ಒಟ್ಟಿಗೇ ಮದ್ಯಪಾನ ಮಾಡಲು ಲಿಕ್ಕರ್ ಶಾಪ್ಗೆ ಹೋದ ಸ್ನೇಹಿತರು; 10 ರೂ.ಗಾಗಿ ನಡೆದೇ ಹೋಯ್ತು ಭೀಕರ ಕೊಲೆ
ತಲೆಗೆ ತೀವ್ರವಾದ ಗಾಯವಾದ ಕಾರಣ ತೀವ್ರ ರಕ್ತಸ್ರಾವವಾಗಿ ಭಗವತ್ ಸೀತಾರಾಮ್ ಮೃತಪಟ್ಟಿದ್ದಾರೆ. ಘಟನೆ ನಡೆದ ಒಂದೇ ತಾಸಿನಲ್ಲಿ ಇಬ್ಬರೂ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.

ಅಲ್ಕೋಹಾಲ್ನಿಂದ ನಡೆಯುವ ಕ್ರೈಂಗಳು ಒಂದೆರಡಲ್ಲ. ಮದ್ಯದ ಅಮಲಿನಲ್ಲಿ ನಡೆಯುವ ಅಪರಾಧಗಳು ಒಂದಷ್ಟಾದರೆ, ಈ ಮದ್ಯಕ್ಕಾಗಿ ನಡೆಯುವ ಕ್ರೈಂಗಳು ಮತ್ತೊಂದಷ್ಟು. ಇದೀಗ ಮದ್ಯಪಾನ ಮಾಡುವ ವಿಚಾರಕ್ಕೆ 50 ವರ್ಷದ ವ್ಯಕ್ತಿಯೊಬ್ಬರನ್ನು ಅವರ ಇಬ್ಬರು ಸ್ನೇಹಿತರೇ ಹತ್ಯೆ ಮಾಡಿರುವ ದುರ್ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಭಗವತ್ ಸೀತಾರಾಮ್ ಫೇಸ್ ಎಂದು ಗುರುತಿಸಲಾಗಿದೆ. ಹಾಗೇ ಕೊಲೆ ಮಾಡಿದ ಆರೋಪಿಗಳನ್ನು ವಿನೋದ್ ಲಕ್ಷ್ಮಣ್ ವಾಂಖೆಡೆ (40) ಮತ್ತು ದಿಲೀಪ್ ತೃಯಂಬಕ ಬೊಡ್ಡೆ ಎಂದು ಹೇಳಲಾಗಿದೆ.
ಈ ಮೂವರು ಮದ್ಯಪಾನ ಮಾಡುವ ಯೋಜನೆ ಹಾಕಿಕೊಂಡು ಒಂದು ಲಿಕ್ಕರ್ ಶಾಪ್ಗೆ ಹೋಗಿದ್ದರು. ಅಲ್ಲಿ ಭಗವತ್ ಸೀತಾರಾಮ್ ಅವರ ಬಳಿ 10 ರೂಪಾಯಿ ಕೊಡುವಂತೆ ಉಳಿದಿಬ್ಬರು ಕೇಳಿದ್ದಾರೆ. ಆದರೆ ಅಷ್ಟು ಹಣ ನೀಡಲು ಅವರು ನಿರಾಕರಿಸಿದ್ದಾರೆ ಮತ್ತು ಆ ಅಂಗಡಿಯಿಂದ ಹೊರಟಿದ್ದಾರೆ. ಕೋಪಗೊಂಡ ವಿನೋದ್ ಮತ್ತು ದಿಲೀಪ್ ಹಿಂದಿನಿಂದ ಹೋಗಿ ಭಗವತ್ ಅವರ ತಲೆಗೆ ಮರದ ಕೋಲಿನಿಂದ ಹೊಡೆದಿದ್ದಾರೆ. ತಲೆಗೆ ತೀವ್ರವಾದ ಗಾಯವಾದ ಕಾರಣ ರಕ್ತಸ್ರಾವವಾಗಿ ಭಗವತ್ ಮೃತಪಟ್ಟಿದ್ದಾರೆ.
ಘಟನೆ ನಡೆದ ಒಂದೇ ತಾಸಿನಲ್ಲಿ ಇಬ್ಬರೂ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಲಿಕ್ಕರ್ ಶಾಪ್ವೊಂದರ ಬಳಿ ವ್ಯಕ್ತಿಯೊಬ್ಬ ರಕ್ತದ ಮಡುವಲ್ಲಿ ಬಿದ್ದಿದ್ದಾಗಿ ನಮಗೆ ಮಾಹಿತಿ ಬಂತು. ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಲ್ಹಾದ್ ಕಟ್ಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಯಕ್ತ ಸಿದ್ದಗಂಗಾ ಮಠದ ಹತ್ತು ಸಾವಿರ ಮಕ್ಕಳಿಂದ ಕನ್ನಡ ಹಾಡುಗಳ ಗಾಯನ




