AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸ್ಕೃತದಲ್ಲಿ 5 ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ; ಶ್ಲೋಕ, ಮಂತ್ರಗಳ ಸ್ಪಷ್ಟ ಉಚ್ಚಾರಣೆಗೆ ಶ್ಲಾಘನೆ

ಸಂಸ್ಕೃತ ದೈವ ಭಾಷೆ. ಸಂಸ್ಕೃತದಲ್ಲಿ ಕವಿತೆ, ಪದ್ಯಗಳನ್ನು ಓದಲು ತುಂಬ ಸಂತೋಷವಾಗುತ್ತದೆ ಎಂದು ಹೇಳುವ ಗಜಾಲಾಗೆ, ಸಂಸ್ಕೃತ ಭಾಷೆಯ ಪ್ರಾಧ್ಯಾಪಕರಾಗುವುದು, ವೇದ ಸಾಹಿತ್ಯದಲ್ಲಿ ಪಿಎಚ್​ಡಿ ಮಾಡುವುದು ಕನಸು.

ಸಂಸ್ಕೃತದಲ್ಲಿ 5 ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ; ಶ್ಲೋಕ, ಮಂತ್ರಗಳ ಸ್ಪಷ್ಟ ಉಚ್ಚಾರಣೆಗೆ ಶ್ಲಾಘನೆ
ಗಜಾಲಾ
TV9 Web
| Updated By: Lakshmi Hegde|

Updated on:Feb 12, 2022 | 5:11 PM

Share

ಲಖನೌ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿ (Muslim Girl)ಯೊಬ್ಬಳು ಸಂಸ್ಕೃತ ಭಾಷೆಯಲ್ಲಿ(Sanskrit)  ಐದು ಚಿನ್ನದ ಪದಕಗಳನ್ನು (5 Medals) ಬಹುಮಾನವಾಗಿ ಪಡೆದು ಗಮನಸೆಳೆದಿದ್ದಾಳೆ. ಇವರು ಸಂಸ್ಕೃತ ಸ್ನಾತಕೋತ್ತರ ಪದವೀಧರೆ. ಸಂಸ್ಕೃತ ಭಾಷೆ ಕಲಿಕೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಪ್ರಶಸ್ತಿ ಸ್ವೀಕರಿಸಿರುವ ಜತೆಗೆ, ಸಂಸ್ಕೃತ ವಿಭಾಗದಲ್ಲಿಯೇ ಮಾಡಿದ ವಿವಿಧ ಸಾಧನೆಗಾಗಿ ಒಟ್ಟು 5 ಚಿನ್ನದ ಪದಕವನ್ನು ಸ್ವೀಕರಿಸಿದ್ದಾರೆ.  ಈ ಸಂಸ್ಕೃತ ಸಾಧಕಿ ಹೆಸರು ಗಜಾಲಾ. 2021ರ ನವೆಂಬರ್​​ನಲ್ಲಿ ನಡೆದ ಯೂನಿವರ್ಸಿಟಿಯ ಘಟಿಕೋತ್ಸವದಲ್ಲಿ ಗಜಾಲಾ ಚಿನ್ನದ ಪದಕ ಗಳಿಸಿದ್ದಾಗಿ ಘೋಷಿಸಲಾಯಿತಾದರೂ ಅಂದು ಬಹುಮಾನ ವಿತರಣೆ ಆಗಿರಲಿಲ್ಲ. ಕೊವಿಡ್ 19 ಕಾರಣಕ್ಕೆ ಕೆಲವೇ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಗಿತ್ತು. ವಿಶ್ವವಿದ್ಯಾಲಯದಲ್ಲಿ ಗುರುವಾರ (ಫೆ.10) ನಡೆದ ಅಧ್ಯಾಪಕ ವೃಂದ ಮಟ್ಟದ ಸಮಾರಂಭದಲ್ಲಿ ಗಜಾಲಾರಿಗೆ ಪದಕಗಳನ್ನು ನೀಡಲಾಗಿದೆ ಎಂದು ಯೂನಿವರ್ಸಿಟಿಯ ಸಿಬ್ಬಂದಿ ತಿಳಿಸಿದ್ದಾರೆ.

ಗಜಾಲಾ 10ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಸಹೋದರಿಯರು, ಇಬ್ಬರು ಸೋದರರು ಇದ್ದಾರೆ. ತಂದೆ ಮೃತಪಟ್ಟ ಬಳಿಕ ಗಜಾಲಾರನ್ನು ಬಿಟ್ಟು, ಇನ್ಯಾರೂ ಶಿಕ್ಷಣವನ್ನು ಮುಂದುವರಿಸಲಿಲ್ಲ. ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ಗಜಾಲಾ ತುಂಬ ಶ್ರಮ ಪಟ್ಟು ಓದಿದ್ದಾರೆ. ಮುಂಜಾನೆ 5ಗಂಟೆಗೇ ಎದ್ದು, ನಮಾಜ್ ಮಾಡಿ, ಮನೆಕೆಲಸಗಳನ್ನು ಮಾಡಿದ ನಂತರ ದಿನಕ್ಕೆ ಏಳು ತಾಸು ಸಂಸ್ಕೃತಾಭ್ಯಾಸ ಮಾಡುತ್ತಿದ್ದರು.

ಇದೀಗ ತಮಗೆ ಬಂದ ಪ್ರಶಸ್ತಿ, ಪದಕಗಳ ಕ್ರೆಡಿಟ್​ನ್ನು ಗಜಾಲಾ, ತಮ್ಮ ತಾಯಿ, ಸೋದರ-ಸೋದರಿಯರಿಗೆ ಅರ್ಪಿಸಿದ್ದಾರೆ. ನನಗೆ ಅಮ್ಮ-ಅಕ್ಕಂದಿರು ಮತ್ತು ಅಣ್ಣಂದಿರ ಸಹಾಯವಿಲ್ಲದೆ ಇದ್ದರೆ ಓದು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಇಬ್ಬರು ಸೋದರರು ಮೆಕ್ಯಾನಿಕ್​ ಕೆಲಸ ಮಾಡುತ್ತಾರೆ. ಸೋದರಿಯೊಬ್ಬಳು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರೆಲ್ಲರೂ ನನಗೆ ಓದಲು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ತಮಗೆ ಐದನೇ ತರಗತಿಯಲ್ಲಿ ಇದ್ದಾಗಿನಿಂದಲೂ ಸಂಸ್ಕೃತದಲ್ಲಿ ಆಸಕ್ತಿಯಿತ್ತು ಎಂದೂ ತಿಳಿಸಿದ್ದಾರೆ.

ಸಂಸ್ಕೃತ ಭಾಷೆಯ ಪ್ರಾಧ್ಯಾಪಕರಾಗುವುದು, ವೇದ ಸಾಹಿತ್ಯದಲ್ಲಿ ಪಿಎಚ್​ಡಿ ಮಾಡುವುದು ಗಜಾಲಾ ಕನಸು. ಇದು ದೈವ ಭಾಷೆ. ಸಂಸ್ಕೃತದಲ್ಲಿ ಕವಿತೆ, ಪದ್ಯಗಳನ್ನು ಓದಲು ತುಂಬ ಸಂತೋಷವಾಗುತ್ತದೆ ಎಂದು ಹೇಳುವ ಅವರು, ಸಂಸ್ಕೃತ ಶ್ಲೋಕ, ಗಾಯತ್ರಿ ಮಂತ್ರ, ಸರಸ್ವತಿ ವಂದನೆ ಶ್ಲೋಕಗಳನ್ನೆಲ್ಲ ಅತ್ಯಂತ ಸ್ಪಷ್ಟವಾಗಿ ಹೇಳಬಲ್ಲರು. ಯೂನಿವರ್ಸಿಟಿಯ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಜಾಲಾ ಅವರೇ ಸರಸ್ವತಿ ವಂದನೆ ಹಾಡುತ್ತಾರೆ. ಇನ್ನು ತಾನೊಬ್ಬಳು ಮುಸ್ಲಿಂ ಆಗಿ ಸಂಸ್ಕೃತ ಕಲಿತಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಸಂತೋಷ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ. ನನ್ನ ಕುಟುಂಬವಂತೂ ನನ್ನ ಕಲಿಕೆಗೆ ಸಹಕಾರ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏಕಕಾಲಕ್ಕೆ ಎರಡು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ‘83’ ರಿಲೀಸ್​; ಇಲ್ಲಿದೆ ಬಿಡುಗಡೆ ದಿನಾಂಕ

Published On - 5:11 pm, Sat, 12 February 22