ಭರವಸೆಯಂತೆ 1 ಲಕ್ಷ ರೂ. ಪಡೆಯಲು ಕಾಂಗ್ರೆಸ್ ಕಚೇರಿಯೆದುರು ಕ್ಯೂ ನಿಂತ ಮುಸ್ಲಿಂ ಮಹಿಳೆಯರು!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವಾರು ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್​ ಇದೀಗ ಪೇಚಾಟಕ್ಕೆ ಸಿಲುಕಿದೆ. ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿದ 1 ಲಕ್ಷ ರೂ.ಗಳ 'ಗ್ಯಾರೆಂಟಿ ಕಾರ್ಡ್' ನೀಡುವಂತೆ ಒತ್ತಾಯಿಸಿ ಮುಸ್ಲಿಂ ಮಹಿಳೆಯರು ಉತ್ತರ ಪ್ರದೇಶದ ಲಕ್ನೋದ ಕಾಂಗ್ರೆಸ್ ಕಚೇರಿಯ ಮುಂದೆ ಸಾಲಿನಲ್ಲಿ ನಿಂತಿರುವ ವಿಡಿಯೋ ವೈರಲ್ ಆಗಿದೆ.

ಭರವಸೆಯಂತೆ 1 ಲಕ್ಷ ರೂ. ಪಡೆಯಲು ಕಾಂಗ್ರೆಸ್ ಕಚೇರಿಯೆದುರು ಕ್ಯೂ ನಿಂತ ಮುಸ್ಲಿಂ ಮಹಿಳೆಯರು!
1 ಲಕ್ಷ ರೂ. ನೀಡುವಂತೆ ಕಾಂಗ್ರೆಸ್ ಕಚೇರಿಯೆದುರು ಕ್ಯೂ ನಿಂತ ಮುಸ್ಲಿಂ ಮಹಿಳೆಯರು

Updated on: Jun 05, 2024 | 5:44 PM

ಲಕ್ನೋ: ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Results 2024) ಈಗಾಗಲೇ ಪ್ರಕಟವಾಗಿದ್ದು, ಕಳೆದ ಬಾರಿಯ ಫಲಿತಾಂಶಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್​ಗೆ ಹೊಸ ಸಂಕಷ್ಟ ಎದುರಾಗಿದೆ. ಚುನಾವಣಾ ಪ್ರಚಾರದ (Election Campaign) ವೇಳೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 1 ಲಕ್ಷ ರೂ.ಗಳ ‘ಗ್ಯಾರೆಂಟಿ ಕಾರ್ಡ್’ನ ಭರವಸೆ ನೀಡಿತ್ತು. ಈ ಗ್ಯಾರೆಂಟಿ ಕಾರ್ಡ್ (Guarantee Card) ನೀಡುವಂತೆ ಲಕ್ನೋದ ಕಾಂಗ್ರೆಸ್ ಪ್ರಧಾನ ಕಛೇರಿಯ ಎದುರಿನಲ್ಲಿ ಮುಸ್ಲಿಂ ಮಹಿಳೆಯರು ಸೇರಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಇಂಡಿಯ ಬಣ ಅನಿರೀಕ್ಷಿತವಾಗಿ ಜಯಭೇರಿ ಬಾರಿಸುತ್ತಿದ್ದಂತೆ, ಪ್ರಚಾರದ ಸಮಯದಲ್ಲಿ ಭರವಸೆ ನೀಡಿದ ‘ಗ್ಯಾರೆಂಟಿ ಕಾರ್ಡ್’ಗಳನ್ನು ನೀಡುವಂತೆ ಲಕ್ನೋದಲ್ಲಿ ಹಲವಾರು ಮುಸ್ಲಿಂ ಮಹಿಳೆಯರು ಕಾಂಗ್ರೆಸ್ ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಒಂದು ದಿನದ ನಂತರ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಮಹಿಳೆಯರು ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಕಚೇರಿಯ ಹೊರಗೆ ‘ಗ್ಯಾರೆಂಟಿ ಕಾರ್ಡ್’ಗೆ ಒತ್ತಾಯಿಸಿದ್ದಾರೆ. ಅನೇಕ ಮಹಿಳೆಯರು ತಮ್ಮ ಹೆಸರು, ವಿಳಾಸ ಮತ್ತು ಸಂಖ್ಯೆಯನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Rahul Gandhi: ಸಂವಿಧಾನದ ರಕ್ಷಣೆಗೆ ಮೊದಲ ಹೆಜ್ಜೆಯಿಟ್ಟಿದ್ದೇವೆ; ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ಗ್ಯಾರಂಟಿ ಕಾರ್ಡ್ ಅನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ಕಾಂಗ್ರೆಸ್ ಕಚೇರಿಯಿಂದ ರಶೀದಿಯನ್ನು ಸಹ ಪಡೆದಿದ್ದೇವೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಹಣ ನೀಡುವುದಾಗಿ ಭರವಸೆ ನೀಡಿತ್ತು. ಈಗ ಇಂಡಿಯ ಬ್ಲಾಕ್ ಉತ್ತಮ ಪ್ರದರ್ಶನ ನೀಡಿದೆ. ಆದ್ದರಿಂದ ನಾವು ಗ್ಯಾರಂಟಿ ಕಾರ್ಡ್ ಸಲ್ಲಿಸಲು ಬಂದಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.

ಕೆಲವು ಮಹಿಳೆಯರು ‘ಗ್ಯಾರಂಟಿ ಕಾರ್ಡ್‌’ಗೆ ಬೇಡಿಕೆಯಿಟ್ಟರೆ, ಈಗಾಗಲೇ ಅವುಗಳನ್ನು ಪಡೆದಿರುವ ಇತರರು ತಮ್ಮ ಖಾತೆಗಳಿಗೆ ಭರವಸೆ ನೀಡಿದ ಹಣವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಿದರು. ಕೆಲವರು ತಮ್ಮ ವಿವರಗಳನ್ನು ನೀಡಿದ ನಂತರ ಕಾಂಗ್ರೆಸ್ ಕಚೇರಿಯಿಂದ ರಸೀದಿಗಳನ್ನು ಪಡೆದಿರುವುದಾಗಿಯೂ ಹೇಳಿಕೊಂಡರು. 25 ಗ್ಯಾರಂಟಿಗಳೊಂದಿಗೆ ಸುಮಾರು 80 ಮಿಲಿಯನ್ ಮನೆಗಳನ್ನು ತಲುಪಲು ಕಾಂಗ್ರೆಸ್ ‘ಘರ್ ಘರ್ ಗ್ಯಾರಂಟಿ’ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇವುಗಳಲ್ಲಿ ಮಹಾಲಕ್ಷ್ಮಿ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಮಹಿಳಾ ಮುಖ್ಯಸ್ಥರ ಖಾತೆಗಳಿಗೆ ನೇರವಾಗಿ ತಿಂಗಳಿಗೆ 8,500 ರೂ. ನೀಡುವುದಾಗಿ ಘೋಷಿಸಿತ್ತು. ಈ ಯೋಜನೆಯು ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಗೃಹ ಲಕ್ಷ್ಮಿ ಯೋಜನೆಗೆ ಹೋಲುತ್ತದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ: ಕಲ್ಯಾಣ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಕಾಂಗ್ರೆಸ್ 

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ 1 ಲಕ್ಷ ರೂ. ಗ್ಯಾರಂಟಿ ಕಾರ್ಡ್ ನೀಡುವುದಾಗಿ ಘೋಷಿಸಿತ್ತು. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹೊಸ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರ ಖಾತೆಗಳಿಗೆ ವಾರ್ಷಿಕ 1 ಲಕ್ಷ ರೂ. ನೀಡಲಿದೆ ಎಂದಿದ್ದರು. ನಿರುದ್ಯೋಗಿ ಯುವಕರಿಗೆ ಖಾತ್ರಿಯ ಶಿಷ್ಯವೃತ್ತಿಯನ್ನು ಒದಗಿಸುವುದಾಗಿಯೂ ರಾಹುಲ್ ಗಾಂಧಿ ಭರವಸೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us