TV9 Kannada National PM Narendra Modi inaugurates, lays foundation stones of projects worth over rs20,000 crore in Tamil Nadu
ತಮಿಳುನಾಡಿನಲ್ಲಿ ₹20,000 ಕೋಟಿಗೂ ಅಧಿಕ ಮೊತ್ತದ ಯೋಜನೆ ಉದ್ಘಾಟಿಸಿದ ಮೋದಿ
“ಭಾರತೀದಾಸನ್ ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವ ಸಮಾರಂಭದಲ್ಲಿ ಇಲ್ಲಿಗೆ ಆಗಮಿಸಿರುವುದು ನನಗೆ ವಿಶೇಷವಾಗಿದೆ. 2024 ರಲ್ಲಿ ಇದು ನನ್ನ ಮೊದಲ ಸಾರ್ವಜನಿಕ ಸಂವಾದವಾಗಿದೆ" ಎಂದು ಭಾರತಿದಾಸನ್ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
Updated on:
Jan 02, 2024 | 2:17 PM
ಚೆನ್ನೈ ಜನವರಿ 02: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ತಮಿಳುನಾಡಿನ (Tamilnadu) ತಿರುಚಿರಾಪಳ್ಳಿಯಲ್ಲಿ (Tiruchirappalli International Airport) ವಿಮಾನಯಾನ, ರೈಲು, ರಸ್ತೆ, ತೈಲ ಮತ್ತು ಅನಿಲ, ಹಡಗು ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ₹ 20,000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಅದೇ ವೇಳೆ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಮೋದಿ ಉದ್ಘಾಟಿಸಿದ್ದಾರೆ.
₹1100 ಕೋಟಿಗೂ ಅಧಿಕ ವೆಚ್ಚದಲ್ಲಿ ಎರಡು ಹಂತದ ಟರ್ಮಿನಲ್ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ವಾರ್ಷಿಕವಾಗಿ 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಹೊಂದಿದ್ದು ಪೀಕ್ ಅವರ್ಗಳಲ್ಲಿ ಸುಮಾರು 3,500 ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO) ಅಧಿಕೃತ ಪ್ರಕಟಣೆ ತಿಳಿಸಿದೆ.
VIDEO | PM Modi attends an event to lay foundation stone and inaugurate several development works in Tiruchirappalli, Tamil Nadu. pic.twitter.com/XTpxmnRRFi
“ಹೊಸ ಟರ್ಮಿನಲ್ ಅತ್ಯಾಧುನಿಕ ಸೌಕರ್ಯಗಳು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ವೈಶಿಷ್ಟ್ಯಗಳನ್ನು ಹೊಂದಿದೆ” ಎಂದು ಪ್ರಕಟಣೆ ಹೇಳಿದೆ. ತಿರುಚಿರಾಪಳ್ಳಿ ತಲುಪಿದ ಪ್ರಧಾನಿ ಮೋದಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ರಾಜ್ಯಪಾಲ ಆರ್ ಎನ್ ರವಿ ಬರಮಾಡಿಕೊಂಡರು. ಭಾರತೀದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭದಲ್ಲಿಯೂ ಮೋದಿ ಭಾಗವಹಿಸಿದ್ದಾರೆ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ ವಿಶ್ವವಿದ್ಯಾನಿಲಯಕ್ಕೆ ಹೆಸರಿಸಲಾದ ಕವಿ ಭಾರತಿದಾಸನ್ ಅವರ ‘ಪುತಿಯದೊರು ಉಲಗಂ ಸೇವೋಂ’ ತಮಿಳು ಪದ್ಯಗಳನ್ನು ಉಲ್ಲೇಖಿಸಿ, ಇದು ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯ, ಇದು ಹೊಸತೊಂದು ಜಗತ್ತನ್ನು ಸೃಷ್ಟಿಸುವುದು ಎಂದರ್ಥ ಎಂದು ಹೇಳಿದರು.
ಭಾರತೀಯ ಯುವಕರು ಈಗಾಗಲೇ ಅಂತಹ ಜಗತ್ತನ್ನು ಸೃಷ್ಟಿಸುತ್ತಿದ್ದಾರೆ. ಭಾರತೀಯ ವಿಜ್ಞಾನಿಗಳು ಚಂದ್ರಯಾನ-3 ನಂತಹ ಕಾರ್ಯಾಚರಣೆಗಳ ಮೂಲಕ ವಿಶ್ವ ಭೂಪಟದಲ್ಲಿದ್ದಾರೆ. ‘ನಮ್ಮ ನವೋದ್ಯಮಿಗಳು 2014 ರಲ್ಲಿ 4,000 ಪೇಟೆಂಟ್ಗಳು ಇದ್ದು,ಈಗ ಅದು 50,000 ಕ್ಕೆ ಏರಿದೆ ಎಂದಿದ್ದಾರೆ
ಪ್ರಧಾನಮಂತ್ರಿಯವರು ಜನವರಿ 2-3 ರಿಂದ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳಿಗೆ ಎರಡು ದಿನಗಳ ಭೇಟಿಯಲ್ಲಿದ್ದಾರೆ.
ತಿರುಚಿರಾಪಳ್ಳಿ: ಭಾರತಿದಾಸನ್ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿಯವರ ಭಾಷಣದ ಮುಖ್ಯಾಂಶಗಳು
ಸುಂದರವಾದ ತಮಿಳುನಾಡಿನಲ್ಲಿ ಮತ್ತು ಯುವಜನರ ನಡುವೆ ಇರುವುದಕ್ಕೆ ನನಗೆ ಸಂತೋಷವಾಗಿದೆ. ಘಟಿಕೋತ್ಸವದಲ್ಲಿ ಇಲ್ಲಿಗೆ ಬರುವ ಸೌಭಾಗ್ಯವನ್ನು ಪಡೆದ ಮೊದಲ ಪ್ರಧಾನಿ ನಾನು. ಇಂದು ಇಲ್ಲಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ನಾನು ಅಭಿನಂದಿಸುತ್ತೇನೆ.
“ನೀವು ಕಲಿಯುವ ವಿಜ್ಞಾನವು ನಿಮ್ಮ ಹಳ್ಳಿಯ ರೈತನಿಗೆ ಸಹಾಯ ಮಾಡುತ್ತದೆ, ನೀವು ಕಲಿಯುವ ತಂತ್ರಜ್ಞಾನವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನೀವು ಕಲಿಯುವ ವ್ಯಾಪಾರ ನಿರ್ವಹಣೆಯು ವ್ಯವಹಾರಗಳನ್ನು ನಡೆಸಲು ಸಹಾಯ ಮಾಡುತ್ತದೆ ಮತ್ತು ಇತರರಿಗೆ ಆದಾಯದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ. ನೀವು ಕಲಿಯುವ ಅರ್ಥಶಾಸ್ತ್ರವು ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಒಂದು ರೀತಿಯಲ್ಲಿ, ಇಲ್ಲಿನ ಪ್ರತಿಯೊಬ್ಬ ಪದವೀಧರರು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ರಚಿಸಲು ಸಹಾಯ ಮಾಡಬಹುದು.
ಭಾರತವು ಪ್ರಮುಖ ಆರ್ಥಿಕತೆಗಳೊಂದಿಗೆ ಹಲವಾರು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಒಪ್ಪಂದಗಳು ನಮ್ಮ ಸರಕು ಮತ್ತು ಸೇವೆಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತದೆ. ಅವರು ನಮ್ಮ ಯುವಕರಿಗೆ ಲೆಕ್ಕವಿಲ್ಲದಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಾರೆ. ಇದು G20 ನಂತಹ ಸಂಸ್ಥೆಗಳನ್ನು ಬಲಪಡಿಸುವುದಾಗಲೀ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುತ್ತಿರುವುದಾಗಲೀ ಅಥವಾ ಜಾಗತಿಕ ಪೂರೈಕೆ ಸರಪಳಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುವುದೇ ಆಗಲಿ, ಪ್ರತಿ ಜಾಗತಿಕ ಪರಿಹಾರದ ಭಾಗವಾಗಿ ಭಾರತವನ್ನು ಸ್ವಾಗತಿಸಲಾಗುತ್ತಿದೆ.
ಪೇಟೆಂಟ್ಗಳ ಸಂಖ್ಯೆ 2014 ರಲ್ಲಿ ಸುಮಾರು 4,000 ಆಗಿತ್ತು. ಈಗ ಸುಮಾರು 50,000 ಆಗಿದೆ. ಇದು ನಮ್ಮ ನವೋದ್ಯಮಿಗಳ ಸಾಮರ್ಥ್ಯ . ನಮ್ಮ ಸಂಗೀತಗಾರರು ಮತ್ತು ಕಲಾವಿದರು ನಿರಂತರವಾಗಿ ನಮ್ಮ ದೇಶಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತರುತ್ತಿದ್ದಾರೆ. ನಮ್ಮ ಮಾನವೀಯತೆಯ ವಿದ್ವಾಂಸರು ಹಿಂದೆಂದಿಗಿಂತಲೂ ಭಾರತದ ಕಥೆಯನ್ನು ಜಗತ್ತಿಗೆ ಪ್ರದರ್ಶಿಸುತ್ತಿದ್ದಾರೆ.
“ಪ್ರತಿಯೊಂದು ವಲಯದಲ್ಲೂ ಹೊಸ ಭರವಸೆಯಿಂದ ಎಲ್ಲರೂ ನಿಮ್ಮನ್ನು ನೋಡುತ್ತಿರುವ ಸಮಯದಲ್ಲಿ ನೀವು ಜಗತ್ತಿಗೆ ಕಾಲಿಡುತ್ತಿದ್ದೀರಿ. ಯೌವನ ಎಂದರೆ ಶಕ್ತಿ. ಇದರರ್ಥ ವೇಗ, ಕೌಶಲ್ಯ ಮತ್ತು ಪ್ರಮಾಣದಲ್ಲಿ ಕೆಲಸ ಮಾಡುವ ಸಾಮರ್ಥ್ಯ.
“ಕಳೆದ ಕೆಲವು ವರ್ಷಗಳಲ್ಲಿ, ನಾವು ನಿಮಗೆ ಅನುಕೂಲವಾಗುವಂತೆ ವೇಗ ಮತ್ತು ಪ್ರಮಾಣದಲ್ಲಿ ನಿಮ್ಮನ್ನು ಹೊಂದಿಸಲು ಕೆಲಸ ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ, ವಿಮಾನ ನಿಲ್ದಾಣಗಳ ಸಂಖ್ಯೆಯು 74 ರಿಂದ ಸುಮಾರು 150 ಕ್ಕೆ ದ್ವಿಗುಣಗೊಂಡಿದೆ. ತಮಿಳುನಾಡು ಚಂದದ ಕರಾವಳಿಯನ್ನು ಹೊಂದಿದೆ. ಹಾಗಾಗಿ ಭಾರತದ ಪ್ರಮುಖ ಬಂದರುಗಳ ಒಟ್ಟು ಸರಕು ನಿರ್ವಹಣೆ ಸಾಮರ್ಥ್ಯವು 2014 ರಿಂದ ದ್ವಿಗುಣಗೊಂಡಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ.
ತಮಿಳುನಾಡು: ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಯವರ ಭಾಷಣದ ಮುಖ್ಯಾಂಶಗಳು
2024 ರ ವರ್ಷವು ಎಲ್ಲರಿಗೂ ಶಾಂತಿ ಮತ್ತು ಸಮೃದ್ಧವಾಗಿರಲಿ ಎಂದು ನಾನು ಬಯಸುತ್ತೇನೆ. 2024 ರಲ್ಲಿ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವು ತಮಿಳುನಾಡಿನಲ್ಲಿ ನಡೆಯುತ್ತಿರುವುದು ಒಂದು ವಿಶೇಷವಾಗಿದೆ. ಇಂದು ಸುಮಾರು ₹ 20,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳು ತಮಿಳುನಾಡಿನ ಪ್ರಗತಿಯನ್ನು ಬಲಪಡಿಸುತ್ತವೆ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ.
ಪ್ರವಾಹ ಮತ್ತು ನಷ್ಟವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ನಾವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿನ ಜನರೊಂದಿಗೆ ನಿಂತಿದೆ. ಸಂತ್ರಸ್ತ ಕುಟುಂಬಗಳ ಸ್ಥಿತಿಯಿಂದ ನಾನು ತುಂಬಾ ಭಾವುಕನಾಗಿದ್ದೇನೆ.
2023 ರ ಕೊನೆಯ ಕೆಲವು ವಾರಗಳು ತಮಿಳುನಾಡಿನ ಅನೇಕ ಜನರಿಗೆ ಕಷ್ಟಕರವಾಗಿತ್ತು. ಭಾರೀ ಮಳೆಯಿಂದಾಗಿ ನಾವು ನಮ್ಮ ಅನೇಕ ಸಹ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವೂ ಸಂಭವಿಸಿದೆ.
ಕೆಲವು ದಿನಗಳ ಹಿಂದೆ ನಾವು ವಿಜಯಕಾಂತ್ ಅವರನ್ನು ಕಳೆದುಕೊಂಡಿದ್ದೇವೆ. ಅವರು ಸಿನಿಮಾ ಜಗತ್ತಿನಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲೂ ಕ್ಯಾಪ್ಟನ್ ಆಗಿದ್ದರು. ತಮ್ಮ ಸಿನಿಮಾದ ಮೂಲಕ ಜನಮನ ಗೆದ್ದಿದ್ದರು. ರಾಜಕಾರಣಿಯಾಗಿ, ಅವರು ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಇರಿಸುತ್ತಾರೆ. ಅವರಿಗೆ ನನ್ನ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ.
ತಮಿಳುನಾಡಿನ ಮತ್ತೊಬ್ಬ ಪುತ್ರ ಡಾ.ಎಂ.ಎಸ್.ಸ್ವಾಮಿನಾಥನ್ ಅವರನ್ನೂ ನಾನು ನೆನಪಿಸಿಕೊಳ್ಳುತ್ತೇನೆ. ನಮ್ಮ ದೇಶಕ್ಕೆ ಆಹಾರ ಭದ್ರತೆಯನ್ನು ಖಾತರಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ವರ್ಷ ನಾವು ಅವರನ್ನು ಕಳೆದುಕೊಂಡಿದ್ದೇವೆ.
ಭಾರತವು ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆಪಡುತ್ತದೆ. ನನಗೆ ಅನೇಕ ತಮಿಳು ಸ್ನೇಹಿತರಿದ್ದರು ಮತ್ತು ನಾನು ಅವರಿಂದ ತಮಿಳು ಸಂಸ್ಕೃತಿಯ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ಜಗತ್ತಿನಲ್ಲಿ ಎಲ್ಲಿಗೆ ಹೋದರೂ ತಮಿಳುನಾಡಿನ ಬಗ್ಗೆ ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ. ಹೊಸ ಸಂಸತ್ ಭವನದಲ್ಲಿ ಪವಿತ್ರ ಸೆಂಗೋಲ್ ಅನ್ನು ಸ್ಥಾಪಿಸಲಾಗಿದೆ, ತಮಿಳು ಪರಂಪರೆಯು ದೇಶಕ್ಕೆ ನೀಡಿದ ಉತ್ತಮ ಆಡಳಿತದ ಮಾದರಿಯಿಂದ ಸ್ಫೂರ್ತಿ ಪಡೆಯುವ ಪ್ರಯತ್ನವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Tue, 2 January 24
Rashmi Kallakatta
ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ