಡಿಯಾಲ್ (ಅಲಿಯಾಸ್ ಲಕ್ಕಿ ಪಡಿಯಾಲ್)ನ ಸಹಾಯಕ ಮಂದೀಪ್ ಧರಿವಾಲ್ ವಿಕ್ಕಿ ಮಿದ್ದುಖೇರಾ ಹಂತಕರಿಗೆ ಸಹಾಯ ಮಾಡುವ ಮೂಲಕ ಬಿಷ್ಣೋಯಿ ಅವರ ಹಿಟ್-ಲಿಸ್ಟ್‌ನಲ್ಲಿ ಸ್ಥಾನ ಗಳಿಸಿದ್ದಾರೆ. ಆತ ಪಡಿಯಾಲ್ ದಾವೀಂದರ್ ಬಾಂಬಿಹಾ ಗ್ಯಾಂಗ್‌ನ ಮುಖ್ಯಸ್ಥ. ಪಡಿಯಾಲ್​ನ ವ್ಯವಹಾರವನ್ನು ನಿರ್ವಹಿಸುತ್ತಿದ್ದ ಧರಿವಾಲ್ ಅವರನ್ನು ಫಿಲಿಪ್ಪೀನ್ಸ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ ಗೋಲ್ಡಿ ಬ್ರಾರ್ ಗ್ಯಾಂಗ್‌ನೊಂದಿಗೆ ಗುಂಡಿಕ್ಕಿ ಕೊಲ್ಲಲಾಯಿತು.

ಕೌಶಲ್ ಚೌಧರಿ:

ಇದೀಗ ಗುರುಗ್ರಾಮದ ಜೈಲಿನಲ್ಲಿರುವ ಕುಖ್ಯಾತ ದರೋಡೆಕೋರ ಕೌಶಲ್ ಚೌಧರಿಯನ್ನೂ ಬಿಷ್ಣೋಯ್ ಗುರಿಯಾಗಿಸಿಕೊಂಡಿದ್ದಾನೆ. ಕೌಶಲ್ ಚೌಧರಿ ಬಿಷ್ಣೋಯ್‌ನ ಬದ್ಧ ವೈರಿಯಾಗಿದ್ದ ಬಾಂಬಿಹಾ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದ. ಮಿದ್ದುಖೇರಾ ಹಂತಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪ ಹೊತ್ತಿದ್ದ. ಬಿಷ್ಣೋಯ್ ಚೌಧರಿಯನ್ನು ಕೊಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾನೆ.

ಇದನ್ನೂ ಓದಿ: ಬಾಬಾ ಸಿದ್ದಿಕ್ ಹತ್ಯೆಗೆ ಗುಜರಾತ್ ನಂಟು ಇದೆ, ಅಮಿತ್ ಶಾ ರಾಜೀನಾಮೆ ನೀಡಲಿ: ಸಂಜಯ್ ರಾವತ್

ಅಮಿತ್ ದಾಗರ್:

ಜೈಲಿನಲ್ಲಿರುವ ದರೋಡೆಕೋರ ಮತ್ತು ಬಿಷ್ಣೋಯ್​ನ ಪ್ರತಿಸ್ಪರ್ಧಿ ಗ್ಯಾಂಗ್‌ನ ಸದಸ್ಯ ಅಮಿತ್ ದಾಗರ್ ಕೂಡ ಬಿಷ್ಣೋಯ್​ನ ಮುಂದಿನ ಟಾರ್ಗೆಟ್. ಆತ ದಾಗರ್ ಮಿದ್ದುಖೇರಾ ಕೊಲೆಯಲ್ಲಿ ಭಾಗಿಯಾಗಿದ್ದ ಮತ್ತು ಕೌಶಲ್ ಚೌಧರಿಯ ನಿಕಟ ಮಿತ್ರ.

ಬಾಬಾ ಸಿದ್ಧಿಕ್ ಕೊಲೆಯನ್ನು ಕಂಟ್ರಾಕ್ಟ್​ ಕಿಲ್ಲಿಂಗ್ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯ್ ಜೈಲಿನಲ್ಲಿದ್ದುಕೊಂಡೇ ಕಂಟ್ರಾಕ್ಟ್​ ಕೊಟ್ಟು ಈ ಹತ್ಯೆ ಮಾಡಿಸಿದ್ದಾನೆ ಎಂಬ ಅನುಮಾನವಿದೆ. ಈ ಕೊಲೆಯ ಹಿಂದೆ ಆತನ ಕೈವಾಡದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. 11 ರಾಜ್ಯಗಳಾದ್ಯಂತ 700ಕ್ಕೂ ಹೆಚ್ಚು ಶೂಟರ್‌ಗಳನ್ನು ಒಳಗೊಂಡಿರುವ ಬಿಷ್ಣೋಯ್ ಗ್ಯಾಂಗ್‌ನ ಜಾಲವು ದಾವೂದ್ ಇಬ್ರಾಹಿಂನ ಅಪರಾಧ ಸಾಮ್ರಾಜ್ಯದಷ್ಟೇ ವಿಸ್ತಾರವಿದೆ ಎನ್ನಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us