
ನೋಯ್ಡಾ, ಜನವರಿ 18: ಕಾರು ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಲು ತನ್ನ ಜೀವದ ಹಂಗನ್ನೂ ತೊರೆದು ಡೆಲಿವರಿ ಏಜೆಂಟ್(Delivery Agent) ಹೋರಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಎರಡು ಗಂಟೆಗಳ ಕಾಲ ಕಾರು ನೀರಿನ ಮೇಲೆ ತೇಲುತ್ತಿತ್ತು. ಆದರೆ ಯಾರ ಕಣ್ಣಿಗೂ ಬೀಳಲಿಲ್ಲ, ಅಲ್ಲೇ ಹೋಗುತ್ತಿದ್ದ ಡೆಲಿವರಿ ಏಜೆಂಟ್ ಅದನ್ನು ಗಮನಿಸಿ ಕೂಡಲೇ ಕೆಳಗೆ ದುಮುಕಿದ್ದಾರೆ.
ಟೆಕ್ಕಿ ಯುವರಾಜ್ ಮೆಹ್ತಾ ಎಂಬುವವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆಯತಪ್ಪಿ ನಿರ್ಮಾಣ ಹಂದಲ್ಲಿರುವ ಮಾಲ್ನ ನೀರು ತುಂಬಿದ ಗುಂಡಿಗೆ ಕಾರು ಸಮೇತ ಬಿದ್ದಿದ್ದರು. ಕೂಡಲೇ ಟೆಕ್ಕಿ ತಮ್ಮ ತಂದೆಗೆ ಕರೆ ಮಾಡಿ, ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ನಾನು ಹೀಗೆ ನೀರಿನಲ್ಲಿ ಬಿದ್ದಿದ್ದೇನೆ ಬಂದು ಕಾಪಾಡಿ ಎಂದು ಬೇಡಿಕೊಂಡಿದ್ದರು.
ಡೆಲಿವರಿ ಏಜೆಂಟ್ ಬೇರೇನೂ ಯೋಚಿಸದೆ ನೀರಿಗೆ ಇಳಿದಿದ್ದರು, ತಮ್ಮ ಕೈಲಾದ ಪ್ರಯತ್ನ ಮಾಡಿದ್ದರು. ಪೊಲೀಸರು, ಡೈವರ್ಗಳು ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಲ್ಲರೂ ಅಲ್ಲಿ ಸೇರಿದ್ದರು. ಫ್ಲಿಪ್ಕಾರ್ಟ್ ವಿತರಣಾ ಏಜೆಂಟ್ ಆಗಿರುವ ಮೊನಿಂದರ್, ಮೆಹ್ತಾ ಟಾರ್ಚ್ ಹಿಡಿದು ಕಾರಿನ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿರುವುದನ್ನು ನೋಡಿದ್ದರು.
ಮೆಹ್ತಾ ಉಸಿರಾಡಲು ಕಷ್ಟಪಡುತ್ತಿರುವುದನ್ನು ಅರಿತುಕೊಂಡ ಮೊನಿಂದರ್ ತನ್ನ ಸೊಂಟಕ್ಕೆ ಹಗ್ಗವನ್ನು ಕಟ್ಟಿಕೊಂಡು ಚರಂಡಿಯೊಳಗೆ ಹಾರಿ ಅವನನ್ನು ಉಳಿಸಲು ಪ್ರಯತ್ನಿಸಿದರು.ಮೆಹ್ತಾ ಆಗಲೇ ಸಾವನ್ನಪ್ಪಿದ್ದರು.
ಮತ್ತಷ್ಟು ಓದಿ: ಮಧ್ಯರಾತ್ರಿ ಊಟ ಆರ್ಡರ್, ಕೆಳಗೆ ಬನ್ನಿ ಅಂದ್ರೂ ಬಾರದ ಗ್ರಾಹಕ, ತಾನೇ ತಿಂದ ಜೊಮ್ಯಾಟೊ ಏಜೆಂಟ್
ಸುಮಾರು 10 ದಿನಗಳ ಹಿಂದೆ ಟ್ರಕ್ ಹಳ್ಳಕ್ಕೆ ಬಿದ್ದಾಗಲೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮೊನಿಂದರ್ ಆರೋಪಿಸಿದರು. ಶುಕ್ರವಾರ ರಾತ್ರಿ ಸೆಕ್ಟರ್ 150 ರ ಬಳಿ ಈ ದುರಂತ ಘಟನೆ ನಡೆದಿದ್ದು, ಟೆಕ್ಕಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆ ತಿರುವಿನ ಬಳಿ ಇರುವ ನೀರು ತುಂಬಿದ ನಿರ್ಮಾಣ ಗುಂಡಿಗೆ ಡಿಕ್ಕಿ ಹೊಡೆದಿದೆ.
ಆ ಸ್ಥಳದಲ್ಲಿ ಸರಿಯಾದ ಬ್ಯಾರಿಕೇಡಿಂಗ್, ಎಚ್ಚರಿಕೆ ಫಲಕಗಳು ಮತ್ತು ಬೆಳಕಿನ ಕೊರತೆ ಇದೆ ಎಂದು ವರದಿಯಾಗಿದೆ.ಮೆಹ್ತಾ ಅವರ ಕಿರುಚಾಟ ಕೇಳಿ ಆ ದಾರಿಯಲ್ಲಿ ಹೋಗುತ್ತಿದ್ದ ಕೆಲವರು ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ಕಾರು ಸಂಪೂರ್ಣವಾಗಿ ಮುಳುಗಿತ್ತು.
ಸುಮಾರು ಐದು ಗಂಟೆಗಳ ರಕ್ಷಣಾ ಪ್ರಯತ್ನದ ಟೆಕ್ಕಿ ಮತ್ತೆ ಕಾರನ್ನು ಕಂದಕದಿಂದ ಹೊರತೆಗೆಯಲಾಯಿತು. ಮೆಹ್ತಾ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಘಟನೆಯ ನಂತರ, ಮೆಹ್ತಾ ಅವರ ಕುಟುಂಬವು ದೂರು ದಾಖಲಿಸಿದ್ದು, ಅಧಿಕಾರಿಗಳು ಸರ್ವಿಸ್ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳನ್ನು ಅಳವಡಿಸಿಲ್ಲ ಅಥವಾ ಚರಂಡಿಗಳನ್ನು ಮುಚ್ಚಿಲ್ಲ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ