ಕಾಂಗ್ರೆಸ್​​​ಗೆ ಮರಳಿದ ಮಧ್ಯ ಪ್ರದೇಶದ ಬಿಜೆಪಿ ನಾಯಕ; 400 ಕಾರುಗಳೊಂದಿಗೆ ಸೈರನ್ ಮೊಳಗಿಸಿ ಗತ್ತು ಪ್ರದರ್ಶನ

|

Updated on: Jun 15, 2023 | 1:02 PM

ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್, ಪಕ್ಷಕ್ಕೆ ಮರಳಿದ ಬೈಜನಾಥ್ ಸಿಂಗ್ ಅವರನ್ನು ಸ್ವಾಗತಿಸಿದರು. ಬೈಜನಾಥ್ ಸಿಂಗ್ ಜೊತೆಗೆ ಬಿಜೆಪಿಯ 15 ಜಿಲ್ಲಾ ಮಟ್ಟದ ನಾಯಕರು ಕೂಡಾ ಕಾಂಗ್ರೆಸ್ ಸೇರಿದ್ದಾರೆ.

ಕಾಂಗ್ರೆಸ್​​​ಗೆ ಮರಳಿದ ಮಧ್ಯ ಪ್ರದೇಶದ ಬಿಜೆಪಿ ನಾಯಕ; 400 ಕಾರುಗಳೊಂದಿಗೆ ಸೈರನ್ ಮೊಳಗಿಸಿ ಗತ್ತು ಪ್ರದರ್ಶನ
ಬೈಜನಾಥ್ ಸಿಂಗ್
Follow us on

ಭೋಪಾಲ್: ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಹಾರುವುದು ರಾಜಕಾರಣಿಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ರಾಜಕಾರಣಿ ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP)ಸೇರಿ ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.ಹೀಗೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳಿ ಬಂದ ರಾಜಕಾರಣಿ ಮಧ್ಯಪ್ರದೇಶದ ಬೈಜನಾಥ್ ಸಿಂಗ್ (Baijnath Singh). ಇವರು ಶಿವಪುರಿಯಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಭೋಪಾಲ್‌ಗೆ 400 ಕಾರುಗಳ ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಸಿ ಗತ್ತು ಪ್ರದರ್ಶಿಸಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ 2020 ರ ಬಂಡಾಯದ ಸಮಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಿಂಗ್ ಈಗ ಮತ್ತ ಹಳೇ ಪಕ್ಷಕ್ಕೆ ವಾಪಾಸ್ ಆಗಿದ್ದಾರೆ.

ಶಿವಪುರಿಯಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ಬೈಜನಾಥ್ ಸಿಂಗ್ ಅವರು 2020 ರ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯದ ಸಮಯದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ಸಂದರ್ಭದಲ್ಲಿ ಸಿಂಧಿಯಾ ಅವರೊಂದಿಗೆ ಬಿಜೆಪಿ ಸೇರ್ಪಡೆ ಆಗಿದ್ದರು. ಆಗ ಬಂಡಾಯಕ್ಕೆ ನೇತೃತ್ವ ವಹಿಸಿದ್ದ ಸಿಂಧಿಯಾ ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ.

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಸಿಂಗ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್, ಪಕ್ಷಕ್ಕೆ ಮರಳಿದ ಬೈಜನಾಥ್ ಸಿಂಗ್ ಅವರನ್ನು ಸ್ವಾಗತಿಸಿದರು. ಬೈಜನಾಥ್ ಸಿಂಗ್ ಜೊತೆಗೆ ಬಿಜೆಪಿಯ 15 ಜಿಲ್ಲಾ ಮಟ್ಟದ ನಾಯಕರು ಕೂಡಾ ಕಾಂಗ್ರೆಸ್ ಸೇರಿದ್ದಾರೆ.

ತಾವು ಬಿಜೆಪಿಯಿಂದ ಕಾಂಗ್ರೆಸ್ ಸೇರುವುದನ್ನು ತೋರಿಸಲು ಬೈಜನಾಥ್ ಸಿಂಗ್ ಶಿವಪುರಿಯಿಂದ ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ 400-ಕಾರುಗಳ ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಸಿದ್ದಾರೆ. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಓಡುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಹೀಗೆ ರಸ್ತೆಯಲ್ಲಿ ಕಾರುಗಳು ಹಾದು ಹೋಗುವಾಗ ಜನರು ಅವರತ್ತ ಕೈ ಬೀಸುತ್ತಿರುವುದು,ಮೊಬೈಲ್ ನಲ್ಲಿ ಚಿತ್ರ ಸೆರೆ ಹಿಡಿಯುವುದು ಕಾಣಿಸುತ್ತದೆ.

ಬೆಂಗಾವಲು ಪಡೆಯಲ್ಲಿ ಸಾಲಾಗಿ ಸಾಗುತ್ತಿರುವ ಎಸ್‌ಯುವಿಗಳನ್ನು ನೋಡಿದರೆ ಬಾಲಿವುಡ್ ಸಿನಿಮಾ ಸಿಂಗಂನ ದೃಶ್ಯ ನೆನಪಿಗೆ ಬರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ: Wrestling protest: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪೋಕ್ಸೊ ಪ್ರಕರಣ ರದ್ದತಿ ವರದಿ ಸಲ್ಲಿಸಿದ ದೆಹಲಿ ಪೊಲೀಸರು

ಇನ್ನು ಕೆಲವರು ಸೈರನ್ ಬಳಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.ಕಾನೂನಿನ ಪ್ರಕಾರ, ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸೈರನ್ ಬಳಸಲು ಅನುಮತಿ ಇದೆ. ಇವುಗಳಲ್ಲಿ ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ದಳಗಳು ಮತ್ತು ಕೆಲವು ಸಂದರ್ಭಗಳಲ್ಲಿ ಪೊಲೀಸ್ ವಾಹನಗಳು ಸೇರಿವೆ. ಆದರೆ ರಾಜಕಾರಣಿಗಳು ಇದನ್ನು ಹೆಚ್ಚಾಗಿ ಅಧಿಕಾರದ ದರ್ಪ ಮೆರೆಯಲು ಪ್ರದರ್ಶಿಸುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಸೈರನ್‌ಗಳ ಬಳಕೆ ಕಾಂಗ್ರೆಸ್‌ನ ಊಳಿಗಮಾನ್ಯ ಮನೋಭಾವವನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಹೇಳಿದೆ. ‘ಹೂಟರ್‌, ಸೈರನ್‌, ಅಕ್ರಮ ಬೀಕನ್‌ಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಡುವ ಕಾಂಗ್ರೆಸ್‌ ನಾಯಕರ ಮನಸ್ಥಿತಿ ಇದು. ಪ್ರಧಾನಿ ನರೇಂದ್ರ ಮೋದಿ ಅವರು ವಿಐಪಿ ಸಂಸ್ಕೃತಿಯನ್ನು ತೆಗೆದುಹಾಕಿದ್ದರು. ಆದರೆ ಕಾಂಗ್ರೆಸ್‌ನ ಊಳಿಗಮಾನ್ಯ ಮನೋಭಾವವೇ ಹೂಟರ್‌ಗಳನ್ನು ಬಳಸಲು ಕಾರಣವಾಗುತ್ತಿದೆ, ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಡಾ.ಹಿತೇಶ್ ಬಾಜಪೇಯಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ