Odisha Train Accident: 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭ, ಟ್ರೇನ್​ಗೆ ನಮಸ್ಕರಿಸಿದ ಸಚಿವ ಅಶ್ವಿನಿ ವೈಷ್ಣವ್

ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿ 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ.

Follow us
|

Updated on:Jun 05, 2023 | 7:58 AM

ನವದೆಹಲಿ: ಒಡಿಶಾದ ಬಾಲಾಸೋರ್ (Balasore) ಜಿಲ್ಲೆಯಲ್ಲಿ ಶುಕ್ರವಾರ (ಜೂ.2) ರಾತ್ರಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ (Odisha Train Accident) 275 ಜನ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತ ಸಂಭವಿಸಿದ 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ. ಹಾಳಾಗಿದ್ದ ಹಳಿ ದುರಸ್ತಿ ಕಾರ್ಯ ಶರವೇಗದಲ್ಲಿ ಮುಗಿದಿದ್ದು, ನಿನ್ನೆ (ಜೂ.04) ರಾತ್ರಿ 11 ಗಂಟೆ ಸುಮಾರಿಗೆ ಬಹಾನಾಗ ಹಳಿ ಮೇಲೆ ಮೊದಲಿಗೆ ಗೂಡ್ಸ್​​ ರೈಲುಗಳ ಸಂಚಾರ ಆರಂಭವಾಯಿತು. ವಿಶಾಖಪಟ್ಟಣಂ-ರೋರ್ಕೆಲಾ ಗೂಡ್ಸ್​ ರೈಲು ಸಂಚಾರ ಆರಂಭವಾಗಿದ್ದು, ಈ ವೇಳೆ ಸ್ಥಳದಲ್ಲೇ ಇದ್ದ ರೈಲ್ವೇ ಸಚಿವ ಅಶ್ವೀನಿ ವೈಷ್ಣವ (Ashwini Vaishnaw) ರೈಲಿಗೆ ನಮಸ್ಕರಿಸಿದ್ದು, ವಿಶೇಷವಾಗಿತ್ತು.

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ

ಬಹನಾಗಾ ರೈಲು ನಿಲ್ದಾಣದ ಬಳಿ 3 ರೈಲು ಮಾರ್ಗಗಳಿದ್ದವು, ಕೋಲ್ಕತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈವ್​ನಲ್ಲಿ ನಿನ್ನೆ (ಜೂ.02) ಸಂಜೆ 7.30ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್, (ರೈಲು ಸಂಖ್ಯೆ 12841) ಒಡಿಶಾದ ಬಹನಗಾ ಬಜಾರ್‌ನಲ್ಲಿರುವ ರೈಲು ನಿಲ್ದಾಣದ ಬಳಿ ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಮೊದಲು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ ಮೂರನೇ ರೈಲು ಮಾರ್ಗದ ಮೇಲೂ ಬಿದ್ದಿದ್ದವು. ಕೆಲ ಸಮಯದ ಬಳಿಕ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬೆಂಗಳೂರು-ಹೌರಾ ಎಕ್ಸಪ್ರೆಸ್​ (ರೈಲು ಸಂಖ್ಯೆ 12864) ಸಹ ಹಳಿತಪ್ಪಿದ್ದ ಕೋರಮಂಡಲ್​​ನ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು.

ಇದನ್ನೂ ಓದಿ: ರೈಲುದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ನಾವು ಶಿಕ್ಷಣ ಕೊಡುತ್ತೇವೆ: ಉದ್ಯಮಿ ಗೌತಮ್ ಅದಾನಿ ಘೋಷಣೆ

ದುರಂತ ಸಂಭವಿಸಿದ ಕೂಡಲೇ ರಕ್ಷಣಾ ತಂಡಗಳು ಕ್ಷಿಪ್ರವಾಗಿ ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ನೂರಾರು ಜೀವಗಳನ್ನು ಉಳಿಸಿದ್ದಾರೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್ ಹಾಗೂ ಹಲವು ರೈಲ್ವೆ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದು ಗಮನ ಸೆಳೆಯಿತು. ಘಟನಾ ಸ್ಥಳದಲ್ಲಿ ಬಹುತೇಕ ಎಲ್ಲವನ್ನೂ ತೆರವುಗೊಳಿಸಿ ಸಂಚಾರಕ್ಕೆ ಟ್ರ್ಯಾಕ್​ಗಳನ್ನು ಅನುವು ಮಾಡಿಕೊಡಲಾಗಿದೆ.

ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು- ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ

ರೈಲು ಅಪಘಾತ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲು ರೈಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು. ‘ಅಪಘಾತ ಘಟನೆಯ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಲು ರೈಲ್ವೆ ನಿರ್ದರಿಸಿದೆ’ ಎಂದು ಸಚಿವ ವೈಷ್ಣವ್ ಅವರು ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 am, Mon, 5 June 23