Health Ministry Budget Webinar: ‘ಪ್ರತಿ ಹಳ್ಳಿ, ಜಿಲ್ಲೆಗಳಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶ’: ಪ್ರಧಾನಿ ಮೋದಿ

| Updated By: shivaprasad.hs

Updated on: Feb 26, 2022 | 10:47 AM

PM Modi Speech: ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯವು ಆಯೋಜಿಸಿರುವ ವೆಬಿನಾರ್​ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಉದ್ಘಾಟಿಸಿ ಮಾತನಾಡಿದ್ದಾರೆ.

Health Ministry Budget Webinar: ‘ಪ್ರತಿ ಹಳ್ಳಿ, ಜಿಲ್ಲೆಗಳಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶ’: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಹೊಸದಿಲ್ಲಿ: ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (Union health and family welfare ministry) ಆಯೋಜಿಸಿರುವ ವೆಬಿನಾರ್​ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ (ಫೆ.26) ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಪ್ರಧಾನಿ, ‘‘ಆರೋಗ್ಯದ ಜೊತೆಗೆ ಪ್ರತಿಯೊಬ್ಬರ ಕ್ಷೇಮದ ಕುರಿತೂ ನಾವು ಗಮನ ಹರಿಸಿದ್ದೇವೆ. ಬಜೆಟ್​ನಲ್ಲಿ ಮೂರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ- ಆಧುನಿಕ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ವಿಸ್ತರಣೆ, ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಆಧುನಿಕ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು’ ಎಂದು ಪ್ರಧಾನಿ ಹೇಳಿದ್ದಾರೆ. ದೊಡ್ಡ ನಗರಗಳನ್ನೂ ಮೀರಿ ಆರೋಗ್ಯ ಮೂಲಸೌರ್ಕಯವನ್ನು ವೃದ್ಧಿಸಲು ನಾವು ಬಯಸುತ್ತೇವೆ ಎಂದಿರುವ ಪ್ರಧಾನಿ, ‘ಒಂದು ಭಾರತ, ಒಂದು ಆರೋಗ್ಯ’ ಎಂಬ ಮನೋಭಾವದೊಂದಿಗೆ ಬ್ಲಾಕ್, ಜಿಲ್ಲಾ ಮಟ್ಟದಲ್ಲಿ, ಗ್ರಾಮಗಳಲ್ಲಿ ಅಗತ್ಯ ಆರೋಗ್ಯ ಸೌಲಭ್ಯಗಳನ್ನು ತರಬೇಕು. ಖಾಸಗಿ ವಲಯವು ಅವುಗಳ ನಿರ್ವಹಣೆ ಮತ್ತು ಉನ್ನತೀಕರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಹೇಳಿದ್ದಾರೆ.

ಪ್ರಾಥಮಿಕ ಆರೋಗ್ಯ ರಕ್ಷಣೆ ಜಾಲವನ್ನು ಬಲಪಡಿಸಲು, 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣದ ಕೆಲಸವು ಪ್ರಗತಿಯಲ್ಲಿದೆ ಎಂದಿರುವ ಪ್ರಧಾನಿ, ಇಲ್ಲಿಯವರೆಗೆ 85,000 ಕ್ಕೂ ಹೆಚ್ಚು ಕೇಂದ್ರಗಳು ಸಾಮಾನ್ಯ ತಪಾಸಣೆ, ಲಸಿಕೆ ಮತ್ತು ಪರೀಕ್ಷೆಗಳ ಸೌಲಭ್ಯವನ್ನು ಒದಗಿಸುತ್ತಿವೆ. ಈ ಬಜೆಟ್‌ನಲ್ಲಿ ಮಾನಸಿಕ ಆರೋಗ್ಯ ಸೌಲಭ್ಯವನ್ನೂ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ, ನಾವು ಅದಕ್ಕೆ ಅನುಗುಣವಾಗಿ ನುರಿತ ಆರೋಗ್ಯ ವೃತ್ತಿಪರರನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ದೊಡ್ಡ ಹೆಚ್ಚಳ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ. ಇದೇ ವೇಳೆ ಪ್ರಧಾನಿ ವೈದ್ಯಕೀಯ ಶಿಕ್ಷಣವನ್ನು ವಿದೇಶಗಳಲ್ಲಿ ಅಭ್ಯಾಸ ಮಾಡದೇ ಇಲ್ಲಿಯೇ ಮಾಡುವಂತೆ ಮನವಿ ಮಾಡಿದರು.

ಪ್ರಧಾನಿ ಮೋದಿ ಭಾಷಣದ ಕುರಿತು ಎಎನ್​ಐ ಟ್ವೀಟ್:

ವೆಬಿನಾರ್​ನಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

ಬಜೆಟ್ ನಂತರದ ಘೋಷಣೆಗಳನ್ನು ನಿರ್ದಿಷ್ಟ ಅವಧಿಯೊಳಗೆ ಅನುಷ್ಠಾನಗೊಳಿಸುವ ವಿಧಾನವನ್ನು ಚರ್ಚಿಸುವ ದೃಷ್ಟಿಯಿಂದ ವೆಬಿನಾರ್ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಆಯುಷ್ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಸರ್ಬಾನಂದ ಸೋನೋವಾಲ್ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹೆಚ್ಚುವರಿ ಸಿಇಒ ಆಗಿರುವ ಪ್ರವೀಣ್ ಗೆಡಮ್ ಅವರ ಪ್ರಸ್ತುತಿಯ ನಂತರ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿಕೆ ಪೌಲ್ ಅವರು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕುರಿತು ಅಧಿವೇಶನವನ್ನು ನಡೆಸಲಿದ್ದಾರೆ.

ಇದನ್ನೂ ಓದಿ:

Ukraine Crisis: ಪುಟಿನ್ ನಡೆಯ ವಿರುದ್ಧ ತಿರುಗಿಬಿದ್ದ ಜಗತ್ತಿನ ಜನರು; ವಿಶ್ವದೆಲ್ಲೆಡೆ ಪ್ರತಿಭಟನೆ- ಫೋಟೋಗಳು ಇಲ್ಲಿವೆ

ಖೆಜುರಿ ಬಾಂಬ್​ ಸ್ಫೋಟ ಪ್ರಕರಣ; ಪಶ್ಚಿಮ ಬಂಗಾಳದ ಐದು ಪ್ರದೇಶಗಳಲ್ಲಿ ಎನ್​ಐಎ ರೇಡ್​​ !

Published On - 10:34 am, Sat, 26 February 22