
ಭೋಪಾಲ್, ಮೇ 20: ಮಧ್ಯಪ್ರದೇಶದ ಭೋಪಾಲ್ನ ಕಟಾರಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತ್ವಿಶಾ ಶರ್ಮಾ(Twisha Sharma) ಅವರ ಅನುಮಾನಾಸ್ಪದ ಸಾವು ಪ್ರಕರಣ ಈಗ ಇಡೀ ದೇಶದ ಗಮನ ಸೆಳೆದಿದೆ. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರ ಸೊಸೆಯಾಗಿರುವ ತ್ವಿಶಾ ಅವರ ಸಾವು ಕೇವಲ ಆತ್ಮಹತ್ಯೆಯಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಹೆತ್ತ ಕುಟುಂಬ ಆಕ್ರೋಶ ಹೊರಹಾಕಿದೆ. ನ್ಯಾಯಕ್ಕಾಗಿ ಆಗ್ರಹಿಸಿ ತ್ವಿಶಾ ಅವರ ಕುಟುಂಬಸ್ಥರು ಮಂಗಳವಾರ ಸತತ ಏಳನೇ ದಿನವೂ ಮಗಳ ಶವವನ್ನು ಸ್ವೀಕರಿಸಲು ನಿರಾಕರಿಸಿ ಭೀಕರ ಪ್ರತಿಭಟನೆಗೆ ಇಳಿದಿದ್ದಾರೆ.
ಪ್ಲಾನ್ ಮಾಡಿ ವಿದೇಶಕ್ಕೆ ಹಾರಲು ನೋಡಿದ್ದ ಪತಿ: ಲುಕ್ ಔಟ್ ನೋಟಿಸ್ ಜಾರಿ
ಪ್ರಕರಣದ ಮುಖ್ಯ ಆರೋಪಿಯಾಗಿರುವ ತ್ವಿಶಾ ಪತಿ ಸಮರ್ಥ್ ಸಿಂಗ್ ವಿರುದ್ಧ ಪೊಲೀಸರು ಈಗ ಕೊನೆಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಿ ಸಮರ್ಥ್ ದೇಶ ಬಿಟ್ಟು ಪಲಾಯನ ಮಾಡದಂತೆ ಆತನ ಪಾಸ್ಪೋರ್ಟ್ ಅನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ಪಾಸ್ಪೋರ್ಟ್ ಕಚೇರಿಗೆ ಪೊಲೀಸರು ತುರ್ತು ಪತ್ರ ಬರೆದಿದ್ದಾರೆ. ಇಷ್ಟಾದರೂ ಪೊಲೀಸರು ಪ್ರಭಾವಿ ಆರೋಪಿಗಳನ್ನು ರಕ್ಷಿಸಲು ಒಲವು ತೋರುತ್ತಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ನಾಲ್ಕು ದಿನ ತಡವಾಗಿ ಸಿಕ್ಕ ಜಿಮ್ನಾಸ್ಟಿಕ್ಸ್ ಬೆಲ್ಟ್, ಎಸ್ಐಟಿ ಹೇಳುವುದೇನು?
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಎಸಿಪಿ ರಜನೀಶ್ ಕಶ್ಯಪ್ ಪ್ರಕಾರ, ಘಟನೆ ನಡೆದ ನಾಲ್ಕು ದಿನಗಳ ನಂತರ ಅಂದರೆ ಭಾನುವಾರ ತನಿಖಾಧಿಕಾರಿಗಳು ತ್ವಿಶಾ ಕುತ್ತಿಗೆಗೆ ಬಿಗಿದಿದ್ದ ನೇಣಿನ ಹಗ್ಗವನ್ನು (ಲಿಗೇಚರ್) ವಶಪಡಿಸಿಕೊಂಡಿದ್ದಾರೆ. ಈ ಲಿಗೇಚರ್ ತ್ವಿಶಾ ಕುತ್ತಿಗೆಯ ಮೇಲಿದ್ದ ಕಲೆಗಳಿಗೆ ನಿಖರವಾಗಿ ಹೊಂದಿಕೆಯಾಗುತ್ತಿದ್ದು, ಅವರು ‘ಜಿಮ್ನಾಸ್ಟಿಕ್ಸ್ ಬೆಲ್ಟ್’ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಐಟಿ ಹೇಳಿದೆ.
ಮತ್ತಷ್ಟು ಓದಿ: ಮಹಿಳೆಯ ಅನುಮಾನಾಸ್ಪದ ಸಾವು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಎಚ್ಚರಿಕೆ
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಹಾರರ್ ಸತ್ಯ
ಪೊಲೀಸರ ಈ ಆತ್ಮಹತ್ಯೆ ವಾದವನ್ನು ತ್ವಿಶಾ ಕುಟುಂಬ ಸಂಪೂರ್ಣವಾಗಿ ತಳ್ಳಿಹಾಕಿದೆ. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತ್ವಿಶಾ ಅವರ ತಲೆಯಲ್ಲಿ ತೀವ್ರವಾಗಿ ರಕ್ತ ಹೆಪ್ಪುಗಟ್ಟಟ್ಟಿರುವುದು , ದೇಹದ ಹಲವಾರು ಭಾಗಗಳಲ್ಲಿ ಭೀಕರ ಗಾಯಗಳು ಮತ್ತು ಸಾವಿಗೂ ಮುನ್ನ ತೀವ್ರ ಹೊಡೆದಾಟ ನಡೆದಿರುವ ಲಕ್ಷಣಗಳು ಪತ್ತೆಯಾಗಿವೆ.
ಒಂದು ವೇಳೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ ಮೈಮೇಲೆ ಇಷ್ಟೊಂದು ಗಾಯಗಳು ಹೇಗೆ ಬಂದವು, ಘಟನೆ ನಡೆದ ನಾಲ್ಕು ದಿನಗಳ ನಂತರ ಪೊಲೀಸರಿಗೆ ಜಿಮ್ನಾಸ್ಟಿಕ್ಸ್ ಬೆಲ್ಟ್ ಸಿಕ್ಕಿದೆ ಎಂದರೆ ಅದನ್ನ ನಂಬಬೇಕೇ,ಸಾಕ್ಷಿ ನಾಶಪಡಿಸಲು ಇಷ್ಟು ಸಮಯ ತಗೆದುಕೊಳ್ಳಲಾಗಿದೆಯೇ? ಎಂದು ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಪ್ರಶ್ನಿಸಿದ್ದಾರೆ.
ತ್ವಿಶಾ ಅವರ ತಂದೆ ನವನಿಧಿ ಶರ್ಮಾ ಮತ್ತು ಸಹೋದರ ಮೇಜರ್ ಹರ್ಷಿತ್ ಶರ್ಮಾ ಅವರು ಆರೋಪಿಗಳ ಕುಟುಂಬವು ತಮ್ಮ ಕಾನೂನು ಹಾಗೂ ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಕುಟುಂಬ ಪಟ್ಟು ಹಿಡಿದಿದೆ.
ಆದರೆ, ಎರಡನೇ ಶವಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ವಿಳಂಬವಾದಷ್ಟೂ ತ್ವಿಶಾ ಅವರ ಮೃತದೇಹದ ಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಮೈಮೇಲಿರುವ ಗಾಯದ ಗುರುತುಗಳು ಮಸುಕಾಗುತ್ತವೆ ಎಂಬುದು ಪ್ರಭಾವಿ ಆರೋಪಿಗಳ ಕರಾಳ ಯೋಜನೆಯಾಗಿದೆ. ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆದರೆ ಕೊಲೆಯ ಸತ್ಯ ಜಗತ್ತಿಗೆ ತಿಳಿಯುತ್ತದೆ ಎಂಬ ಭಯ ಆರೋಪಿಗಳಿಗಿದೆ ಎಂದು ಸೋದರ ಹರ್ಷಿತ್ ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ಹೆತ್ತವರು, ದೆಹಲಿ ಏಮ್ಸ್ನಲ್ಲಿ ಎರಡನೇ ಶವಪರೀಕ್ಷೆ ನಡೆಸುವವರೆಗೂ ಮಗಳ ದೇಹವನ್ನು ಮುಟ್ಟುವುದಿಲ್ಲ ಎಂದು ದೃಢ ನಿರ್ಧಾರ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ