PM Modi in Jharkhand: ಬೈದ್ಯನಾಥ್ ಧಾಮಕ್ಕೆ ಸಂಪರ್ಕ ಕಲ್ಪಿಸುವ ದೇವಘರ್ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ

| Updated By: ಸುಷ್ಮಾ ಚಕ್ರೆ

Updated on: Jul 12, 2022 | 10:24 AM

ಪ್ರಧಾನಿ ನರೇಂದ್ರ ಮೋದಿ ಅವರು ಮೇ 2018ರಲ್ಲಿ ದೇವಘರ್ ವಿಮಾನ ನಿಲ್ದಾಣದ ಭೂಮಿಪೂಜೆ ನೆರವೇರಿಸಿದ್ದರು. 650 ಎಕರೆ ವಿಸ್ತೀರ್ಣದ ವಿಮಾನ ನಿಲ್ದಾಣವನ್ನು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

PM Modi in Jharkhand: ಬೈದ್ಯನಾಥ್ ಧಾಮಕ್ಕೆ ಸಂಪರ್ಕ ಕಲ್ಪಿಸುವ ದೇವಘರ್ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ
ನರೇಂದ್ರ ಮೋದಿ
Image Credit source: Hindustan Times
Follow us on

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜಾರ್ಖಂಡ್‌ನ ದೇವಘರ್‌ನಲ್ಲಿ 16,835 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ದೇವಘರ್ ವಿಮಾನ ನಿಲ್ದಾಣವನ್ನೂ ಇಂದು ಲೋಕಾರ್ಪಣೆ ಮಾಡಲಿದ್ದಾರೆ. 1,100 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆಯ (All India Institute of Medical Sciences – AIIMS) ದೇವಘರ್ ಶಾಖೆಯು ಇದೇ ವೇಳೆ ದೇಶಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ದೇವಘರ್ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ತಮ್ಮ ಜಾರ್ಖಂಡ್ ಭೇಟಿಯ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಮೋದಿ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಬೈದ್ಯನಾಥ್‌ಗೆ ಯಾತ್ರಿಗಳ ಭೇಟಿಯನ್ನು ಈ ವಿಮಾನ ನಿಲ್ದಾಣವು ಸುಗಮಗೊಳಿಸಲಿದೆ ಎಂದು ಹೇಳಿದ್ದಾರೆ. ಕೊಲ್ಕತ್ತಾದಿಂದ ಬರಲಿರುವ ಇಂಡಿಗೊ ವಿಮಾನವು ದೇವಘರ್‌ನಲ್ಲಿ ಇಂದು ಇಳಿಯಲಿದೆ. ಅಂತರ್ದೇಶೀಯ ಸಂಪರ್ಕ ಹೆಚ್ಚಿಸುವ ಬದ್ಧತೆಯ ಭಾಗವಾಗಿ ನಮ್ಮ ಸಂಸ್ಥೆಯು ಕೊಲ್ಕತ್ತಾ-ದೇವಘರ್‌ ಮಾರ್ಗದಲ್ಲಿ ವಿಮಾನ ಯಾನ ಆರಂಭಿಸುತ್ತಿದೆ ಎಂದು ಇಂಡಿಗೊ ಹೇಳಿದೆ.

ಇದನ್ನೂ ಓದಿ: PM Modi Unveils National Emblem: ನೂತನ ಸಂಸತ್​ ಭವನದ ಮೇಲೆ ನರೇಂದ್ರ ಮೋದಿಯಿಂದ ಬೃಹತ್ ರಾಷ್ಟ್ರ ಲಾಂಛನ ಅನಾವರಣ

ಪ್ರಧಾನಿ ನರೇಂದ್ರ ಮೋದಿ ಅವರು ಮೇ 2018ರಲ್ಲಿ ದೇವಘರ್ ವಿಮಾನ ನಿಲ್ದಾಣದ ಭೂಮಿಪೂಜೆ ನೆರವೇರಿಸಿದ್ದರು. 650 ಎಕರೆ ವಿಸ್ತೀರ್ಣದ ವಿಮಾನ ನಿಲ್ದಾಣವನ್ನು 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಾಲ್ಕು ವಿಮಾನಗಳು ನಿಲ್ಲಲು ಅನುವು ಮಾಡಿಕೊಡುವ ಪಾರ್ಕಿಂಗ್ ಬೇಸ್‌, ಎರಡು ಕನ್‌ವೇಯರ್ ಬೆಲ್ಟ್ ಮತ್ತು ಭದ್ರತಾ ಉಪಕರಣಗಳನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ.

ಉತ್ತರ ಭಾರತದ ಜನಪ್ರಿಯ ಯಾತ್ರಾ ಸ್ಥಳವಾಗಿರುವ ಬೈದ್ಯನಾಥ್ ಧಾಮಕ್ಕೆ ದೇವಘರ್ ವಿಮಾನ ನಿಲ್ದಾಣವು ಸಂಪರ್ಕ ಕಲ್ಪಿಸುತ್ತದೆ. ದೇಶದ ವಿವಿಧೆಡೆಯಿಂದ ಪ್ರತಿವರ್ಷ ಲಕ್ಷಾಂತರ ಜನರು ಬೈದ್ಯನಾಥ್ ಯಾತ್ರೆಗೆ ಬರುತ್ತಾರೆ. ಬೈದ್ಯನಾಥ್ ಧಾಮದಲ್ಲಿ ಮುಂದಿನ ವಾರದಿಂದ ವಾರ್ಷಿಕ ಶ್ರಾವಣಿ ಮೇಳವು ಆರಂಭವಾಗಲಿದೆ. ಬಾಬಾ ಧಾಮ್‌ದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಗೊಡ್ಡ ಲೋಕಸಭಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. 11.5 ಕಿಲೋಮೀಟರ್‌ ಉದ್ದದ ರೋಡ್‌ ಶೋದಲ್ಲಿ ಪಾಲ್ಗೊಂಡ ನಂತರ ಮೋದಿ ಅವರು “ಜನ ಲೋಕಸಭಾ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಇದನ್ನೂ ಓದಿ: ಇಂದು ದೇವೇಂದ್ರ ಫಡ್ನವಿಸ್- ಏಕನಾಥ್ ಶಿಂಧೆಯಿಂದ ಪ್ರಧಾನಿ ಮೋದಿ ಭೇಟಿ; ಅಂತಿಮವಾಗುತ್ತಾ ಸಚಿವರ ಪಟ್ಟಿ?

2019ರ ನಂತರ ಮೋದಿ ಅವರು ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಸತತ ಆರೋಪ ಮಾಡುತ್ತಿರುವ ದುಬೆ ಅವರಿಗೆ ಈ ಮೂಲಕ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವುದು ಮೋದಿ ಅವರ ಭೇಟಿಯ ರಾಜಕೀಯ ಉದ್ದೇಶ. ಗಣಿಹಗರಣದಲ್ಲಿ ಸಿಲುಕಿರುವ ಹೇಮಂತ್ ಸೊರೆನ್ ವಿರುದ್ಧ ತನಿಖೆ ಚಾಲ್ತಿಯಲ್ಲಿದೆ. ಅವರ ಅತ್ಯಾಪ್ತ ಪಂಕಜ್ ಮಿಶ್ರಾ ಅವರನ್ನು ಜಾರಿ ನಿರ್ದೇಶನಾಲಯ (Enforcement Directorate – ED) ವಿಚಾರಣೆಗೆ ಒಳಪಡಿಸಿದೆ. ಕಳೆದ ವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಿಶ್ರಾ ಅವರಿಗೆ ಸೇರಿದ 12ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿ, 5.32 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Published On - 10:23 am, Tue, 12 July 22