ರೈತ ಹೋರಾಟಕ್ಕೆ ’ಮಹಾತ್ಮ‘ ಬಲ; ರಾಕೇಶ್ ಟಿಕಾಯತ್ ಭೇಟಿ ಮಾಡಿದ ಮಹಾತ್ಮಾ ಗಾಂಧಿ ಮೊಮ್ಮಗಳು

ಮೊದಲ ಸ್ವಾತಂತ್ರ್ಯ ಸಂಗ್ರಾಮವೂ ಉತ್ತರ ಪ್ರದೇಶದ ಮೀರತ್​ನಿಂದಲೇ ಆರಂಭವಾಗಿತ್ತು ಎಂದು ಮಹಾತ್ಮಾ ಗಾಂಧೀಜಿಯವರ ಮೊಮ್ಮಗಳು 84 ವರ್ಷದ ತಾರಾ ಗಾಂಧಿ ಭಟ್ಟಾಚರ್ಜಿ ಸ್ಮರಿಸಿಕೊಂಡರು..

ರೈತ ಹೋರಾಟಕ್ಕೆ ’ಮಹಾತ್ಮ‘ ಬಲ; ರಾಕೇಶ್ ಟಿಕಾಯತ್ ಭೇಟಿ ಮಾಡಿದ ಮಹಾತ್ಮಾ ಗಾಂಧಿ ಮೊಮ್ಮಗಳು
ರಾಜಕೀಯ ಉದ್ದೇಶವಿಲ್ಲದೇ ರೈತರ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಮಹಾತ್ಮಾ ಗಾಂಧಿ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚರ್ಜಿ ಹೇಳಿದ್ದಾಗಿ ಭಾರತೀಯ ಕಿಸಾನ್ ಯೂನಿಯನ್​ ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
Edited By:

Updated on: Feb 14, 2021 | 2:58 PM

ದೆಹಲಿ: ಕಳೆದ 81 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ಇದೀಗ ‘ಮಹಾತ್ಮ’ ಬಲ ಬಂದಿದೆ. ಮಹಾತ್ಮಾ ಗಾಂಧೀಜಿಯವರ ಮೊಮ್ಮಗಳು 84 ವರ್ಷದ ತಾರಾ ಗಾಂಧಿ ಭಟ್ಟಾಚರ್ಜಿ (Mahatma Gandhis Granddaughter Tara Gandhi Bhattacharjee) ದೆಹಲಿಯ ಘಾಜಿಪುರ ಗಡಿ ಭಾಗದಲ್ಲಿ ರೈತ ಹೋರಾಟಗಾರರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ್ದಾರೆ. ರಾಷ್ಟ್ರೀಯ ಗಾಂಧಿ ಮ್ಯೂಸಿಯಂನ ಅಧ್ಯಕ್ಷರೂ ಆಗಿರುವ ಅವರು, ಕೇಂದ್ರ ಸರ್ಕಾರಕ್ಕೆ ರೈತ ಸಮುದಾಯ ಹಿತ ಕಾಪಾಡುವಂತೆ ಆಗ್ರಹಿಸಿದ್ದಾರೆ.

ರಾಜಕೀಯ ಉದ್ದೇಶವಿಲ್ಲದೇ ರೈತರ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಮಹಾತ್ಮಾ ಗಾಂಧಿ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚರ್ಜಿ ಹೇಳಿದ್ದಾಗಿ ಭಾರತೀಯ ಕಿಸಾನ್ ಯೂನಿಯನ್​ ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ರೈತರಿಂದಲೇ ದೇಶದ ಇತರ ಜನರು ನೆಮ್ಮದಿಯಿಂದ ಬದುಕುತ್ತಿದ್ದು, ಅವರ ಹಿತರಕ್ಷಣೆ ದೇಶದ ಜವಾಬ್ದಾರಿಯಾಗಿದೆ ಎಂದು ತಾರಾ ಗಾಂಧಿ ಭಟ್ಟಾಚರ್ಜಿ ಅಭಿಪ್ರಾಯ ವ್ಯಕ್ತಪಡಿದ್ದಾರೆ. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮವೂ ಉತ್ತರ ಪ್ರದೇಶದ ಮೀರತ್​ನಿಂದಲೇ ಆರಂಭವಾಗಿತ್ತು ಎಂದು ಅವರು ಸ್ಮರಿಸಿಕೊಂಡರು ಎಂದು ಸಹ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಅವರು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ರಾಮಚಂದ್ರ ರಹಿ, ನಿರ್ದೇಶಕ ಸಂಜಯ್ ಸಿಂಘಾ, ಆಲ್ ಇಂಡಿಯಾ ಸರ್ವ ಸೇವಾ ಸಂಘದ ಆಡಳಿತ ಮಂಡಳಿಯ ಅಶೋಕ್ ಸರನ್ ಮತ್ತು ರಾಷ್ಟ್ರೀಯ ಗಾಂಧಿ ಮ್ಯೂಸಿಯಂನ ನಿರ್ದೇಶಕ ಎ.ಅಣ್ಣಾಮಲೈ ಅವರ ಜತೆಗೆ ಗಾಜಿಪುರ ಗಡಿಯಲ್ಲಿ ಪ್ರತಿಭಟನಾ ನಿರತ ರಾಕೇಶ್ ಟಿಕಾಯತ್ ಮತ್ತು ಸಂಗಡಿಗರನ್ನು ಭೇಟಿಯಾಗಿದ್ದಾರೆ.

ಕಳೆದ 81 ದಿನಗಳಿಂದ ನಿರಂತರವಾಗಿ ದೆಹಲಿಯ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ರೈತ ಹೋರಾಟವು ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಗಣರಾಜ್ಯೋತ್ಸವ ದಿನದಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಅನ್ಯ ಧ್ವಜ ಹಾರಿಸಿ, ಪ್ರತಿಭಟನೆ ಗಲಭೆಯ ಸ್ವರೂಪ ಪಡೆದುಕೊಂಡಿದ್ದಲ್ಲದೇ ಹಲವು ರೈತರು, ಪೊಲೀಸರು ಗಾಯಗೊಂಡಿದ್ದರು.

ಇದನ್ನೂ ಓದಿ: Deep Sidhu: ಬಂಧಿತ ದೀಪ್​ ಸಿಧು, ಇಕ್ಬಾಲ್​ ಸಿಂಗ್​​ರನ್ನು ಕೆಂಪುಕೋಟೆಗೆ ಕರೆದುಕೊಂಡು ಹೋದ ದೆಹಲಿ ಪೊಲೀಸರು